37 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ; 26 ಅಭ್ಯರ್ಥಿಗಳು ಅವಿರೋಧ ಆಯ್ಕೆ....ಮಾರ್ಚ್ 19ರ೦ದು ಚಾ೦ದ್ರಮಾನ ಯುಗಾದಿಯ ದಿನವಾದ ಗುರುವಾರದ೦ದು ಉಡುಪಿ ಶ್ರೀಲಕ್ಷ್ಮೀ ವೆ೦ಕಟರಮಣ ದೇವಸ್ಥಾನದ ಪೂಜಾ ಪರ್ಯಾಯ ಹಸ್ತಾ೦ತರ...
ಬೆಂಗಳೂರು ಕಾಲ್ತುಳಿತ: ಪ್ರಮುಖ ರಸ್ತೆಗಳಲ್ಲಿ ‘RCB ವಿಜಯೋತ್ಸವ ಮೆರವಣಿಗೆಗೆ ಪೊಲೀಸರ ಸಲಹೆ; ತಿರಸ್ಕರಿಸಿದ ರಾಜ್ಯ ಸರ್ಕಾರ, ಆಯೋಜಕರು!
ಬೆಂಗಳೂರು: RCB ಚೊಚ್ಚಲ ಬಾರಿಗೆ ಐಪಿಎಲ್ ಕಪ್ ಗೆದ್ದ ಹಿನ್ನೆಲೆಯಲ್ಲಿ ವಿಧಾನಸೌಧದಿಂದ ಎಂಜಿ ರಸ್ತೆ ಅಲ್ಲದೇ ನಗರದ ಪ್ರಮುಖ ಪ್ರದೇಶಗಳು ಸೇರಿದಂತೆ ಇಡೀ ಬೆಂಗಳೂರಿನಲ್ಲಿ ವಿಜಯೋತ್ಸವ ಮೆರವಣಿಗೆ ನಡೆಸಲು ನಗರ ಪೊಲೀಸರು ಸಲಹೆ ನೀಡಿದ್ದರು. ಇದರಿಂದ ವಿವಿಧ ಪ್ರದೇಶಗಳಿಗೆ ತಂಡ ತೆರಳುವುದರಿಂದ ಅಭಿಮಾನಿಗಳು ಒಂದೆಡೆ ಸೇರುವ ಬದಲು ರಸ್ತೆ ಬದಿಯಲ್ಲಿಯೇ ಸಂಭ್ರಮಿಸುತ್ತಿದ್ದರು. ಜನ ಗುಂಪುಗೊಡಿದ್ದರೆ ಅಹಿತರ ಘಟನೆ ನಡೆಯಬಹುದು ಎಂಬ ಸಲಹೆ ನೀಡಲಾಗಿತ್ತು. ಆದರೆ, ಆ ಸಲಹೆಯನ್ನು ಕಾರ್ಯಕ್ರಮ ಆಯೋಜಕರು ಮತ್ತು ರಾಜ್ಯ ಸರ್ಕಾರ ಸಂಪೂರ್ಣವಾಗಿ ತಿರಸ್ಕರಿಸಿತ್ತು.
ರಾತ್ರಿಯಿಡೀ ಕಾರ್ಯನಿರ್ವಹಿಸಿದ್ದ ಪೊಲೀಸರು:
ಜೂನ್ 3 ರಂದು ಆರ್ ಸಿಬಿ ಗೆಲುವು ಸಾಧಿಸಿದ ಮಂಗಳವಾರ ರಾತ್ರಿ ಅಲ್ಲದೇ ಬುಧವಾರ ಮುಂಜಾನೆ 4 ಗಂಟೆಯವರೆಗೂ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯ ನಿರ್ವಹಿಸಿದ್ದು, ಆತುರವಾಗಿ ಅದ್ದೂರಿಯಾಗಿ ಕಾರ್ಯಕ್ರಮ ಆಯೋಜನೆ ಬೇಡ. ಅಲ್ಲದೇ ಅದಕ್ಕಾಗಿ ಎಚ್ಚರಿಕೆಯಿಂದ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಪೊಲೀಸರು ಆಯೋಜಕರಿಗೆ ಹೇಳಿದ್ದರು.
