ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......
ಉಡುಪಿಯಲ್ಲಿ ಮಾ.1-2ರ೦ದು ವಕೀಲರಿಗಾಗಿ ರಾಜ್ಯ ಮಟ್ಟದ ಕ್ರಿಕೆಟ್, ವಾಲಿಬಾಲ್, ತ್ರೋಬಾಲ್ ಮತ್ತು ಶಟಲ್ ಬ್ಯಾಡ್ಮಿಂಟನ್ ಟೂರ್ನಿ
ಉಡುಪಿ, ಜ.14: ಉಡುಪಿ ವಕೀಲರ ಸಂಘ ಮತ್ತು ನ್ಯಾಯಾಲಯದ 125ನೇ ವರ್ಷಾಚರಣೆ (ಶತಮಾನೋತ್ತರ ರಜತ ಮಹೋತ್ಸವ)ಯ ಮುಂದುವರಿದ ಭಾಗವಾಗಿ ಉಡುಪಿ ವಕೀಲರ ಸಂಘದ ಆಶ್ರಯದಲ್ಲಿ ವಕೀಲರಿಗಾಗಿ ರಾಜ್ಯ ಮಟ್ಟದ ಕ್ರಿಕೆಟ್, ವಾಲಿಬಾಲ್ (ಪುರುಷರಿಗೆ), ತ್ರೋಬಾಲ್ (ಮಹಿಳೆಯರಿಗೆ) ಮತ್ತು ಶಟಲ್ ಬ್ಯಾಡ್ಮಿಂಟನ್ (ಪುರುಷರು-ಮಹಿಳೆಯರಿಗೆ) ಟೂರ್ನಿಯನ್ನು ಮಾರ್ಚ್ 1 ಮತ್ತು 2ರಂದು ಆಯೋಜಿಸಲಾಗಿದೆ ಎಂದು ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್ ತಿಳಿಸಿದ್ದಾರೆ.
ಸೋಮವಾರ ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ನಗರದ ಎಂ.ಜಿ.ಎಂ ಕಾಲೇಜಿನ ಎಎಲ್ಎನ್ ರಾವ್ ಕ್ರೀಡಾಂಗಣದಲ್ಲಿ ಪಂದ್ಯಾಟ ನಡೆಸಲಾಗುತ್ತಿದೆ. ಪುರುಷರ ಕ್ರಿಕೆಟ್ ಪಂದ್ಯಾಟವನ್ನು ಇದೇ ಪ್ರಥಮ ಬಾರಿಗೆ ಹೊನಲು ಬೆಳಕಿನಲ್ಲಿ ನಡೆಸಲಾಗುತ್ತಿದೆ ಎಂದರು.
ಪಂದ್ಯಾಕೂಟವನ್ನು ಮಾ. 1ರ ಸಂಜೆ 4 ಗಂಟೆಗೆ ಸುಪ್ರೀಂಕೋರ್ಟಿನ ನ್ಯಾಯಧೀಶೆ ನ್ಯಾ| ಬಿ.ವಿ.ನಾಗರತ್ನ ಉದ್ಘಾಟಿಸಲಿದ್ದಾರೆ. ಕರ್ನಾಟಕ ಹೈಕೋರ್ಟಿನ ಮುಖ್ಯ ನ್ಯಾಯಧೀಶ ನ್ಯಾ| ಎನ್.ವಿ. ಅಂಜಾರಿಯಾ ಅಧ್ಯಕ್ಷತೆ ವಹಿಸುವರು. ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ಉಡುಪಿ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ನ್ಯಾ| ಇ.ಎಸ್.ಇಂದಿರೇಶ್, ಕರ್ನಾಟಕ ಹೈಕೋರ್ಟಿನ ನ್ಯಾಯಾಧೀಶ ನ್ಯಾ| ರಾಜೇಶ್ ರೈ ಕೆ., ಮಣಿಪಾಲ ಮಾಹೆ ಸಹಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಉಡುಪಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಕಿರಣ್ ಎಸ್. ಗಂಗಣ್ಣವರ್ ಉಪಸ್ಥಿತರಿರುವರು ಎಂದರು.
