ಅಮೆರಿಕ ಸುಪ್ರೀಂ ಕೋರ್ಟ್ ತೀರ್ಪಿಗೆ ಸೆಡ್ಡು ಹೊಡೆದ ಟ್ರಂಪ್; ಜಾಗತಿಕ ಸುಂಕ ಶೇ. 10 ರಿಂದ 15ಕ್ಕೆ ಹೆಚ್ಚಿಸಿ ಆದೇಶ!...ಕಲ್ಲು ತೂರಾಟ ಕೇಸ್​: ಇಬ್ಬರು ಹಿಂದೂ ಕಾರ್ಯಕರ್ತರ ಬಂಧನ; ಮುತಾಲಿಕ್, ಕೆರೆಹಳ್ಳಿಗೆ ನಿರ್ಬಂಧ...

ಜಾರ್ಖಂಡ್‌ ಸಮೀಪ ಚಾತ್ರಾದಲ್ಲಿ ಪತನಗೊಂಡ ರಾಂಚಿ–ದೆಹಲಿ ಏರ್ ಆಂಬ್ಯುಲೆನ್ಸ್: ಎಲ್ಲಾ 7 ಮಂದಿ ಸಾವು

ರಾಂಚಿ: ಜಾರ್ಖಂಡ್ ರಾಜಧಾನಿ ರಾಂಚಿಯಿಂದ ದೆಹಲಿಗೆ ತೆರಳುತ್ತಿದ್ದ ಏರ್ ಆಂಬುಲೆನ್ಸ್ ಸೋಮವಾರ ಸಂಜೆ ಚಾತ್ರಾ ಜಿಲ್ಲೆಯ ಸಿಮರಿಯಾ ಬ್ಲಾಕ್‌ನ ಕಸಾರಿಯಾ ಪಂಚಾಯತ್ ಪ್ರದೇಶದಲ್ಲಿ ಪತನಗೊಂಡು ಏಳು ಮಂದಿ ಸಾವಿಗೀಡಾಗಿದ್ದಾರೆ.

ಚಾತ್ರಾ ಪೊಲೀಸ್ ಅಧೀಕ್ಷಕ ಸುಮಿತ್ ಅಗರವಾಲ್ ಈ ಘಟನೆ ದೃಢಪಡಿಸಿದ್ದು, ಹೆಲಿಕಾಪ್ಟರ್ ಪತನಗೊಂಡಿದ್ದು ಎಲ್ಲಾ ಏಳು ಮಂದಿ ಮರಣ ಹೊಂದಿದ್ದಾರೆ ಎಂದರು. ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ಪ್ರಾರಂಭಿಸಲಾಗಿದೆ ಎಂದು ಅವರು ಹೇಳಿದರು.

ಈ ವಿಮಾನವು ರೆಡ್‌ಬರ್ಡ್ ಏರ್‌ವೇಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ನಡೆಸುತ್ತಿದ್ದ Beechcraft King Air BE9L ಆಗಿದ್ದು, “ರಾಂಚಿ–ದೆಹಲಿ” ಮಾರ್ಗದಲ್ಲಿ ವೈದ್ಯಕೀಯ ತುರ್ತು ಸ್ಥಳಾಂತರ (ಏರ್ ಆಂಬುಲೆನ್ಸ್) ಸೇವೆಗೆ ಬಳಸಲಾಗುತ್ತಿತ್ತು.

ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಮಾಹಿತಿ ಪ್ರಕಾರ, ವಿಮಾನದಲ್ಲಿ ಇಬ್ಬರು ಸಿಬ್ಬಂದಿ ಸದಸ್ಯರನ್ನು ಒಳಗೊಂಡಂತೆ ಒಟ್ಟು ಏಳು ಮಂದಿ ಇದ್ದರು. ವಿಮಾನವು ನಿನ್ನೆ ಸಾಯಂಕಾಲ 7:11ಕ್ಕೆ ರಾಂಚಿಯಿಂದ ಹೊರಟಿತ್ತು.

