...ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 126ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ಮ೦ಗಳವಾರದ೦ದು(ಇ೦ದು) ದೀಪ ಪ್ರಜ್ವಲಿಸುವುದರೊ೦ದಿಗೆ ಅದ್ದೂರಿಯ ಚಾಲನೆ...

ಪಿಕ್ನಿಕ್‌ಗೆ ಹೋಗಿ ಜಲಸಮಾಧಿ; ಶ್ರೀರಾಮ ಸಾಗರ್ ಡ್ಯಾಮ್ ನೀರಿನಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ತೀವ್ರ ಶೋಧ

ನಿಜಾಮಾಬಾದ್: ಸ್ನೇಹಿತರೊಂದಿಗೆ ವಿಹಾರಕ್ಕೆ ತೆರಳಿದ್ದ ನಾಲ್ವರು ಯುವಕರು ಜಲಾಶಯದಲ್ಲಿ ಮುಳುಗಿದ್ದು, ಈ ಪೈಕಿ ಮೂವರ ಮೃತದೇಹ ಪತ್ತೆ, ಮತ್ತೋರ್ವನಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ತೆಲಂಗಾಣದ ನಿಜಾಮಾಬಾದ್ ನ ಗೋದಾವರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಶ್ರೀರಾಮ ಸಾಗರ್ ಯೋಜನೆ (SRSP) ಜಲಾಶಯದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ವಿಹಾರಕ್ಕೆ ತೆರಳಿದ್ದ ನಾಲ್ವರು ಯುವಕರ ಪೈಕಿ ಮೂವರು ಮುಳುಗಿ ಮೃತಪಟ್ಟಿದ್ದು, ಮತ್ತೋರ್ವ ಯುವಕ ನಾಪತ್ತೆಯಾಗಿರುವ ದುರ್ಘಟನೆ ಭಾನುವಾರ ಸಂಜೆ ನಡೆದಿದೆ.

ಪೊಲೀಸರ ಮಾಹಿತಿ ಪ್ರಕಾರ, ನಾಲ್ವರು ಯುವಕರು ಶ್ರೀರಾಮ ಸಾಗರ್ ಯೋಜನೆ ಪ್ರದೇಶಕ್ಕೆ ಪ್ರವಾಸಕ್ಕಾಗಿ ತೆರಳಿದ್ದು, ಸಂಜೆ ಸುಮಾರು 4.30 ಗಂಟೆಗೆ ಯೋಜನೆಯ ಪಂಪ್ ಹೌಸ್ ಸಮೀಪ ತಲುಪಿದ್ದರು. ಈ ವೇಳೆ ಜಲಾಶಯದ ನೀರಿಗೆ ಇಳಿದ ಅವರು ಆಳವಾದ ನೀರಿನಲ್ಲಿ ಸಿಲುಕಿ ಮುಳುಗಿದ್ದಾರೆ ಎಂದು ತಿಳಿದುಬಂದಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಶೋಧ ಕಾರ್ಯಾಚರಣೆಯಲ್ಲಿ ಖಲೀಂ (24), ನಜ್ವತ್ (24) ಹಾಗೂ ಅಜೀಂ (24) ಅವರ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಮೂವರೂ ಆಟೋನಗರ ನಿವಾಸಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನೋರ್ವ ಯುವಕ ಇನ್ನೂ ನಾಪತ್ತೆಯಾಗಿದ್ದು, ಆತನಿಗಾಗಿ ರಕ್ಷಣಾ ಸಿಬ್ಬಂದಿ ಜಲಾಶಯದಲ್ಲಿ ತೀವ್ರ ಶೋಧ ಕಾರ್ಯ ಮುಂದುವರಿಸಿದ್ದಾರೆ. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಮೃತರ ಕುಟುಂಬಸ್ಥರು ಹಾಗೂ ಸ್ಥಳೀಯರು ಜಲಾಶಯದ ಬಳಿ ಜಮಾಯಿಸಿದ್ದು, ದುಃಖದ ವಾತಾವರಣ ನಿರ್ಮಾಣವಾಗಿದೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಯುವಕರು ಹೇಗೆ ನೀರಿನಲ್ಲಿ ಮುಳುಗಿದರು ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಈ ಘಟನೆ ಹಿನ್ನೆಲೆಯಲ್ಲಿ ಜಲಾಶಯಗಳು, ಅಣೆಕಟ್ಟುಗಳು ಹಾಗೂ ಆಳವಾದ ನೀರಿನ ಪ್ರದೇಶಗಳಲ್ಲಿ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ವಿಶೇಷವಾಗಿ ನಿಷೇಧಿತ ಅಥವಾ ಅಪಾಯಕಾರಿ ಪ್ರದೇಶಗಳಿಗೆ ಇಳಿಯದಂತೆ ಸೂಚಿಸಿದ್ದಾರೆ.

No Comments

Leave A Comment