ಮಾ. 2ರ ಸಂಜೆ 7 ಗಂಟೆಗೆ ನಡೆಯುವ ಸಮಾರೋಪ ಮತ್ತು ಪ್ರಶಸ್ತಿ ವಿತರಣೆ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ ಸದಸ್ಯ ಪಿ.ಪಿ.ಹೆಗ್ಡೆ ಸಮಾರೋಪ ಭಾಷಣ ಮಾಡುವರು. ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆ ವಹಿಸಲಿದ್ದು, ಶಾಸಕ ಯಶಪಾಲ್ ಸುವರ್ಣ ಅತಿಥಿಯಾಗಿರುವರು.
ಸ್ಪರ್ಧೆಯಲ್ಲಿ ಭಾಗವಹಿಸುವ ತಂಡಗಳಿಗೆ ಊಟ ಮತ್ತು ವಸತಿ ಸೌಲಭ್ಯವನ್ನು ಉಡುಪಿ ವಕೀಲರ ಸಂಘದ ವತಿಯಿಂದ ವ್ಯವಸ್ಥೆಗೊಳಿಸಲಾಗುವುದು. ವಿಜೇತ ತಂಡಗಳಿಗೆ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುವುದು ಎಂದರು.
ಪತ್ರಿಕಾಗೋಷ್ಟಿಯಲ್ಲಿ ಉಡುಪಿ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಿಕ ದಂಡಾಧಿಕಾರಿ ಸಂತೋಷ್ ಶ್ರೀವತ್ಸ, ಹೆಚ್ಚುವರಿ ಜಿಲ್ಲಾ ಪೋಕ್ಸೊ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಶ್ರೀನಿವಾಸ್ ಸುವರ್ಣ, ಹಿರಿಯ ವಕೀಲ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ವಕೀಲರ ಸಂಘದ ಉಪಾಧ್ಯಕ್ಷ ಮಿತ್ರ ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಾಜೇಶ ಎ.ಆರ್., ಸಾಂಸ್ಕೃತಿಕ ಕಾರ್ಯದರ್ಶಿ ಸಂತೋಷ್ ಕುಮಾರ್ ಮೂಡುಬೆಳ್ಳೆ, ಕ್ರೀಡಾ ಕಾರ್ಯದರ್ಶಿ ಸುಮಿತ್ ಎಸ್. ಹೆಗ್ಡೆ, ಖಜಾಂಚಿ ಗಂಗಾಧರ ಎಚ್.ಎಮ್., ಜಂಟಿ ಕಾರ್ಯದರ್ಶಿ ರವೀಂದ್ರ ಬೈಲೂರು, ವಿವಿಧ ಉಪಸಮಿತಿಗಳ ಸಂಚಾಲಕರಾದ ಎಮ್.ಶಾಂತಾರಾಮ್ ಶೆಟ್ಟಿ, ಸತೀಶ್ ಎಮ್ ಪೂಜಾರಿ, ದಿವಾಕರ್ ಎಮ್. ಶೆಟ್ಟಿ, ಕೆ.ಆರ್. ರಾಮಚಂದ್ರ ಅಡಿಗ, ಬಿ. ನಾಗರಾಜ್, ಪ್ರವೀಣ್ ಎಮ್. ಪೂಜಾರಿ, ಆರೂರ್ ಸುಕೇಶ್ ಶೆಟ್ಟಿ, ಅಸದುಲ್ಲಾ ಕಟಪಾಡಿ, ಗಣೇಶ್ ಕುಮಾರ್ ಮಟ್ಟು, ಪಂದ್ಯಾಟದ ಉಸ್ತುವಾರಿಗಳಾದ ಸಚಿನ್ ಕುಮಾರ್ ಶೆಟ್ಟಿ, ಗಂಗಾಧರ ಶೇರಿಗಾರ್, ಯೋಗಿಶ್ ಕುಮಾರ್ ಸಾಲಿಗ್ರಾಮ, ಸ್ಯಾಂಡ್ರಾ ಆ್ಯನ್ಸಿಲ್ಲಾ ಡಿ’ಸೋಜಾ ಉಪಸ್ಥಿತರಿದ್ದರು.
