ಸುಡುಬಿಸಿಲಿನಲ್ಲಿ ಶ್ರೀಕೃಷ್ಣಜನ್ಮಾಷ್ಟಮಿಯ “ವಿಟ್ಲಪಿಂಡಿ” ವೈಭವಕ್ಕೆ ಸಾಕ್ಷಿಯಾದ ಶ್ರೀಕೃಷ್ಣನಗರಿ ಉಡುಪಿ…
ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಶನಿವಾರದ೦ದು “ವಿಟ್ಲಪಿಂಡಿ” ಮಹೋತ್ಸವವು ವಿಜೃಂಭಣೆಯಿಂದ ನೆರವೇರಿತು.
ಚಿನ್ನದ ರಥೋತ್ಸವ, ಗೊಲ್ಲವೇಷಧಾರಿಗಳ ಮೊಸರು ಕುಡಿಕೆ ಒಡೆಯುವ ಸಂಪ್ರದಾಯ, ವೈವಿಧ್ಯಮಯ ವೇಷಗಳ ಮೆರವಣಿಗೆ ಹಾಗೂ ಮಲ್ಲಯುದ್ಧ ಪ್ರದರ್ಶನ ಉತ್ಸವದ ಪ್ರಮುಖ ಆಕರ್ಷಣೆಯಾಗಿತ್ತು.
ಶುಕ್ರವಾರ ಅಷ್ಟಮಿ ಹಬ್ಬ ಆರಂಭಗೊಂಡಿದ್ದು, ಇಡೀ ದಿನ ರಾಜಾಂಗಣ ಹಾಗೂ ರಥಬೀದಿಯಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಶನಿವಾರ ಬೆಳಗ್ಗಿನಿಂದಲೇ ವಿಟ್ಲಪಿಂಡಿ ಉತ್ಸವದಲ್ಲಿ ಪಾಲ್ಗೊಳ್ಳಲು ಸಾವಿರಾರು ಭಕ್ತರು ಕೃಷ್ಣಮಠದತ್ತ ಆಗಮಿಸಿದ್ದರು.
ಉತ್ಸವದ ಅಂಗವಾಗಿ ರಾಜಾಂಗಣದಲ್ಲಿ ಭಕ್ತರಿಗೆ ಅನ್ನಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು.
ಮಧ್ಯಾಹ್ನ 3.30ರ ಬಳಿಕ ಕೃಷ್ಣಮಠದ ರಥಬೀದಿ ಸೇರಿದಂತೆ ಉಡುಪಿ ನಗರದ ಪ್ರಮುಖ ಬೀದಿಗಳು ವಿವಿಧ ವೇಷಧಾರಿಗಳಿಂದ ತುಂಬಿ ತುಳುಕುತ್ತಿದ್ದವು. ಹುಲಿವೇಷ ಸೇರಿದಂತೆ ಜನಪದ ಮತ್ತು ಪೌರಾಣಿಕ ಹಿನ್ನೆಲೆಯ ತರಹೇವಾರಿ ವೇಷಗಳು ಜನರ ಗಮನ ಸೆಳೆದವು.
ಪರ್ಯಾಯ ಶ್ರೀಶಿರೂರು ಮಠದ ಪರ್ಯಾಯ ಪೀಠಾಧೀಶರಾದ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಶ್ರೀಕೃಷ್ಣನ ಮೃಣ್ಮಯ ಮೂರ್ತಿಗೆ ಷೋಡಷೋಪಚಾರ ಪೂಜೆ ಸಲ್ಲಿಸಿ ಮಹಾಪೂಜೆ ನೆರವೇರಿಸಿದರು. ಮಧ್ಯಾಹ್ನ ಸುಮಾರು 3 ಗಂಟೆಗೆ ಮೃಣ್ಮಯ ಉತ್ಸವ ಮೂರ್ತಿಯನ್ನು ಚಿನ್ನದ ಪಲ್ಲಕ್ಕಿಯಲ್ಲಿ ಕೂರಿಸಿ ರಥಬೀದಿಗೆ ತರಲಾಯಿತು.

ಬಳಿಕ ಪರ್ಯಾಯ ಶ್ರೀಪಾದರು ಆರತಿ ಬೆಳಗುವ ಮೂಲಕ ವಿಟ್ಲಪಿ೦ಡಿಯ ರಥೋತ್ಸವಕ್ಕೆ ಚಾಲನೆ ನೀಡಿದರು. ಇದೇ ವೇಳೆ ರಥಬೀದಿಯ ಗುರ್ಜಿಗಳಲ್ಲಿ ಕಟ್ಟಲಾಗಿದ್ದ ಮೊಸರು ಕುಡಿಕೆಗಳನ್ನು ಗೊಲ್ಲವೇಷಧಾರಿಗಳು ಒಡೆಯುವ ಮೂಲಕ ಸಂಪ್ರಾದಾಯವನ್ನು ನೆರವೇರಿಸಿದರು.

ಮೆರವಣಿಗೆಯಲ್ಲಿ ವಿವಿಧ ಜನಪದ ಹುಲಿವೇಷಗಳು ಹಾಗೂ ವೈವಿಧ್ಯಮಯ ವೇಷಧಾರಿಗಳು ಪಾಲ್ಗೊಂಡು ಉತ್ಸವದ ಮೆರುಗನ್ನು ಹೆಚ್ಚಿಸಿದರು. ರಥಬೀದಿಯುದ್ದಕ್ಕೂ ನೆರೆದಿದ್ದ ಭಕ್ತರು ಮತ್ತು ಸಾರ್ವಜನಿಕರು ವೇಷಧಾರಿಗಳ ಪ್ರದರ್ಶನವನ್ನು ಕಣ್ತುಂಬಿಕೊಂಡರು.










