....ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವರ್ಷ೦ಪ್ರತಿಯ ವಾಡಿಕೆಯ೦ತೆ ನಡೆಯಲಿರುವ ಭಜನಾ ಸಪ್ತಾಹವು ಅಗಸ್ಟ್ 18ರಿ೦ದ ಆರ೦ಭವಾಗಲಿದೆ...126ನೇ ವರ್ಷದ ಭಜನಾ ಸಪ್ತಾಹ ಇದಾಗಿದೆ...
ಇಸ್ರೋದ ಸುಮಾರು 100 ವಿಜ್ಞಾನಿಗಳು ರಾಜೀನಾಮೆ; ಸಾಮೂಹಿಕ ನಿರ್ಗಮನಕ್ಕೆ ಕಡಿವಾಣ ಹಾಕಲು ಬಾಹ್ಯಾಕಾಶ ಇಲಾಖೆ ಮುಂದು!
ಭಾರತದಾದ್ಯಂತ ಇರುವ ಇಸ್ರೋದ (ISRO) ವಿವಿಧ ಕೇಂದ್ರಗಳ ಸುಮಾರು 100 ಉದ್ಯೋಗಿಗಳು ರಾಜೀನಾಮೆ ನೀಡಿದ್ದಾರೆ ಅಥವಾ ಸಂಸ್ಥೆಯನ್ನು ತೊರೆದಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ, ‘ಗಗನಯಾನ’ದಂತಹ ಮಹತ್ವದ ಪ್ರಮುಖ ರಾಷ್ಟ್ರೀಯ ಯೋಜನೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಜ್ಞಾನಿಗಳು ಮತ್ತು ಎಂಜಿನಿಯರ್ಗಳ ರಾಜೀನಾಮೆ ಹಾಗೂ ಸ್ವಯಂ ನಿವೃತ್ತಿಗೆ ಸಂಬಂಧಿಸಿದ ನಿಯಮಗಳನ್ನು ಕಠಿಣಗೊಳಿಸುವ ಆದೇಶವನ್ನು ಬಾಹ್ಯಾಕಾಶ ಇಲಾಖೆ ಹೊರಡಿಸಿದೆ.
ಬಾಹ್ಯಾಕಾಶ ಇಲಾಖೆ ಜಂಟಿ ಕಾರ್ಯದರ್ಶಿ (ಸಿಬ್ಬಂದಿ) ಎಸ್.ಆರ್. ರಾಜಶೇಖರ್ ಅವರ ಸಹಿಯೊಂದಿಗೆ ಜುಲೈ 14ರಂದು ಹೊರಡಿಸಲಾದ ಜ್ಞಾಪನ ಪತ್ರದಲ್ಲಿ, ‘ಇತ್ತೀಚಿನ ದಿನಗಳಲ್ಲಿ, ಪ್ರತಿಷ್ಠಿತ ‘ಗಗನಯಾನ’ ಹಾಗೂ ಇತರ ಪ್ರಮುಖ ಯೋಜನೆಗಳಲ್ಲಿ ಕೆಲಸ ಮಾಡುತ್ತಿರುವವರು ಸೇರಿದಂತೆ, ಇಸ್ರೋದ ‘ಗ್ರೂಪ್ ಎ’ ವೈಜ್ಞಾನಿಕ/ತಾಂತ್ರಿಕ ಸಿಬ್ಬಂದಿಯಿಂದ ಸ್ವಯಂ ನಿವೃತ್ತಿ ಮತ್ತು ರಾಜೀನಾಮೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮನವಿಗಳು ಬರುತ್ತಿರುವುದು ಕಂಡುಬಂದಿದೆ; ಇದು ರಾಷ್ಟ್ರೀಯ ಮಹತ್ವದ ಯೋಜನೆಗಳ ಅನುಷ್ಠಾನದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ’ ಎಂದು ತಿಳಿಸಲಾಗಿದೆ.
ಇಸ್ರೋ ಕೇಂದ್ರಗಳ ನಿರ್ದೇಶಕರು ಮತ್ತು ಘಟಕಗಳ ಮುಖ್ಯಸ್ಥರಿಗೆ ಕಳುಹಿಸಲಾದ ಜ್ಞಾಪನ ಪತ್ರವು, ಈ ವಿಷಯದತ್ತ ಗಮನಹರಿಸುವಂತೆ ಹಾಗೂ ‘ಗಗನಯಾನ’ ಅಥವಾ ಇತರ ಪ್ರಮುಖ ಯೋಜನೆಗಳು ಪೂರ್ಣಗೊಳ್ಳುವವರೆಗೂ, ಅವುಗಳಲ್ಲಿ ಕೆಲಸ ಮಾಡುತ್ತಿರುವ ‘ಗ್ರೂಪ್ ಎ’ನ ವೈಜ್ಞಾನಿಕ ಮತ್ತು ತಾಂತ್ರಿಕ ಸಿಬ್ಬಂದಿಯಿಂದ ಸ್ವಯಂ ನಿವೃತ್ತಿ ಅಥವಾ ರಾಜೀನಾಮೆಗೆ ಸಂಬಂಧಿಸಿದ ಯಾವುದೇ ಮನವಿಗಳನ್ನು ಸ್ವೀಕರಿಸದಂತೆ ಸೂಚಿಸಿದೆ.