ಪಂದ್ಯಾಟದ ಬ್ರೋಶರನ್ನು ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶ ಕಿರಣ್ ಎಸ್. ಗಂಗಣ್ಣವರ್ ಹಾಗೂ ಉಡುಪಿ ಪ್ರಧಾನ ಹಿರಿಯ ಸಿವಿಲ್ ನ್ಯಾಯಧೀಶ ಮತ್ತು ಮುಖ್ಯ ನ್ಯಾಯಿಕ ದಂಡಾಧಿಕಾರಿ ಪುರುಷೋತ್ತಮ್ ಎಮ್. ಬಿಡುಗಡೆಗೊಳಿಸಿದರು.
ಪ್ರಶಸ್ತಿಗಳ ವಿವರ:-
ಕ್ರಿಕೆಟ್ ಪಂದ್ಯಾಟ: ವಿಜೇತ ತಂಡಕ್ಕೆ ರೂ. 1,11,111 ಮತ್ತು ಶಾಶ್ವತ ಫಲಕ, ರನ್ನರ್ ಅಪ್ ತಂಡಕ್ಕೆ ರೂ. 55,555 ಮತ್ತು ಶಾಶ್ವತ ಫಲಕ, ತೃತೀಯ ಸ್ಥಾನಕ್ಕೆ ರೂ. 25,555 ಮತ್ತು ಶಾಶ್ವತ ಫಲಕ ಹಾಗೂ ನಾಲ್ಕನೇ ಸ್ಥಾನಕ್ಕೆ 11,111 ರೂ. ಮತ್ತು ಶಾಶ್ವತ ಫಲಕ.
ಪುರುಷರ ವಾಲಿಬಾಲ್: ವಿಜೇತ ತಂಡಕ್ಕೆ ರೂ. 66,666 ಮತ್ತು ಶಾಶ್ವತ ಫಲಕ, ರನ್ನರ್ ಅಪ್ ತಂಡಕ್ಕೆ ರೂ. 33,333 ಮತ್ತು ಶಾಶ್ವತ ಫಲಕ ಹಾಗೂ ತೃತೀಯ ಸ್ಥಾನಕ್ಕೆ ರೂ. 22,222 ಮತ್ತು ಶಾಶ್ವತ ಫಲಕ.
ಮಹಿಳೆಯರ ತ್ರೋಬಾಲ್: ವಿಜೇತ ತಂಡಕ್ಕೆ ರೂ. 33,333 ಮತ್ತು ಶಾಶ್ವತ ಫಲಕ, ರನ್ನರ್ ಅಪ್ ತಂಡಕ್ಕೆ ರೂ. 22,222 ಮತ್ತು ಶಾಶ್ವತ ಫಲಕ ಹಾಗೂ ತೃತೀಯ ಸ್ಥಾನಕ್ಕೆ ರೂ. 11,111 ಮತ್ತು ಶಾಶ್ವತ ಫಲಕ.
ಪುರುಷ ಮತ್ತು ಮಹಿಳೆಯರ ಶಟಲ್ ಬ್ಯಾಡ್ಮಿಂಟನ್: ವಿಜೇತ ತಂಡಕ್ಕೆ ರೂ. 11,111 ಮತ್ತು ಶಾಶ್ವತ ಫಲಕ, ರನ್ನರ್ ಅಪ್ ತಂಡಕ್ಕೆ ರೂ. 6,666 ಮತ್ತು ಶಾಶ್ವತ ಫಲಕ. ಅಲ್ಲದೆ, ಪ್ರತೀ ವಿಭಾಗದ ಉತ್ತಮ ಆಟಗಾರರಿಗೆ ವೈಯಕ್ತಿಕ ಬಹುಮಾನ ನೀಡಲಾಗುವುದು ಎಂದು ರೆನಾಲ್ಡ್ ತಿಳಿಸಿದರು.