ಕೋಲ್ಕತ್ತಾ ನಿಯಂತ್ರಣದೊಂದಿಗೆ ಸಂಪರ್ಕ ಸಾಧಿಸಿದ ನಂತರ, ಹವಾಮಾನ ಕಾರಣದಿಂದ ಮಾರ್ಗ ಬದಲಾವಣೆ ಮಾಡಲು ಪೈಲಟ್ ಮನವಿ ಮಾಡಿಕೊಂಡಿದ್ದರು. ಸಂಜೆ 7:34ಕ್ಕೆ ಕೋಲ್ಕತ್ತಾ ನಿಯಂತ್ರಣದೊಂದಿಗೆ ಸಂವಹನ ಮತ್ತು ರಾಡಾರ್ ಸಂಪರ್ಕ ಕಳೆದುಕೊಂಡಿತು. ವಿಮಾನದ ಕೊನೆಯ ತಿಳಿದಿರುವ ಸ್ಥಳವು ವಾರಾಣಸಿಯಿಂದ ದಕ್ಷಿಣ-ಪೂರ್ವ ದಿಕ್ಕಿನಲ್ಲಿ ಸುಮಾರು 100 ನಾಟಿಕಲ್ ಮೈಲುಗಳ ದೂರದಲ್ಲಿತ್ತು ಎಂದು ಡಿಜಿಸಿಎ ತಿಳಿಸಿದೆ.

ವಿಮಾನದಲ್ಲಿ 41 ವರ್ಷದ ರೋಗಿ ಸಂಜಯ್ ಕುಮಾರ್ ಇದ್ದರು. ಅವರೊಂದಿಗೆ ಇಬ್ಬರು ಪೈಲಟ್‌ಗಳು — ವಿವೇಕ್ ವಿಕಾಶ್ ಭಗತ್ ಮತ್ತು ಸವರಾಜ್‌ದೀಪ್ ಸಿಂಗ್ — ವೈದ್ಯ ವಿಕಾಶ್ ಕುಮಾರ್ ಗುಪ್ತಾ, ಪ್ಯಾರಾಮೆಡಿಕ್ ಸಚಿನ್ ಕುಮಾರ್ ಮಿಶ್ರಾ ಹಾಗೂ ಸಹಾಯಕರು ಅರ್ಚನಾ ದೇವಿ ಮತ್ತು ಧುರು ಕುಮಾರ್ ಪ್ರಯಾಣಿಸುತ್ತಿದ್ದರು.

ಘಟನೆ ವರದಿಯಾದ ತಕ್ಷಣ ಸ್ಥಳೀಯ ಪೊಲೀಸ್ ಹಾಗೂ ಜಿಲ್ಲಾಧಿಕಾರಿಗಳು ಅಪಘಾತ ಸ್ಥಳಕ್ಕೆ ಧಾವಿಸಿದರು.

ವಿಮಾನವು ಏರ್ ಆಂಬುಲೆನ್ಸ್ ಸೇವೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಂಚಿಯಿಂದ ದೆಹಲಿಗೆ ಚಿಕಿತ್ಸೆಗಾಗಿ ರೋಗಿಯನ್ನು ಕರೆದೊಯ್ಯುತ್ತಿತ್ತು. ಅಪಘಾತದ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

ವಿಮಾನಯಾನ ಅಧಿಕಾರಿಗಳು ಶೀಘ್ರದಲ್ಲೇ ಸವಿಸ್ತಾರ ತನಿಖೆ ಪ್ರಾರಂಭಿಸುವ ನಿರೀಕ್ಷೆಯಿದ್ದು, ಅದರಡಿ ವಿಮಾನ ಡೇಟಾ, ತಾಂತ್ರಿಕ ದಾಖಲೆಗಳು ಹಾಗೂ ಹೊರಟ ಸಮಯದ ಹವಾಮಾನ ಪರಿಸ್ಥಿತಿಗಳನ್ನು ಪರಿಶೀಲಿಸಲಾಗುತ್ತದೆ.

No Comments

Leave A Comment