ಬೆಂಗಳೂರಿನಲ್ಲಿ ವರುಣಾರ್ಭಟ: ಹಲವು ಕಡೆ 1 ಗಂಟೆಗೂ ಹೆಚ್ಚು ಕಾಲ ಸುರಿದ ಮಳೆ; ಸಂಚಾರ ಅಸ್ತವ್ಯಸ್ತ...ಅ. 15ರಿಂದ UPI ಪಾವತಿಗೆ ಶುಲ್ಕ ಜಾರಿ: 2,000ಕ್ಕಿಂತ ಹೆಚ್ಚಿನ UPI ಪಾವತಿಗಳಿಗೆ ಶೇ. 0.4ರಷ್ಟು MDR ಶುಲ್ಕ!...
ರೆಂಜಾಳದಲ್ಲಿ ಭೂಕುಸಿತದ ಭೀತಿ: ಎರಡು ಮನೆಗಳಿಗೆ ಅಪಾಯದ ತೂಗುಗತ್ತಿ
ರೆಂಜಾಳ, ಆ.9: ಕೇರಳದ ವಯನಾಡ್ ನಲ್ಲಿ ಭೂಕುಸಿತದ ಭೀಕರ ದೃಶ್ಯಗಳನ್ನು ನೋಡಿದವರಿಗೆ ಕಾರ್ಕಳ ತಾಲೂಕಿನ ರೆಂಜಾಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಪೆರಾಲ್ದಬೆಟ್ಟು ಹೇಡ್ಮೆಯಲ್ಲಿ ಆಗಸ್ಟ್ ಮೊದಲ ವಾರದಲ್ಲಿ ಕಾಣಿಸಿಕೊಂಡಿರುವ ಭೂಕುಸಿತದ ಮುನ್ಸೂಚನೆ ಅದೇ ರೀತಿಯ ಅಪಾಯದ ತೂಗುಗತ್ತಿಯಂತೆ ಗೋಚರಿಸಿದರೆ ಆಶ್ಚರ್ಯವಿಲ್ಲ.
ಗುಡ್ಡದ ಬದಿಯಲ್ಲಿ ಕಳೆದ 80 ವರ್ಷಗಳಿಂದ ಮನೆ ಮಾಡಿಕೊಂಡು ವಾಸಿಸುತ್ತಿರುವ ಹರಿಪ್ರಸಾದ್ ಹಾಗೂ ಅವರ ಅಕ್ಕ ಸುಮಿತ್ರಾ ಅವರ ಕುಟುಂಬದ ಮನೆ ಈಗ ಭೂಕುಸಿತದ ನೇರ ಅಪಾಯವನ್ನು ಎದುರಿಸುತಿದ್ದು ಎರಡೂ ಕುಟುಂಬಗಳನ್ನು ಸದ್ಯಕ್ಕೆ ಖಾಲಿ ಮಾಡಿಸಲಾಗಿದೆ. ಆಸುಪಾಸಿನ ಸುಮಾರು 14 ಮನೆಗಳಿಗೆ ಗ್ರಾಪಂನಿಂದ ನೋಟೀಸು ನೀಡಲಾಗಿದ್ದು ಖಾಲಿ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ಮನೆಯವರು ಹೇಳುತ್ತಾರೆ.
ಆದರೆ ಸದ್ಯಕ್ಕೆ ಅಪಾಯದಲ್ಲಿರುವುದು ಈ ಎರಡು ಮನೆಯವರು. 44 ವರ್ಷ ಪ್ರಾಯದ ಹರಿಪ್ರಸಾದ್ ಕೂಲಿ ಕೆಲಸ ಮಾಡಿ ಬದುಕು ಸಾಗಿಸುತಿದ್ದಾರೆ. ಅವರ ಕುಟುಂಬ ಒಟ್ಟಾಗಿ ಇಲ್ಲಿ 1.60 ಎಕರೆ ಭೂಮಿಯನ್ನು ಹೊಂದಿದೆ. ತಾಯಿ, ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಸಾಧಾರಣ ಹಂಚಿನ ಮನೆಯಲ್ಲಿ ವಾಸಿಸುವ ಹರಿಪ್ರಸಾದ್ರಂತೆ ಅಲ್ಲೇ ಪಕ್ಕದಲ್ಲಿ ಅಕ್ಕ ಸುಮಿತ್ರಾ ಅವರು ವಾಸಿಸುತ್ತಿದ್ದು ಅಲ್ಲೂ ಮೂವರು ಇದ್ದಾರೆ.
ಹರಿಪ್ರಸಾದ್ ಹೇಳುವಂತೆ ಕಳೆದ ಆಗಸ್ಟ್ 2ರ ರಾತ್ರಿ ಎಲ್ಲವೂ ಸಾಮಾನ್ಯವಾಗಿತ್ತು. ಆದರೆ ಮೂರರಂದು ಬೆಳಗ್ಗೆ ಎದ್ದು ನೋಡುವಾಗ ಅವರ ಮನೆಯಿಂದ 50 ಮೀ. ದೂರದಲ್ಲಿ ಸಮತಟ್ಟಾಗಿದ್ದ ನೆಲ ಒಮ್ಮಿಂದೊಮ್ಮೆಗೆ ಮೇಲಕ್ಕೆ ಎದ್ದಿದೆ. ನೆಲದೊಳಗಿದ್ದ, ಇವರು ತೆಗೆಯಲು ಅಸಾದ್ಯವೆಂದು ಬಿಟ್ಟಿದ್ದ ಕಲ್ಲುಬಂಡೆ ಸಹಿತ ಮಣ್ಣಿನ ರಾಶಿ ಮೇಲಕ್ಕೆ ಎದ್ದು ಬಂದಿತ್ತು.