.....ಶ್ರೀ ಕೃಷ್ಣ ಜನ್ಮಾಷ್ಠಮಿ:ಇ೦ದು ವಿಟ್ಲಪಿ೦ಡಿಯ ಸ೦ಭ್ರಮ-ಲಕ್ಷಾ೦ತರ ಮ೦ದಿಗೆ ಮಧ್ಯಾಹ್ನದ ಅನ್ನಪ್ರಸಾದ ವಿತರಣೆ-ರಥಬೀದಿಯಲ್ಲಿ ಮು೦ಜಾನೆಯಿ೦ದ ಲಕ್ಷಾ೦ತರಮ೦ದಿ ಉತ್ಸವದಲ್ಲಿ ಭಾಗಿ-ಎಲ್ಲಾ ರಸ್ತೆಗಳಲ್ಲಿ ವಾಹನ ಸ೦ಚಾರ ಬ೦ದ್........
15 ನೇ ಹಣಕಾಸು ಆಯೋಗದ ಅನುದಾನ: ಕರ್ನಾಟಕ, ತ್ರಿಪುರಾಕ್ಕೆ ಕೇಂದ್ರದಿಂದ ರೂ. 436 ಕೋಟಿಗೂ ಹೆಚ್ಚು ಹಣ ಬಿಡುಗಡೆ!
ನವದೆಹಲಿ: ಕೇಂದ್ರ ಸರ್ಕಾರ 2024-25ರ ಆರ್ಥಿಕ ವರ್ಷದಲ್ಲಿ ತ್ರಿಪುರಾ ಮತ್ತು ಕರ್ನಾಟಕದ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ 15ನೇ ಹಣಕಾಸು ಆಯೋಗದ ಅನುದಾನದ ಎರಡನೇ ಕಂತನ್ನು ಬಿಡುಗಡೆ ಮಾಡಿದೆ. ಕರ್ನಾಟಕ ರಾಜ್ಯದಾದ್ಯಂತ ಗ್ರಾಮೀಣ ಸ್ಥಳೀಯ ಸಂಸ್ಥೆಗಳನ್ನು ಪ್ರೋತ್ಸಾಹಿಸಲು 5,375 ಅರ್ಹ ಗ್ರಾಮ ಪಂಚಾಯಿತಿಗಳಿಗೆ 404.9678 ಕೋಟಿ ರೂ.ಗಳ ಸಂಯೋಜಿತ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.
ತ್ರಿಪುರಾಕ್ಕೆ ರೂ. 31.1259 ಕೋಟಿ ರೂ.ಗಳನ್ನು ಹಂಚಿಕೆ ಮಾಡಿದೆ, ಇದು ರಾಜ್ಯದ ಎಲ್ಲಾ ಬ್ಲಾಕ್ ಪಂಚಾಯತ್ಗಳು, ಜಿಲ್ಲಾ ಪಂಚಾಯತ್ಗಳು ಮತ್ತು ಸಾಂಪ್ರದಾಯಿಕ ಸ್ಥಳೀಯ ಸಂಸ್ಥೆಗಳ ಜೊತೆಗೆ 589 ಅರ್ಹ ಗ್ರಾಮ ಪಂಚಾಯಿತಿಗಳಿಗೆ ಪ್ರಯೋಜನವನ್ನು ಒದಗಿಸಿದೆ.
ಈ ಅನುದಾನಗಳು ಪಂಚಾಯತ್ ರಾಜ್ ಸಂಸ್ಥೆಗಳನ್ನು (ಪಿಆರ್ಐ) ಸಶಕ್ತಗೊಳಿಸಲಿದ್ದು, ಸಂವಿಧಾನದ ಹನ್ನೊಂದನೇ ಅನುಸೂಚಿಯಲ್ಲಿ ವಿವರಿಸಲಾದ 29 ವಿಷಯಗಳ ಅಡಿಯಲ್ಲಿ ಸ್ಥಳ-ನಿರ್ದಿಷ್ಟ ಅಗತ್ಯಗಳನ್ನು ಪರಿಹರಿಸಲು ಅನುವು ಮಾಡಿಕೊಡುತ್ತದೆ. ಈ ಹಣವನ್ನು ಸಂಬಳ ಮತ್ತು ಸ್ಥಾಪನೆಯ ವೆಚ್ಚಗಳನ್ನು ಹೊರತುಪಡಿಸಿ ಅಭಿವೃದ್ಧಿ ಉಪಕ್ರಮಗಳಿಗೆ ಬಳಸಲಾಗುತ್ತದೆ. ಅನುದಾನಗಳನ್ನು ಎರಡು ವರ್ಗಗಳಾಗಿ ವಿಂಗಡಿಸಲಾಗಿದೆ.
