ಗ್ರಾಹಕರಿಗೆ ಮತ್ತೊಂದು ಬರೆ: ಈ ಹಾಲಿನ ದರ ಏರಿಕೆ...NEET UG ಪ್ರಶ್ನೆ ಪತ್ರಿಕೆ ಸೋರಿಕೆ: ದೇಶಾದ್ಯಂತ ಸಿಬಿಐ ದಾಳಿ, ಐವರ ಬಂಧನ!...

ಉಡುಪಿ: GSB ಯುವಕ ಮಂಡಳಿ ; “ಉತ್ಕರ್ಷ”7 ದಿನಗಳ ಬೇಸಿಗೆ ಶಿಬಿರ ಸ೦ಪನ್ನ…

ಉಡುಪಿ: ಗೌಡ ಸಾರಸ್ವತ ಬ್ರಾಹ್ಮಣ ಯುವಕ ಮಂಡಳಿ ಹಾಗೂ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ತೆಂಕಪೇಟೆ ಉಡುಪ ಇದರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ “ಉತ್ಕರ್ಷ” ಏಳು ದಿನಗಳ ಬೇಸಿಗೆ ಶಿಬಿರವು ಮೇ 4 ರಿಂದ 10 ವರೆಗೆ ಜರಗಿತು.

ಮುಖ್ಯ ಅತಿಥಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಗೌರವಾಧ್ಯಕ್ಷ ವಿಶ್ವನಾಥ ಶೆಣೈ ದಂಪತಿಗಳು ದೀಪ ಬೆಳಗಿಸಿ ಮಕ್ಕಳ ನೀತಿ ಬೋಧನೆ ಪುಸ್ತಕ ಬಿಡುಗಡೆ ಗೊಳಿಸಿ ಬೇಸಿಗೆ ಶಿಬಿರ ಉದ್ಘಾಟಿಸಿ, ಇಂತಹ ಶಿಬಿರಗಳು ಇಂದಿನ ಮಕ್ಕಳಲ್ಲಿ ಭಾರತೀಯ ಸಂಸ್ಕೃತಿ, ಮೌಲ್ಯಗಳು ಹಾಗೂ ಜೀವನ ಕೌಶಲ್ಯಗಳನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಶುಭ ಹಾರೈಸಿದರು.

ಒಂದು ವಾರಗಳ ಕಾಲ ನಡೆದ ಈ ವಿಶೇಷ ಶಿಬಿರದಲ್ಲಿ ಮಕ್ಕಳ ಸರ್ವಾಂಗೀಣ ವ್ಯಕ್ತಿತ್ವ ವಿಕಾಸಕ್ಕೆ ಪೂರಕವಾಗುವ ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಭಜನೆ, ಶ್ಲೋಕ ಪಠಣ, ಯೋಗಾಭ್ಯಾಸ, ಕಥಾ ವಾಚನ, ವ್ಯಕ್ತಿತ್ವ ವಿಕಾಸ ತರಬೇತಿ, ಸಾಂಸ್ಕೃತಿಕ ಸ್ಪರ್ಧೆಗಳು ಹಾಗೂ ಸೃಜನಾತ್ಮಕ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಶಿಸ್ತು, ಆತ್ಮವಿಶ್ವಾಸ, ನಾಯಕತ್ವ ಗುಣ ಮತ್ತು ತಂಡಭಾವನೆ ಬೆಳೆಸುವ ಪ್ರಯತ್ನ ಮಾಡಲಾಯಿತು.

ಬೌದ್ಧಿಕ ಬೆಳವಣಿಗೆಯ ಜೊತೆಗೆ ಮಕ್ಕಳ ದೈಹಿಕ ಕ್ಷಮತೆ ಮತ್ತು ಚುರುಕುತನವನ್ನು ವೃದ್ಧಿಸುವ ಉದ್ದೇಶದಿಂದ ವಿವಿಧ ದೇಶಿ ಆಟಗಳ ಪರಿಚಯ ಮತ್ತು ತರಬೇತಿಯನ್ನು ಕೂಡ ನೀಡಲಾಯಿತು. ಸಂಪ್ರದಾಯಬದ್ಧ ಆಟಗಳ ಮೂಲಕ ಮಕ್ಕಳಲ್ಲಿ ಸಹಕಾರ ಮನೋಭಾವ, ಕ್ರೀಡಾಸ್ಫೂರ್ತಿ ಹಾಗೂ ಆರೋಗ್ಯಕರ ಜೀವನಶೈಲಿಯ ಅರಿವು ಮೂಡಿಸಲಾಯಿತು.

