.....ಶ್ರೀ ಕೃಷ್ಣ ಜನ್ಮಾಷ್ಠಮಿ:ಇ೦ದು ವಿಟ್ಲಪಿ೦ಡಿಯ ಸ೦ಭ್ರಮ-ಲಕ್ಷಾ೦ತರ ಮ೦ದಿಗೆ ಮಧ್ಯಾಹ್ನದ ಅನ್ನಪ್ರಸಾದ ವಿತರಣೆ-ರಥಬೀದಿಯಲ್ಲಿ ಮು೦ಜಾನೆಯಿ೦ದ ಲಕ್ಷಾ೦ತರಮ೦ದಿ ಉತ್ಸವದಲ್ಲಿ ಭಾಗಿ-ಎಲ್ಲಾ ರಸ್ತೆಗಳಲ್ಲಿ ವಾಹನ ಸ೦ಚಾರ ಬ೦ದ್........

2-3 ದಿನಗಳಲ್ಲಿ ಸೋಲಿಸುತ್ತೇವೆಂದಿದ್ದರು, 40 ದಿನಗಳ ಸಂಘರ್ಷ ನಂತರವೂ ಅಚಲವಾಗಿ ನಿಂತಿದ್ದೇವೆ: ಯುದ್ಧದಲ್ಲಿ ಗೆದ್ದಿದ್ದು ನಾವೇ; ಅಮೆರಿಕಾ ಕುರಿತು ಇರಾನ್ ಲೇವಡಿ

ಟೆಹ್ರಾನ್: ಅಮೆರಿಕಾ ಮತ್ತು ಇರಾನ್ ನಡುವೆ ಎರಡು ವಾರಗಳ ಕಾಲ ಕದನ ವಿರಾಮ ಒಪ್ಪಂದವಾಗಿದ್ದು, ಈ ನಡುವೆ ಅಮೆರಿಕಾ ವಿರುದ್ಧದ ಯುದ್ಧಲ್ಲಿ ವಿಜಯಶಾಲಿಯಾಗಿದ್ದೇವೆಂದು ಇರಾನ್ ಹೇಳಿದೆ.

ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಘೇರ್ ಘಾಲಿಬಾಫ್ ಅವರು ಈ ಕುರಿತು ಹೇಳಿಕೆ ನೀಡಿದ್ದು, ಯುದ್ಧದ ನಂತರ ಅಮೆರಿಕಾ ತನ್ನ ಗುರಿಗಳನ್ನು ಸಾಧಿಸಲು ವಿಫಲವಾಗಿದ್ದು, ಇರಾನ್ ತನ್ನ ತಾಕತ್ತನ್ನು ಸಾಬೀತುಪಡಿಸಿದೆ ಎಂದು ಹೇಳಿದ್ದಾರೆ.

ಅಮೆರಿಕಾ ಒತ್ತಡದ ನಡುವೆಯೂ ಇರಾನ್ ತನ್ನ ಪ್ರಮುಖ ಬೇಡಿಕೆಗಳನ್ನು ಒಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದೇ ಕಾರಣದಿಂದಾಗಿ ತಾತ್ಕಾಲಿಕ ಯುದ್ಧ ವಿರಾಮಕ್ಕೆ (ceasefire) ಒಪ್ಪಿಕೊಂಡಿದ್ದೇವೆಂದು ತಿಳಿಸಿದ್ದಾರೆ.

ಶತ್ರುವು ತನ್ನ ಉದ್ದೇಶಗಳನ್ನು ಸಾಧಿಸಲು ಸಾಧ್ಯವಾಗದಿದ್ದಾಗ, ಅದು ಅವರ ಸೋಲನ್ನು ಸೂಚಿಸುತ್ತದೆ. ನಾವು ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದೇವೆ ಎಂದರೆ, ಅವರು ನಮ್ಮ ಬೇಡಿಕೆಗಳನ್ನು ಒಪ್ಪಿಕೊಂಡದ್ದರಿಂದಲೇ ಎಂದು ಮೊಹಮ್ಮದ್ ಬಘೇರ್ ಘಾಲಿಬಾಫ್ ಅವರು ಹೇಳಿದ್ದಾರೆ.

ಅಮೆರಿಕವು ಎರಡರಿಂದ ಮೂರು ದಿನಗಳಲ್ಲಿ ಇರಾನ್ ಅನ್ನು ಮಣಿಸುವ ಗುರಿ ಹೊಂದಿತ್ತು, ಆದರೆ 40 ದಿನಗಳ ಯುದ್ಧದ ನಂತರವೂ ಇರಾನ್ ಅಚಲವಾಗಿ ನಿಂತಿದೆ. ಅಮೆರಿಕದ ಅತ್ಯಾಧುನಿಕ F-35 ವಿಮಾನವನ್ನು ಹೊಡೆದುರುಳಿಸಿರುವುದು ಸಣ್ಣ ವಿಷಯವಲ್ಲ. ಇರಾನ್ ತನ್ನ ಮಿಲಿಟರಿ ಸಾಮರ್ಥ್ಯವನ್ನು ಇಡೀ ವಿಶ್ವಕ್ಕೆ ತೋರಿಸಿದೆ ಎಂದು ಹೇಳಇದ್ದಾರೆ.