ಸಂಯೋಜಿತ ಅನುದಾನಗಳು: ಇವುಗಳನ್ನು ವೈವಿಧ್ಯಮಯ ಸಮುದಾಯ-ನಿರ್ದಿಷ್ಟ ಅಗತ್ಯಗಳಿಗಾಗಿ ಬಳಸಬಹುದು. ಸ್ಥಳೀಯ ಮೂಲಸೌಕರ್ಯ ಮತ್ತು ಅಭಿವೃದ್ಧಿ ಯೋಜನೆಗಳನ್ನು ವೃದ್ಧಿಸುವ ಗುರಿಯನ್ನು ಇವು ಹೊಂದಿವೆ.
ನಿರ್ದಿಷ್ಟ ಉದ್ದೇಶದ ಅನುದಾನಗಳು: ನೈರ್ಮಲ್ಯಕ್ಕೆ ಸಂಬಂಧಿಸಿದ ನಿರ್ಣಾಯಕ ಅಂಶಗಳಿಗೆ (ಬಯಲು ಮಲವಿಸರ್ಜನೆ ಮುಕ್ತ ಸ್ಥಿತಿಯ ನಿರ್ವಹಣೆ, ತ್ಯಾಜ್ಯ ನಿರ್ವಹಣೆ ಮತ್ತು ಮಲ ಕೆಸರು ನಿರ್ವಹಣೆ ಸೇರಿದಂತೆ) ಹಾಗೂ ಕುಡಿಯುವ ನೀರು (ಮಳೆನೀರು ಕೊಯ್ಲು ಮತ್ತು ನೀರಿನ ಮರುಬಳಕೆ ಸೇರಿದಂತೆ) ಉದ್ದೇಶಕ್ಕೆ ನಿರ್ದಿಷ್ಟವಾಗಿ ನಿಗದಿಪಡಿಸಲಾಗಿದೆ.
ಈ ನಿಧಿಗಳ ಬಿಡುಗಡೆಯು ಸಂಪನ್ಮೂಲಗಳ ವಿಕೇಂದ್ರೀಕರಣ ಮತ್ತು ಸ್ಥಳೀಯ ಸರ್ಕಾರಗಳನ್ನು ಸಬಲೀಕರಣಗೊಳಿಸುವ ಮಹತ್ವದ ಹೆಜ್ಜೆಯಾಗಿದೆ. ಪಂಚಾಯತ್ ರಾಜ್ ಸಚಿವಾಲಯ ಮತ್ತು ಜಲಶಕ್ತಿ ಸಚಿವಾಲಯದಿಂದ ನಿರ್ವಹಿಸಲ್ಪಡುವ ಹದಿನೈದನೇ ಹಣಕಾಸು ಆಯೋಗದ ಅನುದಾನವನ್ನು ತಳಮಟ್ಟದ ಅಭಿವೃದ್ಧಿಯನ್ನು ಹೆಚ್ಚಿಸಲು, ಸ್ಥಳೀಯ ಆಡಳಿತವನ್ನು ಸುಧಾರಿಸಲು ಹಾಗೂ ಗ್ರಾಮೀಣ ಸಮುದಾಯಗಳ ವಿಶಿಷ್ಟ ಅಗತ್ಯಗಳಿಗೆ ಅನುಗುಣವಾಗಿ ಉಪಕ್ರಮಗಳನ್ನು ಬೆಂಬಲಿಸಲು ವಿನ್ಯಾಸಗೊಳಿಸಲಾಗಿದೆ.