.....ಶ್ರೀ ಕೃಷ್ಣ ಜನ್ಮಾಷ್ಠಮಿ:ಇ೦ದು ವಿಟ್ಲಪಿ೦ಡಿಯ ಸ೦ಭ್ರಮ-ಲಕ್ಷಾ೦ತರ ಮ೦ದಿಗೆ ಮಧ್ಯಾಹ್ನದ ಅನ್ನಪ್ರಸಾದ ವಿತರಣೆ-ರಥಬೀದಿಯಲ್ಲಿ ಮು೦ಜಾನೆಯಿ೦ದ ಲಕ್ಷಾ೦ತರಮ೦ದಿ ಉತ್ಸವದಲ್ಲಿ ಭಾಗಿ-ಎಲ್ಲಾ ರಸ್ತೆಗಳಲ್ಲಿ ವಾಹನ ಸ೦ಚಾರ ಬ೦ದ್........

ಸರ್ಕಾರಿ ಕೆಲಸ ಬಿಟ್ಟು ಲಂಡನ್​ಗೆ ಹೊರಟಿದ್ದ ಕೇರಳದ ರಂಜಿತಾ ಕನಸು ವಿಮಾನ ದುರಂತದಲ್ಲಿ ನುಚ್ಚುನೂರು

ಗುಜರಾತ್​ನ ಅಹಮದಾಬಾದ್​ನಲ್ಲಿ ಗುರುವಾರ ಸಂಭವಿಸಿದ ಏರ್​ ಇಂಡಿಯಾ ವಿಮಾನ ದುರಂತದಲ್ಲಿ ಕೇರಳದ ಪುಲ್ಲಾಡ್​ ಮೂಲದ ರಂಜಿತಾ ಗೋಪಕುಮಾರ್​ ಸಾವನ್ನಪ್ಪಿದ್ದಾರೆ. ಇವರ ಸಾವನ್ನು ಜಿಲ್ಲಾಧಿಕಾರಿಗಳು ಧೃಡಪಡಿಸಿದ್ದು, ಇಡೀ ಗ್ರಾಮವೇ ಶೋಕಸಾಗರದಲ್ಲಿ ಮುಳುಗಿದೆ.

ರಂಜಿತಾ ಪತ್ತನಂತಿಟ್ಟ ಜಿಲ್ಲೆಯಲ್ಲೇ ಸರ್ಕಾರಿ ಉದ್ಯೋಗದಲ್ಲಿದ್ದರು. ಆದರೆ ತಮ್ಮ ಸ್ವಂತ ಮನೆ ಹೊಂದುವ ಕನಸನ್ನು ನನಸಾಗಿಸಿಕೊಳ್ಳಲು, ವಿದೇಶದಲ್ಲಿ ಕೆಲಸ ಮಾಡುವ ಸಲುವಾಗಿ ಇಲ್ಲಿ ರಜೆ ತೆಗೆದುಕೊಂಡು ಲಂಡನ್​ಗೆ ಹೊರಟಿದ್ದರು. ಈ ಹಿಂದೆ ಓಮನ್​ನ ಸಲಾಲ್​ನಲ್ಲಿ ಕೆಲಸ ಮಾಡಿದ್ದ ರಂಜಿತಾ, ಇದೀಗ ಲಂಡನ್​ನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದರು. ಲಂಡನ್​ಗೆ ಹೋದ ಬಳಿಕ ಮತ್ತೆ ಮನೆಗೆ ಓಣಂ ಹಬ್ಬಕ್ಕೇ ಬರುವುದೆಂದು ಅವರು ಪ್ಲಾನ್​ ಕೂಡ ಮಾಡಿಕೊಂಡಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿತ್ತು.

ತಮ್ಮೆಲ್ಲ ಕೆಲಸ-ಕಾರ್ಯಗಳನ್ನು ಮುಗಿಸಿಕೊಂಡ ರಂಜಿತಾ ಕೊಚ್ಚಿಯಿಂದ ಗುಜರಾತ್​ನ ಅಹಮದಾಬಾದ್​ಗೆ ತೆರಳಿದ್ದರು. ಬಳಿಕ ಅಹಮದಾಬಾದ್​ನಿಂದ ಲಂಡನ್​ಗೆ ತೆರಳಲು ಏರ್​ ಇಂಡಿಯಾ ವಿಮಾನವೇರಿದ್ದರು. ಆದರೆ ತನ್ನ ಕುಟುಂಬಕ್ಕಾಗಿ ಪಟ್ಟ ಕಷ್ಟ, ಹೊತ್ತ ಕನಸುಗಳು ವಿಮಾನ ಟೇಕ್​ಆಪ್​​ ಆದ ಕೆಲವೇ ನಿಮಿಷಗಳಲ್ಲಿ ನುಚ್ಚುನೂರಾಗಿದೆ.

