ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......
ಫೆ.1: ನಾಳೆ ಪಣಿಯಾಡಿ ದೇವಸ್ಥಾನಕ್ಕೆ ನೂತನ ರಥ ಸಮರ್ಪಣೆ
ಉಡುಪಿ: ಜ.31: ಪರ್ಯಾಯ ಪುತ್ತಿಗೆ ಮಠದ ಅಧೀನದಲ್ಲಿರುವ ಪಣಿಯಾಡಿಯ ಶ್ರೀಅನಂತಾಸನ ಶ್ರೀಲಕ್ಷ್ಮೀ ಅನಂತಪದ್ಮನಾಭ ದೇವಸ್ಥಾನಕ್ಕೆ ನೂತನ ರಥ ಸಮರ್ಪಣೆ ಸಮಾರಂಭ ಫೆ.1ರಂದು ನಡೆಯಲಿದೆ ಎಂದು ಪುತ್ತಿಗೆ ಶಾಖಾ ಮಠಗಳ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನಾಚಾರ್ಯ ತಿಳಿಸಿದ್ದಾರೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮ ವಿವರಗಳನ್ನು ನೀಡಿದ ಅವರು, ಫೆ.1ರಂದು ಸಂಜೆ 4ಗಂಟೆಗೆ ಶ್ರೀಕೃಷ್ಣ ಮಠದಿಂದ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನಕ್ಕೆ ಶೋಭಾಯಾತ್ರೆ ನಡೆಯಲಿದ್ದು ಪರ್ಯಾಯ ಪುತ್ತಿಗೆ ಶ್ರೀಸುಗುಣೇಂದ್ರತೀರ್ಥರು ಹಾಗೂ ಶ್ರೀಸುಶ್ರೀಂದ್ರತೀರ್ಥರು ಶ್ರೀಕೃಷ್ಣಮಠದ ಬಳಿ ಅದಕ್ಕೆ ಚಾಲನೆ ನೀಡುವರು ಎಂದರು.
ಕಲ್ಸಂಕ, ಕಡಿಯಾಳಿ, ಕುಂಜಿಬೆಟ್ಟು ಮಾರ್ಗವಾಗಿ ಮೆರವಣಿಗೆಯು ಸುಡುಮದ್ದು, ಬಿರುದಾವಳಿ, ವೇಧಘೋಷ, ತಟ್ಟಿರಾಯ, ಭಜನೆ, ಹುಲಿವೇಷ, ಪೌರಾಣಿಕ ವೇಷ, ಬಣ್ಣದ ಕೊಡೆಗಳು, ಕುಣಿತ ಭಜನೆಯೊಂದಿಗೆ ಸಾಗಲಿದೆ. ಪಣಿಯಾಡಿ ದೇವಳ ಆವರಣದಲ್ಲಿ ಸಂಜೆ 6 ಗಂಟೆಗೆ ಸಭಾ ಕಾರ್ಯಕ್ರಮವು ಅದಮಾರು ಮಠದ ಶ್ರೀವಿಶ್ವಪ್ರಿಯತೀರ್ಥರ ಅಧ್ಯಕ್ಷತೆಯಲ್ಲಿ ಜರುಗಲಿದೆ.
ಉಡುಪಿ ಶಾಸಕ ಯಶಪಾಲ್ ಎ. ಸುವರ್ಣ, ಪುತ್ತಿಗೆ ಶಾಖಾ ಮಠಗಳ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನಾ ಚಾರ್ಯ, ಉದ್ಯಮಿ ಪ್ರಸಾದ್ ರಾಜ್ ಕಾಂಚನ್, ಪಣಿಯಾಡಿಯ ಜ್ಯೋತಿಷಿ ವಿದ್ವಾನ್ ಗೋಪಾಲಕೃಷ್ಣ ಜೋಯಿಸ್, ನಗರಸಭೆ ಸದಸ್ಯ ಗಿರೀಶ್ ಅಂಚನ್, ಸ್ಕೌಟ್ ಆ್ಯಂಡ್ ಗೈಡ್ಸ್ ಮುಖ್ಯಸ್ಥ ಇಂದ್ರಾಳಿ ಜಯಕರ ಶೆಟ್ಟಿ, ಕಡಿಯಾಳಿ ಮಹಿಷ ಮರ್ದಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಜಯರಾಘವ ರಾವ್, ನ್ಯಾಯವಾದಿ ರಾಮಚಂದ್ರ ಅಡಿಗ ಮುಖ್ಯ ಅತಿಥಿಗಳಾಗಿರುವರು.
ರಥಕ್ಕೆ 20ಲಕ್ಷ ರೂ.ವೆಚ್ಚ: ಉತ್ಸವಕ್ಕೆ ರಥವನ್ನು ಬೇರೆಡೆಯಿಂದ ತರಬೇಕಾದ ಅನಿವಾರ್ಯತೆ ಹಿನ್ನೆಲೆಯಲ್ಲಿ ದೇಣಿಗೆ ಸಂಗ್ರಹಿಸಿ 20ಲಕ್ಷ ರೂ. ವೆಚ್ಚದಲ್ಲಿ ರಥ ನಿರ್ಮಿಸಲಾಗಿದೆ. ರಥದ ಕೊಟ್ಟಿಗೆ 2ಲಕ್ಷ ರೂ. ವೆಚ್ಚ, ದೇವಳದ ಪ್ರಾಂಗಣಕ್ಕೆ ಇಂಟರ್ಲಾಕ್ ಅಳವಡಿಕೆಗೆ 15ಲಕ್ಷ ರೂ. ವೆಚ್ಚವಾಗಿದೆ.
ಕೋಟೇಶ್ವರದ ಪರಮೇಶ್ವರ ಆಚಾರ್ಯ ರಥದ ಶಿಲ್ಪಿಯಾಗಿದ್ದು ಮಾ. 7ರಂದು ಹೊಸ ರಥದ ಉತ್ಸವ ನೆರವೇರಲಿದೆ ಎಂದು ವಿಜಯ ರಾಘವ ರಾವ್ ತಿಳಿಸಿದರು.