Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಸಿನಿಮಾ ಶೂಟಿಂಗ್ ಸೆಟ್​ ಬೆಂಕಿಗಾಹುತಿ, ನಾಲ್ಕು ಕೋಟಿ ನಷ್ಟ

ತೆಲುಗು ಚಿತ್ರರಂಗದ ಜನಪ್ರಿಯ ನಟ ನಂದಮೂರಿ ಕಲ್ಯಾಣ್ ರಾಮ್ ನಟಿಸುತ್ತಿರುವ ಹೊಸ ಸಿನಿಮಾದ ಚಿತ್ರೀಕರಣ ನಡೆಸಲಾಗುತ್ತಿದ್ದ ಸೆಟ್​ಗೆ ಬೆಂಕಿ ಬಿದ್ದಿದ್ದು ಸುಮಾರು ನಾಲ್ಕು ಕೋಟಿ ರೂಪಾಯಿ ನಷ್ಟವಾಗಿದೆ. ಆದರೆ ಈ ಬೆಂಕಿ ಅವಘಡದಲ್ಲಿ ಯಾರಿಗೂ ಯಾವುದೇ ಗಾಯ ಅಥವಾ ಜೀವಹಾನಿ ಸಂಭವಿಸಿಲ್ಲ ಎಂದು ಚಿತ್ರತಂಡ ತಿಳಿಸಿದೆ. ಶಾರ್ಟ್ ಸರ್ಕ್ಯೂಟ್​ನಿಂದಾಗಿ ಈ ಅಗ್ನಿ ಅವಘಡ ಸಂಭವಿಸಿದೆ ಎನ್ನಲಾಗುತ್ತಿದ್ದು, ಸೆಟ್​ಗೆ ಬೆಂಕಿ ಬಿದ್ದಾಗ ಶೂಟಿಂಗ್ ನಡೆಯುತ್ತಿರಲಿಲ್ಲವಾದ್ದರಿಂದ ಯಾವುದೇ ಹಾನಿಯಾಗಿಲ್ಲ.

ನಂದಮೂರಿ ಕಲ್ಯಾಣ್ ರಾಮ್ ಅವರು ಕ್ರೈಂ ಥ್ರಿಲ್ಲರ್ ಕತೆಯುಳ್ಳ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ಕಲ್ಯಾಣ್ ರಾಮ್ ಸಿಬಿಐ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಆಕ್ಷನ್ ದೃಶ್ಯಗಳ ಚಿತ್ರೀಕರಣ ಹಾಗೂ ಕೆಲವು ಕಚೇರಿ ದೃಶ್ಯಗಳ ಚಿತ್ರೀಕರಣವನ್ನು ಚಿತ್ರತಂಡ ಸೆಟ್​ನಲ್ಲಿ ಮಾಡುತ್ತಿತ್ತು. ಇದಕ್ಕಾಗಿ ಹೈದರಾಬಾದ್ ಹೊರವಲಯದಲ್ಲಿ ಒಂದೇ ಜಾಗದಲ್ಲಿ ಬೇರೆ ಬೇರೆ ಸೆಟ್​ಗಳನ್ನು ನಿರ್ಮಾಣ ಮಾಡಲಾಗಿತ್ತು. ಸೆಟ್ ನಿರ್ಮಾಣಕ್ಕೆ ಸುಮಾರು 4 ಕೋಟಿ ಖರ್ಚು ಮಾಡಲಾಗಿತ್ತು ಎನ್ನಲಾಗುತ್ತಿದೆ. ಈಗ ಆ ಬೃಹತ್ ಸೆಟ್​ ಬೆಂಕಿಗೆ ಆಹುತಿಯಾಗಿದೆ. ಸೆಟ್​ಗೆ ಬೆಂಕಿ ಬಿದ್ದಾಗ ಚಿತ್ರೀಕರಣ ನಡೆಯುತ್ತಿರಲಿಲ್ಲವಾದ್ದರಿಂದ ಯಾರಿಗೂ ಹಾನಿಯಾಗಿಲ್ಲ.