ರಂಜಿತಾ ಅವರಿಗೆ ತಾಯಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಅವರ ಹೊಸ ಮನೆಯ ನಿರ್ಮಾಣ ಕಾರ್ಯ ಮುಕ್ಕಾಲು ಭಾಗದಷ್ಟು ಪೂರ್ಣಗೊಂಡಿದೆ. ಅಲ್ಲಿನ ಸ್ಥಳೀಯ ನಿವಾಸಿ ಮತ್ತು ಸಾರ್ವಜನಿಕ ಕಾರ್ಯಕರ್ತ ಅನೀಶ್​ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. “ರಂಜಿತಾ ಅವರು ವಿದೇಶಕ್ಕೆ ತೆರಳಲು ನಿರ್ಧರಿಸಿದ್ದರು. ಅವರಿಗೆ 10ನೇ ತರಗತಿಯಲ್ಲಿ ಮತ್ತು 7ನೇ ತರಗತಿಯಲ್ಲಿ ಓದುತ್ತಿರುವ ಇಬ್ಬರು ಮಕ್ಕಳಿದ್ದಾರೆ. ನಿನ್ನೆ ಅವರ ಸಂಬಂಧಿಕರು ಮಕ್ಕಳನ್ನು ಶಾಲೆಗೆ ಬಿಟ್ಟು ಬಂದಿದ್ದರು” ಎಂದು ತಿಳಿಸಿದ್ದಾರೆ.

ಮನೆ ಬಿಟ್ಟ ಅಮ್ಮ ಲಂಡನ್​ ತಲುಪುತ್ತಾರೆ, ಓಣಂಗೆ ಮರಳಿ ಬರಲಿದ್ದಾರೆ ಎಂದು ಮಕ್ಕಳು ನಂಬಿದ್ದರು. ಆದರೆ ಅವರ ಸಾವಿನ ಸುದ್ದಿ ಕೇಳಿದಾಗ ಆಘಾತಕ್ಕೊಳಗಾದ ಮನೆಯವರ ರೋದನ ಮುಗಿಲು ಮುಟ್ಟಿದೆ. ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ತಮ್ಮ ಸ್ವಂತ ಮನೆಯ ಕನಸನ್ನು ನನಸಾಗಿಸಿಕೊಳ್ಳಲು ವಿದೇಶಕ್ಕೆ ಹೊರಟಿದ್ದ ರಂಜಿತಾ ದೇಶದ ಗಡಿ ದಾಟುವ ಮುನ್ನವೇ ವಿಧಿಯಾಟಕ್ಕೆ ಬಲಿಯಾಗಿದ್ದಾರೆ. ಮರಳಿ ಓಣಂಗೆ ಬರುವ ನಿರೀಕ್ಷೆಯಲ್ಲಿದ್ದ ಸಂಬಂಧಿಕರಿಗೆ ರಂಜಿತಾ ಶವವಾಗಿ ಪುಲ್ಲಾಡ್​ಗೆ ಮರಳುವುದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಅಹಮದಾಬಾದ್​ ವಿಮಾನ ಅಪಘಾತದಲ್ಲಿ ಕೇವಲ ರಂಜಿತಾರಲ್ಲ, ಇವರಂತೆ ಸಾಕಷ್ಟು ಕನಸು ಹೊತ್ತು ಪ್ರಯಾಣಿಸುತ್ತಿದ್ದ ಅದೆಷ್ಟೋ ಮುಗ್ಧ ಜೀವಗಳು ಬಲಿಯಾಗಿವೆ. ಸಾವನ್ನಪ್ಪಿದವರ ಒಂದೊಂದು ಕಥೆಯೂ ಕರುಣಾಜನಕವಾಗಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಆ ಭಗವಂತ ದುಃಖ ಭರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸೋಣ.

No Comments

Leave A Comment