....ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವರ್ಷ೦ಪ್ರತಿಯ ವಾಡಿಕೆಯ೦ತೆ ನಡೆಯಲಿರುವ ಭಜನಾ ಸಪ್ತಾಹವು ಅಗಸ್ಟ್ 18ರಿ೦ದ ಆರ೦ಭವಾಗಲಿದೆ...126ನೇ ವರ್ಷದ ಭಜನಾ ಸಪ್ತಾಹ ಇದಾಗಿದೆ...
ಮಣ್ಣಲ್ಲಿ ಮಣ್ಣಾದ ಅಭಿನಯ ಸರಸ್ವತಿ; ಸಕಲ ಸರ್ಕಾರಿ ಗೌರವದೊಂದಿಗೆ ಸರೋಜಾದೇವಿ ಅಂತ್ಯಕ್ರಿಯೆ
ಬೆಂಗಳೂರು: ಸೋಮವಾರ ನಿಧನರಾದ ಕನ್ನಡ ಚಿತ್ರರಂಗದ ಹಿರಿಯ ನಟಿ ಬಿ.ಸರೋಜಾದೇವಿ ಅವರು ಮಂಗಳವಾರ ತಮ್ಮ ಹುಟ್ಟೂರು ಚನ್ನಪಟ್ಟಣದ ದಶಾವರದ ಮಣ್ಣಲ್ಲಿ ಮಣ್ಣಾಗಿದ್ದು, ಅಭಿನಯ ಸರಸ್ವತಿ ಇನ್ನೂ ನೆನಪು ಮಾತ್ರ.
ಇಂದು ಮಧ್ಯಾಹ್ನ ಸಕಲ ಸರ್ಕಾರಿ ಗೌರವದೊಂದಿಗೆ, ಒಕ್ಕಲಿಗ ಸಂಪ್ರದಾಯದಂತೆ ಸರೋಜಾದೇವಿ ಅವರ ಅಂತ್ಯಕ್ರಿಯೆ ನೆರವೇರಿತು. ದಶಾವರದಲ್ಲಿ ಅವರ ತಾಯಿಯ ಸಮಾಧಿ ಪಕ್ಕವೇ ಅಂತ್ಯ ಸಂಸ್ಕಾರ ನಡೆದಿದೆ.
ಸರೋಜಾದೇವಿ ಅವರ ಪುತ್ರ ಗೌತಮ್ ಅವರು ಅಂತಿಮ ವಿಧಿ ವಿಧಾನಗಳನ್ನು ಪೂರೈಸಿದರು. ಇದಕ್ಕೂ ಮುನ್ನ ಪೊಲೀಸರು ಕುಶಾಲ ತೋಪು ಸಿಡಿಸುವ ಮೂಲಕ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಸರೋಜಾದೇವಿ ಅವರ ಕುಟುಂಬಸ್ಥರು, ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಭಾಗವಹಿಸಿದ್ದರು.
ಅಂತ್ಯಸಂಸ್ಕಾರಕ್ಕೂ ಮುನ್ನ ಅವರ ಪಾರ್ಥೀವ ಶರೀರವನ್ನು ಬೆಂಗಳೂರಿನಿಂದ ಮೆರವಣಿಗೆ ಮೂಲಕ ತರಲಾಯಿತು. ಬಳಿಕ ಪಲ್ಲಕ್ಕಿಯಲ್ಲಿಟ್ಟು ಅವರ ಪಾರ್ಥೀವ ಶರೀರವನ್ನು ತಂದು ಅಂತ್ಯಸಂಸ್ಕಾರ ಮಾಡಲಾಯಿತು.
1955 ರಲ್ಲಿ ಮಹಾಕವಿ ಕಾಳಿದಾಸ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದ ಸರೋಜಾದೇವಿ ಅವರು ಅಭಿನಯದ ಮೊದಲ ಚಿತ್ರವೇ ರಾಷ್ಟ್ರ ಪ್ರಶಸ್ತಿಗೆ ಭಾಜನವಾಗಿತ್ತು. 1955 ರಲ್ಲಿ ಸರೋಜ ದೇವಿ ಶ್ರೀ ರಾಮ ಪೂಜ ಎಂಬ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಭಾರತೀಯ ಚಿತ್ರರಂಗದಲ್ಲಿ ಮಿಂಚಿದ್ದ ಸರೋಜ ದೇವಿ ಅವರು ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸಿ ಸೈ ಅನಿಸಿಕೊಂಡಿದ್ದರು.