ವಯನಾಡಿನಲ್ಲಿ ಮತ್ತೆ ಭಾರೀ ಭೂಕುಸಿತ: ಇಬ್ಬರು ಕಾರ್ಮಿಕರು ಜೀವಂತ ಸಮಾಧಿ, 30 ಮಂದಿ ನಾಪತ್ತೆ...ಹಾಸನದಲ್ಲಿ ಮಳೆ ಆರ್ಭಟಕ್ಕೆ ಶಿರಾಡಿಘಾಟ್ ವ್ಯಾಪ್ತಿಯಲ್ಲಿ ಭೂಕುಸಿತ: ವಾಹನಗಳ ಸಂಚಾರಕ್ಕಿಲ್ಲ ತೊಂದರೆ...
ಶೋಪಿಯಾನ್ ಎನ್ಕೌಂಟರ್: ಅಡಗಿಕುಳಿತಿದ್ದ LET ಉಗ್ರನ ಹೊಡೆದುರುಳಿಸಿದ ಸೇನಾಪಡೆ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಕಳೆದ ಐದು ದಿನಗಳಿಂದ ನಡೆಯುತ್ತಿದ್ದ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಲಷ್ಕರ್-ಇ-ತೊಯ್ಬಾ (LeT) ಉಗ್ರ ಸಂಘಟನೆಯ ಭಯೋತ್ಪಾದಕನನ್ನು ಭಾರತೀಯ ಸೇನಾಪಡೆ ಹೊಡೆದುರುಳಿಸಿದೆ.
ಹತ್ಯೆಗೀಡಾದ ಉಗ್ರನನ್ನು ನೆರೆಯ ಕುಲ್ಗಾಮ್ ಜಿಲ್ಲೆಯ ಮೋತಲ್ಹಾಮಾ ನಿವಾಸಿ ಜಾಕಿರ್ ಅಹ್ಮದ್ ಗನಿ (26) ಎಂದು ಗುರುತಿಸಲಾಗಿದೆ.
ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾತನಾಡಿ, ಹತ್ಯೆಗೀಡಾದ ಉಗ್ರ ಗನಿ ಸ್ವಯಂ ಘೋಷಿತ ಎಲ್ಇಟಿ ಕಮಾಂಡರ್ ಆಗಿದ್ದ. ಸೆಪ್ಟೆಂಬರ್ 27, 2023 ರಂದು ಡಯಲ್ಗಾಮ್ನಲ್ಲಿ ಶಟರ್ ಕೆಲಸಕ್ಕಾಗಿ ತಮ್ಮ ಮನೆಯಿಂದ ಹೊರ ಹೋಗಿದ್ದ ಆತ ಮತ್ತೆ ಮನೆಗೆ ವಾಪಸ್ಸಾಗಿರಲಿಲ್ಲ. ಕುಟುಂಬವು ಸಾಕಷ್ಟು ಹುಡುಕಾಟ ನಡೆಸಿದರು, ಪತ್ತೆಯಾಗಿರಲಿಲ್ಲ. ನಂತರ, ಅಕ್ಟೋಬರ್ 3, 2023 ರಂದು ಕುಲ್ಗಾಮ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಲಾಗಿತ್ತು.
ಈ ನಡುವೆ ಮನೆಯಿಂದ ತೆರಳಿದ್ದ ಗನಿ, ಎಲ್ಇಟಿಯ ಒಂದು ಶಾಖೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್ಎಫ್)ಗೆ ಸೇರ್ಪಡೆಗೊಂಡಿದ್ದ. ನಂತರ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಯ ವಿವಿಧ ನಿಬಂಧನೆಗಳ ಅಡಿಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಆತನ ಹೆಸರು ಸೇರ್ಪಡೆಗೊಂಡಿತ್ತು ಎಂದು ತಿಳಿಸಿದ್ದಾರೆ.
