....ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವರ್ಷ೦ಪ್ರತಿಯ ವಾಡಿಕೆಯ೦ತೆ ನಡೆಯಲಿರುವ ಭಜನಾ ಸಪ್ತಾಹವು ಅಗಸ್ಟ್ 18ರಿ೦ದ ಆರ೦ಭವಾಗಲಿದೆ...126ನೇ ವರ್ಷದ ಭಜನಾ ಸಪ್ತಾಹ ಇದಾಗಿದೆ...
ಹಿರಿಯ ಪತ್ರಕರ್ತ ಕೆ.ವಿ.ಶ್ರೀನಿವಾಸನ್ ನಿಧನ: ಸಿಎಂ ಸಿದ್ದರಾಮಯ್ಯ ಸಂತಾಪ
ಹುಣಸೂರು: ಪತ್ರಕರ್ತರ ಬಳಗದಲ್ಲಿ ಬ್ರದರ್ ಎಂದೇ ಹೆಸರಾಗಿದ್ದ ಹಿರಿಯ ಪತ್ರಕರ್ತ, ಗಾಂಧಿವಾದಿ ಕೆ.ವಿ.ಶ್ರೀನಿವಾಸನ್ (81) ಅವರು ಶುಕ್ರವಾರ ನಿಧನರಾಗಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಶ್ರೀನಿವಾಸನ್ ಅವರು ಶುಕ್ರವಾರ ಸಂಜೆ ಹುಣಸೂರು ನಗರದ ಕಲ್ಕುಣಿಕೆಯ ಸ್ವಗೃಹದಲ್ಲಿ ನಿಧನರಾಗಿದ್ದಾರೆಂದು ತಿಳಿದುಬಂದಿದೆ.
ಇವರ ಅಂತ್ಯಕ್ರಿಯೆ ಫೆ.7ರ ಶನಿವಾರ ಮಧ್ಯಾಹ್ನ 1 ಗಂಟೆಗೆ ಕಲ್ಕುಣಿಕೆ ಸರ್ಕಲ್ ಬಳಿಯ ಅವರ ತೋಟದಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಈ ನಡುವೆ ಶ್ರೀನಿವಾಸನ್ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂತಾಪ ಸೂಚಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಸಿಎಂ, ನಾಡಿನ ಹಿರಿಯ ಪತ್ರಕರ್ತ, ಪತ್ರಿಕಾ ವಲಯದಲ್ಲಿ ‘ಬ್ರದರ್’ ಎಂದೇ ಕರೆಯಲ್ಪಡುತ್ತಿದ್ದ ಗಾಂಧಿವಾದಿ ಹೋರಾಟಗಾರರೂ ಆದ ಕೆ.ವಿ.ಶ್ರೀನಿವಾಸನ್ ಅವರ ನಿಧನದಿಂದ ದುಃಖಿತನಾಗಿದ್ದೇನೆಂದು ಹೇಳಿದ್ದಾರೆ.
ಹುಣಸೂರು ಸಮೀಪದ ಕಲ್ಕುಣಿಕೆ ಗ್ರಾಮದವರಾದ ಶ್ರೀನಿವಾಸನ್ ಸರಳ ನಡೆ, ನುಡಿ, ಪ್ರಾಮಾಣಿಕತೆ ಮತ್ತು ವೃತ್ತಿ ಬದ್ಧತೆಯಿಂದ ಜನಾನುರಾಗಿಯಾಗಿದ್ದರು. ಸುದೀರ್ಘಕಾಲ ಮಾಧ್ಯಮರಂಗದಲ್ಲಿ ಸೇವೆ ಸಲ್ಲಿಸಿ ಇತ್ತೀಚೆಗೆ ವಿಶ್ರಾಂತ ಜೀವನ ನಡೆಸುತ್ತಿದ್ದರು. ಹಲವಾರು ಪತ್ರಕರ್ತರನ್ನು ರೂಪಿಸಿದ ಹಿರಿಮೆ ಅವರದ್ದಾಗಿತ್ತು.
ಮೈಸೂರಿನ ನಾರಾಯಣ ಶಾಸ್ತ್ರಿ ರಸ್ತೆಯ ಅನಾಥಾಲಯದಲ್ಲಿ ನಾಲ್ಕು ದಶಕಗಳ ಕಾಲ ಬಾಡಿಗೆ ಕೋಣೆಯಲ್ಲಿ ವಾಸಿಸುತ್ತಾ, ವೃತ್ತಿಜೀವನ ಸಾಗಿಸಿದ್ದು ಅವರ ಪ್ರಾಮಾಣಿಕತೆ ಮತ್ತು ದಕ್ಷತೆಗೆ ಹಿಡಿದ ಕನ್ನಡಿ. ಆತ್ಮೀಯರಾಗಿದ್ದ ಶ್ರೀನಿವಾಸನ್ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಕುಟುಂಬ ವರ್ಗಕ್ಕೆ ನನ್ನ ಸಂತಾಪಗಳು ಎಂದು ತಿಳಿಸಿದ್ದಾರೆ.