....ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವರ್ಷ೦ಪ್ರತಿಯ ವಾಡಿಕೆಯ೦ತೆ ನಡೆಯಲಿರುವ ಭಜನಾ ಸಪ್ತಾಹವು ಅಗಸ್ಟ್ 18ರಿ೦ದ ಆರ೦ಭವಾಗಲಿದೆ...126ನೇ ವರ್ಷದ ಭಜನಾ ಸಪ್ತಾಹ ಇದಾಗಿದೆ...

ತೆಲಂಗಾಣ: ಪತ್ನಿಯನ್ನು ಕೊಂದು, ದೇಹವನ್ನು ತುಂಡುಗಳಾಗಿ ಕತ್ತರಿಸಿ ಕುಕ್ಕರ್‌ನಲ್ಲಿ ಬೇಯಿಸಿದ ಮಾಜಿ ಯೋಧ

ಹೈದರಾಬಾದ್: ಪತ್ನಿಯನ್ನು ಕೊಲೆ ಮಾಡಿ, ಆಕೆಯ ದೇಹವನ್ನು ತುಂಡುಗಳಾಗಿ ಮಾಡಿ, ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಿ ಬಳಿಕ ಕೆರೆಗೆ ಎಸೆದ ಆರೋಪದ ಮೇಲೆ ಮಾಜಿ ಯೋಧನನ್ನು ಬಂಧಿಸಿರುವ ಘಟನೆ ಮೀರಪೇಟ್ ಪೊಲೀಸ್ ಠಾಣಾ ವ್ಯಾಪ್ತಿಯ ಜಿಲ್ಲೆಲಗುಡದಲ್ಲಿ ನಡೆದಿದೆ.

ಪೊಲೀಸ್ ಮೂಲಗಳ ಪ್ರಕಾರ, ಆರೋಪಿ ಗುರುಮೂರ್ತಿ ವಿಚಾರಣೆ ವೇಳೆ ತನ್ನ ಪತ್ನಿ ಪುಟ್ಟವೆಂಕಟ ಮಾಧವಿ (35) ಯನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ. ಆಕೆಯನ್ನು ಕೊಂದ ನಂತರ, ದೇಹದ ತುಂಡುಗಳ್ನು ಹತ್ತಿರದ ಕೆರೆಗೆ ಎಸೆದಿರುವುದಾಗಿ ವರದಿಯಾಗಿದೆ. ತನಿಖಾಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ.

ಗುರುಮೂರ್ತಿ ಮತ್ತು ಮಾಧವಿ ಮದುವೆಯಾಗಿ 11 ವರ್ಷಗಳಾಗಿದ್ದು, ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯವರು. ಸೇನೆಯಿಂದ ನಿವೃತ್ತರಾದ ಗುರುಮೂರ್ತಿ ಸದ್ಯ ಕಾಂಚನ್‌ಬಾಗ್‌ನಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಾರೆ. ದಂಪತಿ ಐದು ವರ್ಷಗಳಿಂದ ಜಿಲ್ಲೆಲಗುಡಾದ ವೆಂಕಟೇಶ್ವರ ಕಾಲೋನಿಯಲ್ಲಿ ವಾಸವಾಗಿದ್ದರು ಎಂದು ಮೀರ್‌ಪೇಟ್ ಇನ್ಸ್‌ಪೆಕ್ಟರ್ ಕೆ.ನಾಗರಾಜು ತಿಳಿಸಿದ್ದಾರೆ.

ಮಾಧವಿ ಅವರ ತಾಯಿ ಉಪ್ಪಳ ಸುಬ್ಬಮ್ಮ ಅವರು ಜನವರಿ 18 ರಂದು ತಮ್ಮ ಮಗಳು ನಾಪತ್ತೆಯಾಗಿರುವುದಾಗಿ ದೂರು ನೀಡಿದ್ದರು. ಜನವರಿ 16ರಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ತಮ್ಮ ಮಗಳು ಗುರುಮೂರ್ತಿ ಅವರೊಂದಿಗೆ ಸಣ್ಣಪುಟ್ಟ ವಿಚಾರಗಳಿಗೆ ಜಗಳವಾಡಿದ್ದಾಳೆ. ನಂತರ ಮನನೊಂದ ಮಾಧವಿ ಅದೇ ದಿನ ರಾತ್ರಿ 12 ಗಂಟೆ ಸುಮಾರಿಗೆ ಯಾರಿಗೂ ತಿಳಿಸದೆ ಮನೆಯಿಂದ ಹೊರ ಹೋಗಿದ್ದಾರೆ ಮತ್ತು ಹಿಂತಿರುಗಿಲ್ಲ. ಸಂಬಂಧಿಕರು ಮತ್ತು ನೆರೆಹೊರೆಯವರು ಮಾಧವಿಗಾಗಿ ಹುಡುಕಾಡಿದರೂ ಆಕೆ ಪತ್ತೆಯಾಗಲಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ನಾಗರಾಜು ತಿಳಿಸಿದರು.

No Comments

Leave A Comment