....ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವರ್ಷ೦ಪ್ರತಿಯ ವಾಡಿಕೆಯ೦ತೆ ನಡೆಯಲಿರುವ ಭಜನಾ ಸಪ್ತಾಹವು ಅಗಸ್ಟ್ 18ರಿ೦ದ ಆರ೦ಭವಾಗಲಿದೆ...126ನೇ ವರ್ಷದ ಭಜನಾ ಸಪ್ತಾಹ ಇದಾಗಿದೆ...

ಉಡುಪಿ: ಬಸ್‌ ಡಿಕ್ಕಿ ಹೊಡೆದು ನಗರಸಭೆಯ ಮಾಜಿ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್ ಕೊಳ ಮೃತ್ಯು

ಉಡುಪಿ:ಉಡುಪಿ ಲಯನ್ಸ್ ವೃತ್ತದ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಉಡುಪಿ ನಗರಸಭೆಯ ಮಾಜಿ ಉಪಾಧ್ಯಕ್ಷೆ, ನಿಸ್ವಾರ್ಥ ಸಮಾಜ ಸೇವಕಿ ಲಕ್ಷ್ಮೀ ಮಂಜುನಾಥ್ ಅವರು ಶನಿವಾರ ದಾರುಣವಾಗಿ ಮೃತಪಟ್ಟಿದ್ದಾರೆ.
ನೈವೇದ್ಯ ಹೋಟೆಲ್ ಸಮೀಪದ ಲಯನ್ಸ್ ವೃತ್ತದ ಬಳಿ ಅವರು ರಸ್ತೆ ದಾಟುತ್ತಿದ್ದ ವೇಳೆಯಲ್ಲಿ, ವೇಗವಾಗಿ ಬಂದ ಖಾಸಗಿ ಬಸ್ಸೊಂದು ನೇರವಾಗಿ ಡಿಕ್ಕಿ ಹೊಡೆದಿದೆ.

ಉಡುಪಿಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಸ್ ಚಾಲಕರ ಬೇಜವಾಬ್ದಾರಿ, ಅತಿಯಾದ ಧಾವಂತ ಹಾಗೂ ಸ್ಪರ್ಧಾತ್ಮಕ ಚಾಲನೆಗೆ ಮತ್ತೊಂದು ಪ್ರತಿಭಾನ್ಮಿತ, ಸಕ್ರಿಯ ನಾಯಕಿ ಬಲಿಯಾಗಿದ್ದಾರೆ.

ಮಂಜುನಾಥ್ ಕೊಳ ಅವರ ಪತ್ನಿಯಾಗಿರುವ ಲಕ್ಷ್ಮೀ ಮಂಜುನಾಥ್ ಅವರು ಸರಳತೆ ಹಾಗೂ ಸೌಜನ್ಯಕ್ಕೆ ಹೆಸರುವಾಸಿಯಾಗಿದ್ದವರು.

ನಗರಸಭೆಯ ಉಪಾಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ ಅವಧಿಯಲ್ಲಿ ತಮ್ಮ ಅಪಾರ ಪ್ರಾಮಾಣಿಕತೆ, ಜನಪರ ಕಾಳಜಿ ಮತ್ತು ನಿಸ್ವಾರ್ಥ ಸೇವೆಯ ಮೂಲಕ ಪ್ರತಿಯೊಬ್ಬರ ಮನ ಗೆದ್ದಿದ್ದರು.

ಕೇವಲ ರಾಜಕೀಯ ಕ್ಷೇತ್ರದಲ್ಲಷ್ಟೇ ಅಲ್ಲದೆ, ಸಾಮಾಜಿಕ ಕಾರ್ಯಗಳಲ್ಲೂ ಸದಾ ಮುಂಚೂಣಿಯಲ್ಲಿದ್ದು, ಸಾರ್ವಜನಿಕರ ಪ್ರೀತಿ-ವಿಶ್ವಾಸಕ್ಕೆ ಪಾತ್ರರಾಗಿದ್ದರು.

ಮಾಹಿತಿ ತಿಳಿದು ಉಡುಪಿ ಸಂಚಾರಿ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಪಘಾತದ ಕುರಿತು ತನಿಖೆ ಆರಂಭಿಸಿದ್ದಾರೆ.

ಮೃತರ ನಿಧನಕ್ಕೆ ಜಿಲ್ಲಾ ಬಿಜೆಪಿ,ಬಿಜೆಪಿ ಮಹಿಳಾ ಮೋರ್ಚಾ,ನಗರಸಭೆಯ ಸದಸ್ಯರು ಹಾಗೂ ಮಾಜಿ ಶಾಸಕರು,ಹಾಲಿ ಶಾಸಕರುಗಳು, ಕರಾವಳಿಕಿರಣ ಡಾಟ್ ಕಾ೦, ಅಪಾರ ಅಭಿಮಾನಿಗಳು ಸ೦ತಾಪವನ್ನು ಸೂಚಿಸಿದ್ದಾರೆ.

No Comments

Leave A Comment