ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......
ಯಶ್ಪಾಲ್ ಸುವರ್ಣರ ಸೇಡಿನ ರಾಜಕೀಯ ಉಡುಪಿಗೆ ಶೋಭೆಯಲ್ಲ: ರಘುಪತಿ ಭಟ್ ಆಕ್ರೋಶ
ಉಡುಪಿ: ಜ.22: “ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅವರ ಸೇಡಿನ ರಾಜಕೀಯ ಉಡುಪಿಗೆ ಶೋಭೆ ತರುವುದಿಲ್ಲ. ಕಾಂಗ್ರೆಸ್ ಶಾಸಕರಾಗಿದ್ದ ಯು.ಆರ್.ಸಭಾಪತಿ, ಪ್ರಮೋದ್ ಮಧ್ವರಾಜ್ ಅವರನ್ನು ರಾಜಕೀಯವಾಗಿ ಎದುರಿಸಿಕೊಂಡು ಬಂದಿದ್ದೇನೆ. ನಾವೆಲ್ಲ ರಾಜಕೀಯವಾಗಿ ಜಗಳ ಮಾಡುತ್ತಿದ್ದೆವು. ಆದರೆ ನಾವು ಯಾರೂ ವೈಯಕ್ತಿಕವಾಗಿ ನಿಂದನೆ ಹಾಗೂ ವ್ಯವಹಾರಕ್ಕೆ ತೊಂದರೆ ಮಾಡುತ್ತಿರಲಿಲ್ಲ” ಎಂದು ಮಾಜಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಯಾವುದೇ ಕೃತಜ್ಞತೆ ಇರುವ ವ್ಯಕ್ತಿ ಈ ರೀತಿ ಮಾಡುವುದಿಲ್ಲ. ಕಾಪು ಶಾಸಕ ಗುರ್ಮೆ ಸುರೇಶ್ ಅವರು ಮಾಜಿ ಶಾಸಕ ಲಾಲಾಜಿ ಅವರನ್ನು ಗೌರವದಿಂದ ನಡೆಸಿಕೊಂಡು ಹೋಗುತ್ತಿದ್ದಾರೆ. ಆದರೆ ನಾನು ಪಕ್ಷದಲ್ಲಿ ಇರುವಾಗ ಯಶ್ಪಾಲ್ ಸುವರ್ಣ ಹೇಗೆ ನಡೆದುಕೊಂಡಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಅವರು ನನ್ನ ವೈಯಕ್ತಿಕ ನಿಂದನೆ ಮತ್ತು ವ್ಯವಹಾರಕ್ಕೆ ತೊಂದರೆ ಮಾಡುತ್ತಿದ್ದಾರೆ” ಎಂದು ದೂರಿದರು.
“ಯಶ್ಪಾಲ್ ಸುವರ್ಣರ ಬೆಳವಣಿಗೆಯಲ್ಲಿ ನನ್ನ ಪಾತ್ರ ಸಾಕಷ್ಟಿದೆ ಎಂಬುದು ಉಡುಪಿ ಜನತೆಗೆ ತಿಳಿದಿದೆ. 2004ರಲ್ಲಿ ನಾನು ಚುನಾವಣೆ ಸ್ಪರ್ಧಿಸಿದಾಗ ಬಂಡಾಯ ಅಭ್ಯರ್ಥಿ ಸುಧಾಕರ ಶೆಟ್ಟಿ ಬೆಂಬಲಿಗರಾಗಿದ್ದ ಯಶ್ಪಾಲ್ ಸುವರ್ಣರನ್ನು ಬೆತ್ತಲೆ ಪ್ರಕರಣದ ಆರೋಪಿಯಾಗಿದ್ದಾಗ ಬೆಂಬಲ ನೀಡಿ ಪಕ್ಷಕ್ಕೆ ಕರೆದುಕೊಂಡು ಬಂದಿದ್ದೆ. ಬಳಿಕ ನಗರಸಭೆ ಸದಸ್ಯನಾಗಿ ನಾಮನಿರ್ದೇಶನ ಮಾಡಿದೆ. ಎರಡುಬಾರಿ ನಗರಸಭೆ ಸದಸ್ಯನಾಗಿ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟೆ. ಅವರನ್ನು ಮೀನು ಮಾರಾಟ ಫೆಡರೇಶನ್ ಗೆ ನಾಮನಿರ್ದೇಶನ ಮಾಡಿ ಅಧ್ಯಕ್ಷರನ್ನಾಗಿ ಮಾಡಿರುವುದು ನಾನು. ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಉಪಾಧ್ಯಕ್ಷ ಮಾಡಿದ್ದೆ. ಅವರ ಮೇಲೆ ವಿಶ್ವಾಸ ಇಟ್ಟುಕೊಂಡು ಪ್ರೀತಿಯಿಂದ ಬೆಳೆಸಿದ್ದೆ. ಅವರು ವಿಧಾನಸಭಾ ಚುನಾವಣೆ ಸ್ಪರ್ಧಿಸಿದಾಗ 40 ದಿನಗಳ ಕಾಲ ಅವರೊಂದಿಗೆ ಕೆಲಸ ಮಾಡಿದ್ದೆ” ಎಂದು ಅವರು ತಿಳಿಸಿದರು.