ಇದೇ ವೇಳೆ ಹಾರ್ಮುಜ್ ಜಲಸಂಧಿಯು (Strait of Hormuz) ಸಂಪೂರ್ಣವಾಗಿ ಇರಾನ್ ನಿಯಂತ್ರಣದಲ್ಲಿದೆ ಎಂದು ಪುನರುಚ್ಚರಿಸಿರುವ ಅವರು, ಅಮೆರಿಕದ ನೌಕಾ ದಿಗ್ಬಂಧನವನ್ನು “ಮೂರ್ಖತನದ ನಿರ್ಧಾರ” ಎಂದು ಟೀಕಿಸಿದ್ದಾರೆ. ಅಲ್ಲದೆ, ಇರಾನ್‌ನ ಹಡಗುಗಳಿಗೆ ಮುಕ್ತ ಅವಕಾಶ ನೀಡದಿದ್ದರೆ ಈ ಜಲಸಂಧಿಯಲ್ಲಿ ಇತರರ ಸಂಚಾರವನ್ನು ನಿರ್ಬಂಧಿಸಲಾಗುವುದು ಎಂದೂ ಎಚ್ಚರಿಕೆ ನೀಡಿದ್ದಾರೆ.

ಈ ನಡುವೆ, ಎರಡು ವಾರಗಳಿಂದ ಜಾರಿಯಲ್ಲಿದ್ದ ಕದನ ವಿರಾಮ ಬುಧವಾರ ಅಂತ್ಯಗೊಳ್ಳುವ ಸಾಧ್ಯತೆಯಿದ್ದು, ಅದನ್ನು ಮುಂದುವರಿಸುವ ಬಗ್ಗೆ ಉಭಯ ರಾಷ್ಟ್ರಗಳು ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಶಾಶ್ವತ ಶಾಂತಿ ಒಪ್ಪಂದದ ಬಗ್ಗೆ ಮಾತುಕತೆಗಳು ಮುಂದುವರಿದರೂ, ಹಲವು ಪ್ರಮುಖ ವಿಚಾರಗಳಲ್ಲಿ ಇನ್ನೂ ಭಿನ್ನಾಭಿಪ್ರಾಯಗಳಿನವೆ ಎಂದು ವರದಿಗಳಿ ತಿಳಿದುಬಂದಿದೆ.

ಉಭಯ ರಾಷ್ಟ್ರಗಳ ಶಾಂತಿಯುತ ಮಾತುಕತೆಗಳ ಭಾಗವಾಗಿ ಇಸ್ಲಾಮಾಬಾದ್ನಲ್ಲಿ ಇರಾನ್ ಪ್ರತಿನಿಧಿಗಳು ಮತ್ತು ಅಮೆರಿಕಾ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ನಡುವೆ ಏಪ್ರಿಲ್ 11ರಂದು ಉನ್ನತ ಮಟ್ಟದ ಚರ್ಚೆಗಳು ನಡೆದಿದ್ದವು. 1979ರ ಇಸ್ಲಾಮಿಕ್ ಕ್ರಾಂತಿಯ ನಂತರ ಇದೇ ಮೊದಲ ಬಾರಿಗೆ ಈ ಮಟ್ಟದ ನೇರ ಸಂಪರ್ಕಗಳು ನಡೆದಿರುವುದು ಗಮನಾರ್ಹವಾಗಿದೆ.

ಆದರೆ ಈ ಮಾತುಕತೆಗಳಿಂದ ಇನ್ನೂ ಅಂತಿಮ ಒಪ್ಪಂದಕ್ಕೆ ಬರಲಾಗಿಲ್ಲ. ಮುಂದಿನ ಸುತ್ತಿನ ಮಾತುಕತೆ ಯಾವಾಗ ನಡೆಯಲಿದೆ ಎಂಬುದರ ಬಗ್ಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ ಎಂದು ಇರಾನ್ ತಿಳಿಸಿದೆ.

ಒಟ್ಟಾರೆ, ಯುದ್ಧದ ತೀವ್ರತೆ ತಾತ್ಕಾಲಿಕವಾಗಿ ಕಡಿಮೆಯಾದರೂ, ಶಾಶ್ವತ ಶಾಂತಿ ಒಪ್ಪಂದದ ದಿಕ್ಕಿನಲ್ಲಿ ಇನ್ನೂ ಅನಿಶ್ಚಿತತೆ ಮುಂದುವರಿದಿದೆ. ಮಧ್ಯವರ್ತಿಗಳಾಗಿ ಪಾಕಿಸ್ತಾನ ಸೇರಿದಂತೆ ಹಲವು ರಾಷ್ಟ್ರಗಳು ಪ್ರಯತ್ನಿಸುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಯಾವ ದಿಕ್ಕಿಗೆ ಸಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

No Comments

Leave A Comment