...ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 126ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ಮ೦ಗಳವಾರದ೦ದು(ಇ೦ದು) ದೀಪ ಪ್ರಜ್ವಲಿಸುವುದರೊ೦ದಿಗೆ ಅದ್ದೂರಿಯ ಚಾಲನೆ...

ರಾಜ್ಯದ ಕರಾವಳಿ ಭಾಗದಲ್ಲಿ ಬಿಸಿಗಾಳಿ: ಎರಡು ದಿನ ‘ಯೆಲ್ಲೂ’ ಅಲರ್ಟ್ ಘೋಷಿಸಿದ IMD

ಮಂಗಳೂರು: ಕರಾವಳಿ ಕರ್ನಾಟಕದ ಹಲವು ಭಾಗಗಳಲ್ಲಿ ಬುಧವಾರದಿಂದ ಬಿಸಿಗಾಳಿ ಆವರಿಸಿದ್ದು, ಭಾರತೀಯ ಹವಾಮಾನ ಇಲಾಖೆ (IMD) ಎರಡು ದಿನ ‘ಯೆಲ್ಲೂ’ ಅಲರ್ಟ್ ಘೋಷಿಸಿದೆ. ಬುಧವಾರ 37 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ತಾಪಮಾನ ದಾಖಲಾಗಿತ್ತು. ಇದು ಮಾರ್ಚ್ 3 ರವರೆಗೆ ಇರುತ್ತದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಮುಂದಿನ ಎರಡು ದಿನಗಳ ಕಾಲ ಕರಾವಳಿ ಕರ್ನಾಟಕದ ಜಿಲ್ಲೆಗಳಲ್ಲಿ ಬಿಸಿಗಾಳಿ ಬೀಸುವ ಸಾಧ್ಯತೆಯಿದೆ. ಕರಾವಳಿ ಕರ್ನಾಟಕದಾದ್ಯಂತ ಗರಿಷ್ಠ ಉಷ್ಣಾಂಶ 37-39 ಡಿಗ್ರಿ ಸೆಲ್ಸಿಯಸ್ ಇರಲಿದೆ.ಮನುಷ್ಯನ ದೇಹವು 40-50 ಡಿಗ್ರಿ ಸೆಲ್ಸಿಯಸ್ ನಡುವಿನ ಗರಿಷ್ಠ ತಾಪಮಾನವನ್ನು ಸಹಿಸುತ್ತದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂದಿನ ಮೂರು ದಿನಗಳವರೆಗೆ ಬಿಸಿಗಾಳಿ ಇರಲಿದೆಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಇದು ಜನರು ಹೆಚ್ಚಾಗಿ ಮನೆ ಒಳಗಡೆಯೇ ಇರುವಂತೆ ಮಾಡಿದೆ. ಇದರಿಂದಾಗಿ ಮಹಾಶಿವರಾತ್ರಿಯ ನಿಮಿತ್ತ ಮಂಗಳೂರು, ಉಡುಪಿ ಮತ್ತಿತರ ಕಡೆಯ ದೇವಸ್ಥಾನಗಳಿಗೆ ಭಕ್ತರ ದಟ್ಟಣೆ ಹೆಚ್ಚಿರಲಿಲ್ಲ. ರಸ್ತೆಗಳು ಮತ್ತು ಆಟದ ಮೈದಾನಗಳು ಖಾಲಿ ಖಾಲಿ ಹೊಡೆಯುತ್ತಿದ್ದವು. ದ್ವಿಚಕ್ರ ವಾಹನ ಸವಾರರು ಸುಡುವ ಬಿಸಿಲಿಗೆ ಹೈರಾಣದರು.

ಜನರು ಮುನ್ನೆಚ್ಚರಿಕೆ ವಹಿಸಬೇಕು. ಸಾಧ್ಯವಾದಷ್ಟು ಸೂರ್ಯನ ನೇರ ಬೆಳಕು ಮತ್ತು ಬಿಸಿ ಗಾಳಿಯಿಂದ ತಪ್ಪಿಸಿಕೊಂಡು ತಂಪಾದ ಸ್ಥಳಗಳಲ್ಲಿ ಉಳಿಯಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

ಛತ್ರಿ ಇಲ್ಲದೆ ಹೊರಗೆ ಹೋಗಬೇಡಿ. ಸಿಂಥೆಟಿಕ್ ಬಟ್ಟೆಗಳನ್ನು ತ್ಯಜಿಸಿ, ಹತ್ತಿ ಬಟ್ಟೆಗಳನ್ನು ಬಳಸಬೇಕು. ಕಠಿಣ ದೈಹಿಕ ಶ್ರಮವನ್ನು ತಪ್ಪಿಸಿ,ವಿಶ್ರಾಂತಿ ತೆಗೆದುಕೊಳ್ಳಬೇಕು. ನೀರು ಮತ್ತು ಮಜ್ಜಿಗೆಯನ್ನು ಹೆಚ್ಚಾಗಿ ಸೇವಿಸಿ, ಬಿಸಿ ಪಾನೀಯಗಳು ಮತ್ತು ಮದ್ಯದ ಸೇವನೆಯಿಂದ ದೂರವಿರಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.

ಬಿಸಿಗಾಳಿಯಿಂದ ಹಾನಿಗೊಳಗಾದ ವ್ಯಕ್ತಿಗಳನ್ನು ತಕ್ಷಣ ತಂಪಾದ ಸ್ಥಳಕ್ಕೆ ಸ್ಥಳಾಂತರಿಸಬೇಕು ಮತ್ತು ಪ್ರಥಮ ಚಿಕಿತ್ಸೆ ನೀಡಬೇಕು. ಸಾಕಷ್ಟು ನೀರು ಮತ್ತು ದ್ರವ ಆಹಾರ ಸೇವಿಸುವಂತೆ ಮಾಡಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಲಹೆ ನೀಡಿದೆ.

No Comments

Leave A Comment