“ಇವತ್ತು ನಾನು ಬಿಜೆಪಿ ತೊರೆದು ಪಕ್ಷೇತರನಾಗಿ ಸ್ಪರ್ಧಿಸಲು ಯಶ್ಪಾಲ್ ಅವರೇ ಕಾರಣ. ಇವರಿಂದ ನನಗೆ ಮಾನಸಿಕ ಆಘಾತ ಆಗಿರುವುದಲ್ಲದೆ, ಮನಸ್ಸಿಗೆ ತುಂಬಾ ಬೇಸರ ಆಗಿದೆ. ಬಿಜೆಪಿಯ ಬೆಳವಣಿಗೆಯಲ್ಲಿ ನನ್ನ ಪಾತ್ರ ಕೂಡ ಇದೆ. ಮೂರು ಬಾರಿ ಶಾಸಕನಾಗಿದ್ದ ನನ್ನನ್ನು ಅವರು ಯಾವ ರೀತಿ ನೋಡಿಕೊಳ್ಳುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ” ಎಂದು ಅವರು ಹೇಳಿದರು.
“ಶಾಸಕರು ನನ್ನ ಬಗ್ಗೆ ಅವಹೇಳನವಾಗಿ ಮಾತನಾಡುತ್ತಾರೆ. ಇದು ಸಜ್ಜನ ಶಾಸಕರ ಲಕ್ಷ್ಮಣವಲ್ಲ. ಈ ರೀತಿ ವರ್ತನೆ ಸರಿಯಲ್ಲ. ಅವರ ವೈಯಕ್ತಿಕ ಬೆಳವಣಿಗೆಯಲ್ಲಿ ನನ್ನ ಕೊಡುಗೆಯೂ ಇದೆ. ಮನುಷ್ಯಇಷ್ಟು ಕೃತಘ್ನನಾಗಬಾರದು. ಕೃತಜ್ಞತೆ ಸ್ವಲ್ಪ ಆದರೂ ಇರಬೇಕು. ಉಡುಪಿಯ ರಾಜಕಾರಣದಲ್ಲಿ ಇತಂಹ ರಾಜಕರಾಣ ಇರಲಿಲ್ಲ” ಎಂದು ಅವರು ಬೇಸರ ವ್ಯಕ್ತಪಡಿಸಿದರು.
“ನನ್ನ ಅವಧಿಯಲ್ಲಿನ ಯೋಜನೆಗಳಿಗೆ ಇವರು ರಾಜಕೀಯ ಕಾರಣಕ್ಕಾಗಿ ತಡೆಯೊಡ್ಡುತ್ತಿರುವುದರಿಂದ ಉಡುಪಿಯ ಅಭಿವೃದ್ಧಿಗೆ ಬಹಳ ದೊಡ್ಡ ತೊಡಕಾಗಿದೆ ಎಂದ ರಘುಪತಿ ಭಟ್, ಮಹಾಲಕ್ಷ್ಮೀ ಬ್ಯಾಂಕಿಗೆ ಸಂಬಂಧಿಸಿ ಜನರ ಸಮಸ್ಯೆಯ ಬಗ್ಗೆ ಧ್ವನಿ ಎತ್ತಿದ್ದೇನೆಯೇ ಹೊರತು ಶಾಸಕರ ಬಗ್ಗೆ ಆರೋಪ ಮಾಡಿಲ್ಲ. ಅದು ಕೂಡ ಮಾಡಬಾರದು ಅಂದರೆ ಪಾಳೇಗಾರಿಕೆ ಆಗುತ್ತದೆ. ಅದನ್ನೇ ಇಟ್ಟುಕೊಂಡು ನನ್ನ ಸೊಸೈಟಿಯ ಬಗ್ಗೆ ವಿಧಾನಸಭೆಯಲ್ಲಿ ವಿವಾದ ಮಾಡಿದರು” ಎಂದು ದೂರಿದರು.