.....ಶ್ರೀ ಕೃಷ್ಣ ಜನ್ಮಾಷ್ಠಮಿ:ಇ೦ದು ವಿಟ್ಲಪಿ೦ಡಿಯ ಸ೦ಭ್ರಮ-ಲಕ್ಷಾ೦ತರ ಮ೦ದಿಗೆ ಮಧ್ಯಾಹ್ನದ ಅನ್ನಪ್ರಸಾದ ವಿತರಣೆ-ರಥಬೀದಿಯಲ್ಲಿ ಮು೦ಜಾನೆಯಿ೦ದ ಲಕ್ಷಾ೦ತರಮ೦ದಿ ಉತ್ಸವದಲ್ಲಿ ಭಾಗಿ-ಎಲ್ಲಾ ರಸ್ತೆಗಳಲ್ಲಿ ವಾಹನ ಸ೦ಚಾರ ಬ೦ದ್........

ಧರ್ಮಸ್ಥಳ ಸಮಾಧಿ ಪ್ರಕರಣ: 13ನೇ ಸ್ಥಳದಲ್ಲಿ GPR ತಂತ್ರಜ್ಞಾನದಿಂದ SIT ತೀವ್ರ ಶೋಧ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂಳಲಾಗಿದೆ ಎಂಬ ಆರೋಪದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(ಎಸ್‌ಐಟಿ) ‘ಸ್ಪಾಟ್ ಸಂಖ್ಯೆ 13’ರಲ್ಲಿ ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್(ಜಿಪಿಆರ್) ತಂತ್ರಜ್ಞಾನ ಬಳಸಿ ತೀವ್ರ ಶೋಧ ನಡೆಸುತ್ತಿದೆ.

ಮೂಲಗಳ ಪ್ರಕಾರ, ಸ್ಥಳವನ್ನು ಸ್ಕ್ಯಾನ್ ಮಾಡಲು ಮತ್ತು ಭೂಮಿಯಲ್ಲಿ ಹೂತುಹೋಗಿರುವ ಯಾವುದೇ ವಸ್ತುಗಳನ್ನು ಪತ್ತೆಹಚ್ಚಲು ಎಸ್‌ಐಟಿ ರಾಡಾರ್ ಇಮೇಜಿಂಗ್ ಹೊಂದಿದ ಹೆಚ್ಚಿನ ಸಾಮರ್ಥ್ಯದ ಡ್ರೋನ್ ಅನ್ನು ಸಹ ನಿಯೋಜಿಸಿದೆ.

ಸಾಕ್ಷಿ ದೂರುದಾರ ಗುರುತಿಸಿದ 13ನೇ ಸ್ಥಳದ ಸುತ್ತ ಮಾತ್ರವಲ್ಲದೇ, ನೇತ್ರಾವತಿ ಅಜಿಕುರಿ ರಸ್ತೆಯ ಸುಮಾರು ನೂರು ಮೀಟರ್ ಗೂ ಅಧಿಕ ದೂರದ ವರೆಗೂ ರಸ್ತೆ ಬದಿಯಲ್ಲಿ ಜಿಪಿಆರ್ ಸ್ಕ್ಯಾನಿಂಗ್ ಕಾರ್ಯ ನಡೆಸಲಾಗಿದೆ.

ಎಸ್‌ಐಟಿ ಮುಖ್ಯಸ್ಥ ಪ್ರಣಬ್ ಮೊಹಂತಿ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಗುತ್ತಿದ್ದು, ಎಸ್ಐಟಿ ಹಿರಿಯ ಅಧಿಕಾರಿಗಳು, ಪುತ್ತೂರು ಸಹಾಯಕ ಆಯಕ್ತ ಸ್ಟೆಲ್ಲಾ ವರ್ಗೀಸ್ ಹಾಗೂ ಇತರ ತಜ್ಞ ಅಧಿಕಾರಿಗಳ ಸುಮಾರು 60 ಮಂದಿಯ ತಂಡ 13ನೇ ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿದೆ.

ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ದೂರುದಾರರು ಮತ್ತು ಅವರ ವಕೀಲರ ಸಮ್ಮುಖದಲ್ಲಿ ಜಿಪಿಆರ್ ಪರೀಕ್ಷೆಯನ್ನು ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಕ್ರಮವು ಪ್ರಕರಣಕ್ಕೆ ಸಂಬಂಧಿಸಿದ ನಿರ್ಣಾಯಕ ಸಾಕ್ಷ್ಯಗಳನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.

ಅನಾಮಿಕ ದೂರುದಾರ ಬಹಳ ಸ್ಪಷ್ಟವಾಗಿ ಹೆಣ ಹೂತಿದ್ದೇನೆ ಎಂದು ಹೇಳಿದ ಕಾರಣಕ್ಕಾಗಿ ಎಸ್ ಐಟಿಯು 12 ಸ್ಥಳಗಳನ್ನು ಅಗೆದಿದೆ. ಆದರೆ ಅಸ್ಥಿಪಂಜರದ ಕುರುಹು ಕೇವಲ 1 ಕಡೆ ಮಾತ್ರ ಸಿಕ್ಕಿದೆ. ಈ ಎಲ್ಲಾ ಪಾಯಿಂಟ್ ಗಳನ್ನು ಸದ್ಯ ಇನ್ನೂ ಕೂಡಾ ರಕ್ಷಿಸಲಾಗಿದೆ.

ಹೀಗಾಗಿ ಉಳಿದೆಡೆ ಶವ ಪತ್ತೆಯಾಗದ ಕಾರಣ ದೂರುದಾರನ ಪರ ವಕೀಲರು ಜಿಪಿಆರ್ ಬಳಸುವಂತೆ ಒತ್ತಾಯಿಸಿದ್ದಾರೆ. ಹೀಗಾಗಿ 13 ನೇ ಪಾಯಿಂಟ್ ಸೇರಿದಂತೆ ಉಳಿದ 12 ಸ್ಪಾಟ್ ಗಳಲ್ಲೂ ಮತ್ತೊಮ್ಮೆ ಅಸ್ಥಿಪಂಜರದ ಕುರುಹು ಶೋಧ ಮಾಡುವ ಸಾಧ್ಯತೆ ಇದೆ.

No Comments

Leave A Comment