ಶಿಬಿರದ ಪ್ರಮುಖ ಆಕರ್ಷಣೆಯಾಗಿ ಮಾತೃಪೂಜನ ಕಾರ್ಯಕ್ರಮ ಭಕ್ತಿಭಾವದಿಂದ ನಡೆಯಿತು. ತಾಯಿಯ ಮಹತ್ವವನ್ನು ಮಕ್ಕಳಿಗೆ ಮನವರಿಕೆ ಮಾಡುವ ಈ ಕಾರ್ಯಕ್ರಮ ಎಲ್ಲರ ಮನಸೂರೆಗೊಂಡಿತು. ಅಲ್ಲದೆ ಶಿಬಿರಾರ್ಥಿಗಳ ಸಮೂಹಿಕ ಹುಟ್ಟುಹಬ್ಬ ಆಚರಣೆ ಸಂಭ್ರಮದಿಂದ ನೆರವೇರಿತು. ಮಕ್ಕಳಲ್ಲಿ ಒಗ್ಗಟ್ಟು ಮತ್ತು ಸಂತಸದ ವಾತಾವರಣ ನಿರ್ಮಾಣವಾಗುವಂತೆ ಕಾರ್ಯಕ್ರಮವನ್ನು ವಿನೂತನವಾಗಿ ಆಯೋಜಿಸಲಾಗಿತ್ತು.

ಇನ್ನೊಂದು ವಿಶೇಷ ಆಕರ್ಷಣೆಯಾಗಿ ಪುರಾಣ ಮತ್ತು ಇತಿಹಾಸ ಪ್ರಸಿದ್ಧ ವ್ಯಕ್ತಿಗಳ ವೇಷಭೂಷಣ ಧರಿಸಿ ಮಕ್ಕಳು ರ್ಯಾಂಪ್‌ವಾಕ್ ನಡೆಸಿದರು. ರಾಮಾಯಣ, ಮಹಾಭಾರತ ಹಾಗೂ ಭಾರತೀಯ ಇತಿಹಾಸದ ವಿವಿಧ ಪಾತ್ರಗಳ ವೇಷದಲ್ಲಿ ಮಕ್ಕಳು ಗಮನಸೆಳೆದರು. ಈ ಕಾರ್ಯಕ್ರಮವು ಮಕ್ಕಳಲ್ಲಿ ನಮ್ಮ ಪಾರಂಪರಿಕ ಸಂಸ್ಕೃತಿ ಮತ್ತು ಇತಿಹಾಸದ ಅರಿವು ಮೂಡಿಸುವಲ್ಲಿ ವಿಶೇಷ ಮೆಚ್ಚುಗೆಗೆ ಪಾತ್ರವಾಯಿತು.

ಶಿಬಿರವನ್ನು ಶ್ರೀಮತಿ ಶಕುಂತಲ ಆರ್. ಶೆಣೈ ಮತ್ತು ಅವರ ತಂಡ ಅತ್ಯಂತ ಸಮರ್ಪಕವಾಗಿ ನಡೆಸಿಕೊಟ್ಟರು
ಶಿಬಿರದ ಸಮಾರೋಪ ಸಮಾರಂಭವು ವಿಜೃಂಭಣೆಯಿಂದ ನಡೆಯಿತು.

ಉಷಾ ಪೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಕ್ಕಳ ಪ್ರತಿಭೆ ಮತ್ತು ಶಿಸ್ತುಬದ್ಧ ಪ್ರದರ್ಶನವನ್ನು ಶ್ಲಾಘಿಸಿದರು. ವಿಶ್ವಸ್ಥ ಮಂಡಳಿಯ ದಿನೇಶ್ ಪೈ ದಂಪತಿಗಳ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳು ನೃತ್ಯ, ಗಾಯನ, ಭಜನೆ ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿ ಪ್ರೇಕ್ಷಕರ ಮನಗೆದ್ದರು.

ದೇವಸ್ಥಾನದ ಆಡಳಿತ ಮೊಕ್ತೇಸರ ಗುಜ್ಜಾಡಿ ಪ್ರಭಾಕರ ನಾಯಕ್ , ಜಿ ಎಸ್ ಬಿ ಯುವಕ ಮಂಡಳಿಯ ನಿತೀಶ್ ಶೆಣೈ ಹಾಗೂ ಯುವಕ ಮಂಡಳಿಯ ಸದಸ್ಯರು, ವಿಶ್ವಸ್ಥರು, ಸ್ವಯಂಸೇವಕರು, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಭಾಗವಹಿಸಿದ ಎಲ್ಲಾ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಅಭಿನಂದಿಸಲಾಯಿತು.

“ಉತ್ಕರ್ಷ”ಶಿಬಿರವು ಕೇವಲ ಬೇಸಿಗೆ ಶಿಬಿರವಾಗಿರದೇ, ಮಕ್ಕಳಲ್ಲಿ ಸಂಸ್ಕೃತಿ, ಸಂಸ್ಕಾರ, ದೈಹಿಕ ಚಟುವಟಿಕೆ, ಮಾನವೀಯತೆ ಮತ್ತು ಆತ್ಮವಿಶ್ವಾಸವನ್ನು ಬೆಳೆಸುವ ಸಮಗ್ರ ವ್ಯಕ್ತಿತ್ವ ವಿಕಾಸ ಶಿಬಿರವಾಗಿ ಮೂಡಿಬಂದಿದೆ.

No Comments

Leave A Comment