
ಇನ್ನಾದರೂ ದೇಶದ ಭದ್ರತೆ, ವಿದೇಶಾಂಗ ನೀತಿಯ ಸವಾಲುಗಳ ಕುರಿತು ಮುಕ್ತ ಚರ್ಚೆಗೆ ಪ್ರಧಾನಿ ಮೋದಿ ಒಪ್ಪುತ್ತಾರೆಯೇ? ಕಾಂಗ್ರೆಸ್
ನವದೆಹಲಿ: ವಿವಿಧ ದೇಶಗಳಿಗೆ ತೆರಳಿದ್ದ ಏಳು ಸಂಸದೀಯ ನಿಯೋಗಗಳ ಸದಸ್ಯರನ್ನು ಭೇಟಿಯಾಗಿರುವ ಪ್ರಧಾನಿ ನರೇಂದ್ರ ಮೋದಿ ಈಗ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಪಹಲ್ಗಾಮ್ ಮೇಲಿನ ದಾಳಿ ನಂತರ ಭವಿಷ್ಯದಲ್ಲಿ ದೇಶದ ಭದ್ರತೆ ಹಾಗೂ ವಿದೇಶಾಂಗ ನೀತಿಯ ಸವಾಲುಗಳ ಕುರಿತು ಮುಕ್ತ ಚರ್ಚೆಗೆ ಒಪ್ಪುತ್ತಾರೆಯೇ ಎಂದು ಕಾಂಗ್ರೆಸ್ ಬುಧವಾರ ಕೇಳಿದೆ.
ಚೀನಾ ಹಾಗೂ ಪಾಕಿಸ್ತಾನ ವಿಷಯದಲ್ಲಿ ಹಾಗೂ ಭಾರತದ ಭವಿಷ್ಯದ ಕಾರ್ಯತಂತ್ರದಲ್ಲಿ ಪ್ರಧಾನಿ ಮೋದಿ ಕನಿಷ್ಠ ಪಕ್ಷ ಒಂದು ಬಾರಿ ಸಭೆಯನ್ನಾದರೂ ನಡೆಸಲಿದ್ದಾರೆಯೇ ಅಥವಾ ಎಲ್ಲ ಪಕ್ಷಗಳ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಭೆ ನಡೆಸುತ್ತಾರೆಯೇ ಎಂದು ವಿಪಕ್ಷ ಕೇಳಿದೆ.
ಪಹಲ್ಗಾಮ್ ದಾಳಿ ಮತ್ತು ಆಪರೇಷನ್ ಸಿಂಧೂರ್ ನಂತರ ಭಯೋತ್ಪಾದನೆಯ ಪಿಡುಗನ್ನು ನಿರ್ಮೂಲನೆ ನಿಟ್ಟಿನಲ್ಲಿ ಭಾರತದ ನಿಲುವನ್ನು ಜಗತ್ತಿಗೆ ಸಾರಲು ಸರ್ವ ಪಕ್ಷ ನಿಯೋಗಗಳ ಸದಸ್ಯರನ್ನು ಪ್ರಧಾನಿ ಮೋದಿ ನಿನ್ನೆ ಭೇಟಿ ಮಾಡಿದರು.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಕಾಂಗ್ರೆಸ್ ಸಂವಹನದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಕನಿಷ್ಠ ಈಗಲಾದರೂ ಎಲ್ಲಾ ರಾಜಕೀಯ ಪಕ್ಷಗಳ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಭೆ ನಡೆಸುತ್ತಾರೆಯೇ ಎಂದು ಕೇಳಿದ್ದಾರೆ.
ಪಹಲ್ಗಾಮ್ ಮೇಲಿನ ದಾಳಿ ನಂತರ ಭವಿಷ್ಯದಲ್ಲಿ ದೇಶದ ಭದ್ರತೆ ಹಾಗೂ ವಿದೇಶಾಂಗ ನೀತಿಯ ಸವಾಲುಗಳ ಕುರಿತು ಮುಕ್ತ ಚರ್ಚೆಗೆ ಒಪ್ಪುತ್ತೀರಾ? ದುರಾದೃಷ್ಟವಶಾತ್ ವಿಶೇಷ ಅಧಿವೇಶನಕ್ಕಾಗಿ ವಿಪಕ್ಷಗಳ ಒತ್ತಾಯವನ್ನು ಕಡೆಗಣಿಸಲಾಗಿದೆ ಎಂದು ಹೇಳಿದ್ದಾರೆ. ಆಪರೇಷನ್ ಸಿಂಧೂರ ಕಾರ್ಯಾಚರಣೆ ಕುರಿತು ವಿಶ್ಲೇಷಣೆ ನಡೆಸಲು 1999ರ ಕಾರ್ಗಿಲ್ ಪರಿಶೀಲನಾ ಸಮಿತಿಯಂತೆ ತಜ್ಞರ ತಂಡವನ್ನು ರಚಿಸಲಾಗುತ್ತದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.
ಪಾಕಿಸ್ತಾನದೊಂದಿಗಿನ ಇತ್ತೀಚಿನ ಸೇನಾ ಸಂಘರ್ಷದಲ್ಲಿ ಯುದ್ಧ ವಿಮಾನಗಳ ನಷ್ಟ ಅನುಭವಿಸಿದ ನಂತರ ಭಾರತವು ತಂತ್ರಗಳನ್ನು ಸರಿಪಡಿಸಿದ್ದು, ಪಾಕಿಸ್ತಾನದ ಭೂಪ್ರದೇಶದೊಳಗೆ ಸಾಕಷ್ಟು ಹಾನಿ ಮಾಡಿದೆ ಎಂದು ಇತ್ತೀಚೆಗೆ ಸಿಂಗಾಪುರದಲ್ಲಿ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಜನರಲ್ ಅನಿಲ್ ಚೌಹಾಣ್ ಅವರ ಹೇಳಿಕೆಗಳನ್ನು ಜೈರಾಮ್ ರಮೇಶ್ ಉಲ್ಲೇಖಿಸಿದ್ದಾರೆ. ಆರು ಭಾರತೀಯ ಜೆಟ್ಗಳನ್ನು ಹೊಡೆದುರುಳಿಸುವ ಇಸ್ಲಾಮಾಬಾದ್ನ ಹೇಳಿಕೆಯನ್ನು ಸಿಡಿಎಸ್ “ಸಂಪೂರ್ಣವಾಗಿ ತಳ್ಳಿಹಾಕಿದ್ದರು.