....ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವರ್ಷ೦ಪ್ರತಿಯ ವಾಡಿಕೆಯ೦ತೆ ನಡೆಯಲಿರುವ ಭಜನಾ ಸಪ್ತಾಹವು ಅಗಸ್ಟ್ 18ರಿ೦ದ ಆರ೦ಭವಾಗಲಿದೆ...126ನೇ ವರ್ಷದ ಭಜನಾ ಸಪ್ತಾಹ ಇದಾಗಿದೆ...
NEET leak ಹಗರಣ ತನಿಖೆಯಲ್ಲಿ ಮೇಜರ್ ಟ್ವಿಸ್ಟ್; 3 NTAಯ ವಿಷಯ ತಜ್ಞರಿಂದಲೇ ಪ್ರಶ್ನೆ ಪತ್ರಿಕೆ ಸೋರಿಕೆ
ನವದೆಹಲಿ: ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ಮೂವರು ವಿಷಯ ತಜ್ಞರ ಕೈವಾಡದ ಕುರಿತು ತನಿಖಾಧಿಕಾರಿಗಳು ಪತ್ತೆ ಮಾಡಿದ್ದಾರೆ.
ಸಿಬಿಐ ಸಲ್ಲಿಸಿರುವ ಆರೋಪಪಟ್ಟಿ ಪ್ರಕಾರ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ಮೂವರು ವಿಷಯ ತಜ್ಞರಾದ ರಸಾಯನಶಾಸ್ತ್ರದ ಪಿ.ವಿ. ಕುಲಕರ್ಣಿ, ಭೌತಶಾಸ್ತ್ರದ ಮನೀಷಾ ಸಂಜಯ್ ಹವಾಲ್ದಾರ್ ಹಾಗೂ ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರದ ಮನೀಷಾ ಗುರುನಾಥ್ ಮಾಂಧರೆ ಅವರು NEET ಪ್ರಶ್ನೆಪತ್ರಿಕೆ ಸೋರಿಕೆಯ ಪ್ರಮುಖ ಮೂಲಗಳಾಗಿದ್ದರು ಎನ್ನಲಾಗಿದೆ.
ಸಾರ್ವಜನಿಕ ಪರೀಕ್ಷೆಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಇತರ ಅಕ್ರಮ ವಿಧಾನಗಳ ಬಳಕೆಯಿಂದ ಉದ್ಭವಿಸುವ ಕ್ರಿಮಿನಲ್ ಪ್ರಕರಣಗಳ ವಿಚಾರಣೆ ನಡೆಸುವ ವಿಶೇಷ ತ್ವರಿತ ನ್ಯಾಯಾಲಯದ ಮುಂದೆ ಸಂಸ್ಥೆ ಇತ್ತೀಚೆಗೆ ತನ್ನ ಅಂತಿಮ ವರದಿಯನ್ನು ಸಲ್ಲಿಸಿದೆ.
ತನಿಖೆಯ ವೇಳೆ, ಈ ಮೂವರು ತಜ್ಞರಿಗೆ ಅನುವಾದ ಮತ್ತು ಮರುಅನುವಾದದ ಸಂದರ್ಭದಲ್ಲಿ ಕರಡು ಕೆಲಸಕ್ಕಾಗಿ ಗೌಪ್ಯ ವಿಭಾಗದೊಳಗೆ ಖಾಲಿ ಹಾಳೆಗಳನ್ನು ನೀಡಲಾಗಿತ್ತು ಎಂಬುದು ಬೆಳಕಿಗೆ ಬಂದಿದೆ.
ಪ್ರಶ್ನೆಪತ್ರಿಕೆ ಸೋರಿಕೆಯ ಪ್ರಮುಖ ಆರೋಪಿ ಎಂದು ಹೇಳಲಾಗಿರುವ ಪಿ.ವಿ. ಕುಲಕರ್ಣಿ ಈ ಹಾಳೆಗಳನ್ನು ಬಳಸಿ ರಸಾಯನಶಾಸ್ತ್ರದ ಎಲ್ಲಾ 135 ಪ್ರಶ್ನೆಗಳನ್ನು ಸಂಕ್ಷಿಪ್ತವಾಗಿ ಹಾಗೂ ಅವುಗಳ ಉತ್ತರದ ಆಯ್ಕೆಗಳೊಂದಿಗೆ ಸಣ್ಣ ಚೀಟಿಗಳಲ್ಲಿ ಬರೆದುಕೊಂಡು, ಅವುಗಳನ್ನು ಯಾರಿಗೂ ತಿಳಿಯದಂತೆ ಹೊರಗೆ ತೆಗೆದುಕೊಂಡು ಹೋಗಿದ್ದರು ಎಂದು ಆರೋಪ ಪಟ್ಟಿಯಲ್ಲಿ ತಿಳಿಸಲಾಗಿದೆ.
NTAಯ ಗೌಪ್ಯ ವಿಭಾಗಕ್ಕೆ ತಜ್ಞರು ಪ್ರವೇಶಿಸುವಾಗ ಅಥವಾ ಹೊರಬರುವಾಗ ಯಾವುದೇ ತಪಾಸಣೆ ಅಥವಾ ದೇಹ ತಪಾಸಣೆ ನಡೆಸಲಾಗುತ್ತಿರಲಿಲ್ಲ ಎಂದು ಆರೋಪಪಟ್ಟಿಯಲ್ಲಿ ಹೇಳಲಾಗಿದೆ. ಕುಲಕರ್ಣಿ ಸುಲಭವಾದ ಪ್ರಶ್ನೆಗಳನ್ನು ನೆನಪಿಟ್ಟುಕೊಂಡು, ಹೋಟೆಲ್ಗೆ ಮರಳಿದ ಬಳಿಕ ಅವುಗಳನ್ನು ಬರೆದುಕೊಂಡಿದ್ದರು ಎಂದು ಅದು ತಿಳಿಸಿದೆ.
NTAಯ ಸಸ್ಯಶಾಸ್ತ್ರದ ಇಂಗ್ಲಿಷ್ನಿಂದ ಮರಾಠಿಗೆ ಅನುವಾದಕಿ ಹಾಗೂ ಪ್ರಾಣಿಶಾಸ್ತ್ರದ ಮರುಅನುವಾದಕಿಯಾಗಿದ್ದ ಮನೀಷಾ ಮಾಂಧರೆ, ದಿನದ ಕೆಲಸ ಮುಗಿಸಿ ಹೋಟೆಲ್ ಕೊಠಡಿಗೆ ಮರಳಿದ ಬಳಿಕ NCERT ಪಠ್ಯಪುಸ್ತಕಗಳಲ್ಲಿನ ಸಂಬಂಧಿತ ಪ್ಯಾರಾಗಳನ್ನು ಗುರುತಿಸುತ್ತಿದ್ದರು ಎಂದು ಆರೋಪಿಸಲಾಗಿದೆ.