‘ಗಗನಯಾನ ಹಾಗೂ ಇತರ ಪ್ರಮುಖ ಕಾರ್ಯಾಚರಣೆಗಳು ಅಥವಾ ಯೋಜನೆಗಳೊಂದಿಗೆ ಸಂಬಂಧ ಹೊಂದಿರುವ ವೈಜ್ಞಾನಿಕ ಮತ್ತು ತಾಂತ್ರಿಕ ಸಿಬ್ಬಂದಿಯ ಸ್ವಯಂ ನಿವೃತ್ತಿ ಮತ್ತು ರಾಜೀನಾಮೆ ಕೋರಿಕೆಗಳನ್ನು ಸದ್ಯ ಸ್ವೀಕರಿಸದಿರಲು ನಿರ್ಧರಿಸಲಾಗಿದೆ’ ಎಂದು ತಿಳಿಸಲಾಗಿದೆ.
ವೈಜ್ಞಾನಿಕ ಮತ್ತು ತಾಂತ್ರಿಕ ಸಿಬ್ಬಂದಿಯಿಂದ (ವಿಜ್ಞಾನಿಗಳು/ಎಂಜಿನಿಯರ್ಗಳು-ಎಸ್ಜಿ ಶ್ರೇಣಿ ಹಾಗೂ ಅದಕ್ಕಿಂತ ಕೆಳಗಿನ ಶ್ರೇಣಿಯವರೂ ಸೇರಿದಂತೆ) ಸ್ವಯಂ ನಿವೃತ್ತಿ ಮತ್ತು ರಾಜೀನಾಮೆಗಾಗಿ ಕೋರಿಕೆಗಳು ಬಂದಲ್ಲಿ, ಅಂತಿಮ ನಿರ್ಧಾರಕ್ಕಾಗಿ ಆಯಾ ಕೇಂದ್ರಗಳು ಅಥವಾ ಘಟಕಗಳ ಮುಖ್ಯಸ್ಥರ ಸ್ಪಷ್ಟ ಶಿಫಾರಸುಗಳೊಂದಿಗೆ ಅವುಗಳನ್ನು ಬಾಹ್ಯಾಕಾಶ ಇಲಾಖೆಗೆ (DoS) ಕಳುಹಿಸಬಹುದು ಎಂದು ತಿಳಿಸಿದೆ.
ಇಸ್ರೋ ಅಧ್ಯಕ್ಷ ವಿ. ನಾರಾಯಣನ್ ಅವರು ಸಿಬ್ಬಂದಿ ನಿರ್ಗಮನದ ವಿಷಯವನ್ನು ಒಪ್ಪಿಕೊಂಡರಾದರೂ, ಇದರಿಂದ ಸದ್ಯ ನಡೆಯುತ್ತಿರುವ ಕಾರ್ಯಕ್ರಮಗಳ ಮೇಲೆ ಉಂಟಾಗಬಹುದಾದ ಪರಿಣಾಮಗಳ ಕುರಿತಾದ ಆತಂಕ ನಿವಾರಿಸಲು ಪ್ರಯತ್ನಿಸಿದರು.
‘ಹೌದು, ಅನೇಕರು ಸಂಸ್ಥೆಯನ್ನು ತೊರೆಯುತ್ತಿದ್ದಾರೆ; ಇದು ಪ್ರತಿಯೊಂದು ಸಂಸ್ಥೆಯಲ್ಲೂ ನಡೆಯುವ ಸಹಜ ಪ್ರಕ್ರಿಯೆ. ನಮ್ಮ ಈ ಕ್ರಮವು ಕೇವಲ ಉದ್ಯೋಗಿಗಳನ್ನು ಉಳಿಸಿಕೊಳ್ಳುವುದಕ್ಕೆ ಮಾತ್ರವಲ್ಲ, ಬದಲಿಗೆ ಪ್ರಮುಖ ಯೋಜನೆಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದಕ್ಕೂ ಆಗಿದೆ. ಯಾರಾದರೂ ಹೋದರೆ, ಇನ್ನೊಬ್ಬರು ಆ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಾರೆ. ನಾವು ಈ ವಿಷಯದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತಿದ್ದೇವೆ’ ಎಂದು ಅವರು ಹೇಳಿದಾಗಿ ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.