ಕಲ್ಯಾಣ್ ರಾಮ್ ನಟಿಸುತ್ತಿರುವ ಸಿನಿಮಾದಲ್ಲಿ ಹಿರಿಯ ನಟಿ, ರಾಜಕಾರಣಿ ವಿಜಯಶಾಂತಿ ಸಹ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಬಾಲಿವುಡ್​ನ ಅರ್ಜುನ್ ರಾಮ್​ಪಾಲ್, ನಾಯಕಿಯಾಗಿ ಸಾಯಿ ಮಂಜ್ರೇಕರ್ ನಟಿಸಿದ್ದಾರೆ. ಈ ಸಿನಿಮಾವನ್ನು ಪ್ರದೀಪ್ ಚಿಲಕೂರಿ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾಕ್ಕೆ ಅಶೋಕ್ ಬಂಡವಾಳ ಹೂಡಿದ್ದಾರೆ. ಕಲ್ಯಾಣ್ ರಾಮ್ ನಟನೆ ಜೊತೆಗೆ ಸಹ ನಿರ್ಮಾಪಕರೂ ಆಗಿದ್ದಾರೆ.

ಈ ಹಿಂದೆ ನಟ ಪವನ್ ಕಲ್ಯಾಣ್ ನಟಿಸಿರುವ ‘ಹರಿ ಹರ ವೀರ ಮಲ್ಲು’ ಸಿನಿಮಾದ ಸೆಟ್​ಗೆ ಬೆಂಕಿ ತಗುಲಿತ್ತು. ಐತಿಹಾಸಿಕ ಸಿನಿಮಾ ಆದ್ದರಿಂದ ಬೃಹತ್ ಸೆಟ್ ಅನ್ನು ನಿರ್ಮಿಸಲಾಗಿತ್ತು. ಆ ಘಟನೆಯಲ್ಲಿಯೂ ಸಹ ಯಾರಿಗೂ ಯಾವುದೇ ಹಾನಿ ಆಗಿರಲಿಲ್ಲ. ಆ ಸಿನಿಮಾದ ಚಿತ್ರೀಕರಣ ಇನ್ನೂ ಚಾಲ್ತಿಯಲ್ಲಿದ್ದು, ಚುನಾವಣೆ ಬಳಿಕ ಸಿನಿಮಾವನ್ನು ಪೂರ್ಣಗೊಳಿಸಲಿದ್ದಾರೆ ಪವನ್. ಅದಕ್ಕೂ ಮುನ್ನ ನಟ ಪ್ರಭಾಸ್ ನಟಿಸುತ್ತಿದ್ದ ‘ಆದಿಪುರುಷ್’ ಸಿನಿಮಾ ಸೆಟ್​ಗೆ ಬೆಂಕಿ ತಗುಲಿ ಪೂರ್ತಿ ಸೆಟ್ ಬೆಂಕಿಗಾಹುತಿಯಾಗಿತ್ತು. ಆದರೆ ಈ ಘಟನೆ ಮುಂಬೈನಲ್ಲಿ ನಡೆದಿತ್ತು.

ನಂದಮೂರಿ ಕಲ್ಯಾಣ್ ರಾಮ್, ಟಾಲಿವುಡ್ ಸ್ಟಾರ್ ನಟ ಜೂ ಎನ್​ಟಿಆರ್ ಅವರ ಅಣ್ಣನಾಗಿದ್ದು, ಸಿನಿಮಾಗಳಲ್ಲಿ ನಟಿಸುವ ಜೊತೆಗೆ ನಿರ್ಮಾಣವನ್ನೂ ಮಾಡುತ್ತಾರೆ. ಪ್ರಸ್ತುತ ಜೂ ಎನ್​ಟಿಆರ್ ನಟಿಸುತ್ತಿರುವ ‘ದೇವರ’ ಸಿನಿಮಾವನ್ನು ಇವರೇ ನಿರ್ಮಿಸುತ್ತಿದ್ದಾರೆ. ಈ ಹಿಂದೆ ತಮ್ಮದೇ ಸಿನಿಮಾಗಳನ್ನು ನಿರ್ಮಾಣ ಮಾಡುವ ಜೊತೆಗೆ ರವಿತೇಜ ನಟನೆಯ ‘ಕಿಕ್ 2’, ಜೂ ಎನ್​ಟಿಆರ್ ನಟನೆಯ ‘ಜೈ ಲವ ಕುಶ’ ಸಿನಿಮಾಗಳನ್ನು ನಿರ್ಮಿಸಿದ್ದರು.

No Comments

Leave A Comment