ಕಾರ್ಯಕ್ರಮಕ್ಕೆ ಎಷ್ಟು ಜನರು ಸೇರಬಹುದು, ಹೇಗೆಲ್ಲಾ ಸಿದ್ಧತೆ ಮಾಡಲಾಗಿದೆ. ಎಷ್ಟು ಪಾಸ್ ಗಳನ್ನು ನೀಡಬೇಕು ಎಂಬುದನ್ನು ಆಯೋಜಕರು ನೀಡಿರಲಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು. ಎಲ್ಲಾವನ್ನೂ ಮೌಖಿಕವಾಗಿ ಹೇಳಿದ್ದರಿಂದ ಬ್ಯಾರಿಕೇಡ್ ಕೂಡಾ ಸರಿಯಾಗಿ ವ್ಯವಸ್ಥೆ ಮಾಡಲು ಸಾಧ್ಯವಾಗಲಿಲ್ಲ ಎಂದು ಅವರು ತಿಳಿಸಿದರು.
VIP ಭದ್ರತೆಯತ್ತ ಗಮನ ಹರಿಸುವಂತೆ ಪೊಲೀಸರಿಗೆ ಸರ್ಕಾರದ ನಿರ್ದೇಶನ: ಕಾರ್ಯಕ್ರಮ ಆಯೋಜನೆಗೆ ಸರ್ಕಾರ ಅಥವಾ ಬಿಬಿಎಂಪಿಯಿಂದ ಅನುಮತಿ ಪಡೆಯಲಾಗಿತ್ತೇ? ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲದಿದ್ದರೂ ಪೊಲೀಸರು ಸಂಭ್ರಮಾಚರಣೆಗೆ ಅನುಮತಿ ನೀಡಿರಲಿಲ್ಲ. ರಾಜಕಾರಣಿಗಳ ಮೂಲಕ ಆಯೋಜಕರು ಒತ್ತಡ ಹೇರಿದ್ದರು ಎಂದು ಮೂಲಗಳು ಹೇಳಿವೆ.
ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ವಿಧಾನಸೌಧ, ಹೆಚ್ ಎಎಲ್ ನಿಂದ ತಾಜ್ ವೆಸ್ಟ್ ಎಂಡ್ ಮಾರ್ಗ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬಂದೋಬಸ್ತ್ ಮಾಡಲು ನಿರ್ಧರಿಸಲಾಗಿತ್ತು. ಆದರೆ ವಿಧಾನಸೌಧ ಮತ್ತು ಹೆಚ್ ಎಎಲ್ ನಿಂದ ತಾಜ್ ವೆಸ್ಟ್ ಎಂಡ್ ಹೋಟೆಲ್ ಗೆ ತೆರಳುವ ಮಾರ್ಗದಲ್ಲಿ VIP ಭದ್ರತೆಯತ್ತ ಗಮನ ಹರಿಸುವಂತೆ ಸರ್ಕಾರ ನಿರ್ದೇಶನ ನೀಡಿತ್ತು. ಇದೇ ವೇಳೆ ಬೆಳಗ್ಗೆ 11 ಗಂಟೆಗೆ ಸ್ಟೇಡಿಯಂ ಬಳಿ ಅಭಿಮಾನಿಗಳು ಜಮಾಯಿಸಿದ್ದರು. ಅಲ್ಲಿ ಕಡಿಮೆ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿತ್ತು.
ಜನದಟ್ಟಣೆ ನಿಯಂತ್ರಣಕ್ಕೆ ಬೌನ್ಸರ್ ಗಳು:
ಸಂಭ್ರಮಾಚರಣೆ ಬಗ್ಗೆ ಪೊಲೀಸರು ಸ್ಪಷ್ಟವಾಗಿ ಸೂಚನೆ ನೀಡಿದ್ದರೂ ಆರ್ ಸಿಬಿ ಸೋಶಿಯಲ್ ಮೀಡಿಯಾದಲ್ಲಿ ಫೋಸ್ಟ್ ಮಾಡಿದಂತೆ ಉಚಿತ ಪಾಸ್ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಸ್ಟೇಡಿಯಂ ಬಳಿ ಸೇರತೊಡಗಿದರು. ಕ್ರೀಡಾಂಗಣದ ಸುತ್ತಮುತ್ತಲೂ ಕೂಡ ಜನದಟ್ಟಣೆ ನಿಯಂತ್ರಣವನ್ನು ಬೌನ್ಸರ್ಗಳ ಗುಂಪಿಗೆ ಬಿಡಲಾಗಿತ್ತು ಎಂದು ಮೂಲಗಳು ಹೇಳಿವೆ. ಈ ಹಿಂದೆ ಇಂತಹ ಸಾಕಷ್ಟು ಜನದಟ್ಟಣೆಯನ್ನು ಪೊಲೀಸ್ ಪಡೆ ಯಶಸ್ವಿಯಾಗಿ ನಿಭಾಯಿಸಿದೆ ಎಂದು ಅಧಿಕಾರಿಗಳು ಸಮರ್ಥಿಸಿಕೊಂಡರು.