ಜುಲೈ 3ರಂದು ದಕ್ಷಿಣ ಕಾಶ್ಮೀರದ ಮಿಮಂದರ್ ಪ್ರದೇಶದ ದಟ್ಟ ತೋಟಗಳಲ್ಲಿ ಉಗ್ರರು ಅಡಗಿರುವ ಮಾಹಿತಿ ಲಭ್ಯವಾಗುತ್ತಿದ್ದಂತೆ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಆರಂಭಿಸಿದ್ದವು.
ಏಳು ಗ್ರಾಮಗಳನ್ನು ಒಳಗೊಂಡಿರುವ ಈ ಪ್ರದೇಶವನ್ನು ಭದ್ರತಾ ಪಡೆಗಳು ಸಂಪೂರ್ಣವಾಗಿ ಸುತ್ತುವರಿದು ಕಾರ್ಯಾಚರಣೆ ನಡೆಸಿದ್ದವು.
ಜಮ್ಮು-ಕಾಶ್ಮೀರ ಪೊಲೀಸ್, ಭಾರತೀಯ ಸೇನೆಯ 55 ಮತ್ತು 44 ರಾಷ್ಟ್ರಿಯ ರೈಫಲ್ಸ್ ಘಟಕಗಳು ಹಾಗೂ ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದವು. ಕಳೆದ ಐದು ದಿನಗಳಿಂದ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆಯುತ್ತಿತ್ತು. ಇದೀಗ ಅಡಗಿ ಕುಳಿತಿದ್ದ ಉಗ್ರನ ಹೊಡೆದುರುಳಿಸುವಲ್ಲಿ ಸೇನಾಪಡೆ ಯಶಸ್ವಿಯಾಗಿದೆ.
ಕಾರ್ಯಾಚರಣೆಯ ಯಶಸ್ಸನ್ನು ದೃಢಪಡಿಸಿರುವ ಜಮ್ಮು-ಕಾಶ್ಮೀರ ಪೊಲೀಸರು, ತಮ್ಮ ಅಧಿಕೃತ ಎಕ್ಸ್ (X) ಖಾತೆಯಲ್ಲಿ, “ಓಡಬಹುದು… ಆದರೆ ಅಡಗಿಕೊಳ್ಳಲು ಸಾಧ್ಯವಿಲ್ಲ. ಶೋಪಿಯಾನ್ನಲ್ಲಿ ಎಸ್ಒಜಿ, ರಾಷ್ಟ್ರಿಯ ರೈಫಲ್ಸ್ ಮತ್ತು ಸಿಆರ್ಪಿಎಫ್ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಲಷ್ಕರ್-ಎ-ತೊಯ್ಬಾ ಉಗ್ರನನ್ನು ಹೊಡೆದುರುಳಿಸಲಾಗಿದೆ” ಎಂದು ಹೇಳಿದ್ದಾರೆ.
ಈ ಮೊದಲು ಕಾರ್ಯಾಚರಣೆಯಲ್ಲಿ ಸಿಲುಕಿದ್ದ ಉಗ್ರರನ್ನು ಲತೀಫ್ ಮತ್ತು ಜಾಕಿರ್ ಎಂದು ಅಧಿಕಾರಿಗಳು ಗುರುತಿಸಿದ್ದರು. ಆದರೆ, ಎನ್ಕೌಂಟರ್ನಲ್ಲಿ ಹತ್ಯೆಯಾದ ಉಗ್ರನ ಗುರುತನ್ನು ಇನ್ನೂ ಅಧಿಕೃತವಾಗಿ ಬಹಿರಂಗಪಡಿಸಲಾಗಿಲ್ಲ.
ಪ್ರದೇಶದಲ್ಲಿ ಇನ್ನೂ ಶೋಧ ಕಾರ್ಯಾಚರಣೆ ಮುಂದುವರಿದಿದ್ದು, ಮತ್ತಷ್ಟು ಉಗ್ರರು ಅಡಗಿರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಕಟ್ಟೆಚ್ಚರ ವಹಿಸಿವೆ.