.....ಶ್ರೀ ಕೃಷ್ಣ ಜನ್ಮಾಷ್ಠಮಿ:ಇ೦ದು ವಿಟ್ಲಪಿ೦ಡಿಯ ಸ೦ಭ್ರಮ-ಲಕ್ಷಾ೦ತರ ಮ೦ದಿಗೆ ಮಧ್ಯಾಹ್ನದ ಅನ್ನಪ್ರಸಾದ ವಿತರಣೆ-ರಥಬೀದಿಯಲ್ಲಿ ಮು೦ಜಾನೆಯಿ೦ದ ಲಕ್ಷಾ೦ತರಮ೦ದಿ ಉತ್ಸವದಲ್ಲಿ ಭಾಗಿ-ಎಲ್ಲಾ ರಸ್ತೆಗಳಲ್ಲಿ ವಾಹನ ಸ೦ಚಾರ ಬ೦ದ್........
ದೇಶ ಒಬ್ಬೊಬ್ಬ ಉಗ್ರನನ್ನೂ ಹುಡುಕಿ ಹೊಡೆದುರುಳಿಸುತ್ತೇವೆ, ಊಹಿಸಲು ಸಾಧ್ಯವಾಗದಷ್ಟು ದೊಡ್ಡ ಶಿಕ್ಷೆ ನೀಡುವುದು ಗ್ಯಾರಂಟಿ: ಪ್ರಧಾನಿ ಮೋದಿ ಶಪಥ
ಬಿಹಾರ: ‘ಇಂದು ಬಿಹಾರದ ಈ ಮಣ್ಣಿನಲ್ಲಿ ನಿಂತು ಇಡೀ ಜಗತ್ತಿಗೆ ಹೇಳುತ್ತಿದ್ದೇನೆ, ಭಾರತವು ಪ್ರತಿಯೊಬ್ಬ ಭಯೋತ್ಪಾದಕ ಮತ್ತು ಅವರ ಬೆಂಬಲಿಗರನ್ನು ಪತ್ತೆಹಚ್ಚಿ, ಗುರುತಿಸಿ ಶಿಕ್ಷಿಸಲಿದೆ. ಈ ಭೂಮಿಯ ತುದಿಯವರೆಗೆ ಹಿಂಬಾಲಿಸುತ್ತೇವೆ. ಭಾರತದ ಚೈತನ್ಯವು ಭಯೋತ್ಪಾದನೆಯಿಂದ ಎಂದಿಗೂ ಮುರಿಯುವುದಿಲ್ಲ. ಭಯೋತ್ಪಾದನೆಗೆ ಶಿಕ್ಷೆಯಾಗದೆ ಉಳಿಯುವುದಿಲ್ಲ. ಈ ದೇಶದ ಜನರಿಗೆ ನ್ಯಾಯ ಸಿಗುವಂತೆ ನೋಡಿಕೊಳ್ಳಲು ಎಲ್ಲ ಪ್ರಯತ್ನಗಳನ್ನು ಮಾಡುತ್ತೇವೆ’ ಎಂದು ಪ್ರಧಾನಿ ಮೋದಿ ಉಗ್ರರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಭಯೋತ್ಪಾದಕರನ್ನು ಸಂಪೂರ್ಣವಾಗಿ ನಿರ್ನಾಮ ಮಾಡುವ ನಮ್ಮ ಸಂಕಲ್ಪದಲ್ಲಿ ಇಡೀ ರಾಷ್ಟ್ರವು ಒಂದಾಗಿದೆ. ಮಾನವೀಯತೆಯನ್ನು ನಂಬುವ ಪ್ರತಿಯೊಬ್ಬರೂ ನಮ್ಮೊಂದಿಗಿದ್ದಾರೆ. ನಮ್ಮೊಂದಿಗೆ ನಿಂತಿರುವ ವಿವಿಧ ದೇಶಗಳ ಜನರು ಮತ್ತು ಅವರ ನಾಯಕರಿಗೆ ನಾನು ಈ ಸಮಯದಲ್ಲಿ ಧನ್ಯವಾದ ಹೇಳುತ್ತೇನೆ ಎಂದು ಹೇಳಿದರು.
ಕಳೆದ ಮಂಗಳವಾರ ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭೀಕರ ಉಗ್ರರ ದಾಳಿಯ ನಂತರ ಬಿಹಾರದಲ್ಲಿ ಇಂದು ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಭಾಷಣ ಆರಂಭಕ್ಕೆ ಪಹಲ್ಗಾಮ್ ದುರಂತದಲ್ಲಿ ಮೃತಪಟ್ಟ 26 ಮಂದಿಗೆ 2 ನಿಮಿಷ ಶ್ರದ್ಧಾಂಜಲಿ ಸಲ್ಲಿಸಿದರು.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಭಯೋತ್ಪಾದಕರು ದೇಶದ ಅಮಾಯಕ ಜನರನ್ನು ಕೊಂದರು. ಈ ಘಟನೆ ನಂತರ ಇಡೀ ದೇಶ ದುಃಖಿತವಾಗಿದೆ ಮತ್ತು ನೋವಿನಲ್ಲಿದೆ. ಬಲಿಪಶುಗಳ ಕುಟುಂಬಗಳೊಂದಿಗೆ ನಾವು ನಿಲ್ಲುತ್ತೇವೆ. ಭಯೋತ್ಪಾದಕರನ್ನು ಬಿಡಲಾಗುವುದಿಲ್ಲ, ಅವರ ವಿರುದ್ಧ ಬಲವಾದ ಕ್ರಮ ಕೈಗೊಳ್ಳಲಾಗುವುದು, ಶಿಕ್ಷೆ ಎಷ್ಟು ಕಠಿಣವಾಗಿರುತ್ತದೆ ಎಂದರೆ ಭಯೋತ್ಪಾದಕರು ಎಂದಿಗೂ ಯೋಚಿಸಲು ಸಾಧ್ಯವಿಲ್ಲ. ಈ ದಾಳಿಗೆ ಸಂಚು ರೂಪಿಸಿದವರಿಗೆ ಊಹಿಸಲು ಸಾಧ್ಯವಾಗದಷ್ಟು ದೊಡ್ಡ ಶಿಕ್ಷೆ ಸಿಗುತ್ತದೆ ಎಂದು ನಾನು ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ. 140 ಕೋಟಿ ಭಾರತೀಯರ ಇಚ್ಛಾಶಕ್ತಿ ಈಗ ಭಯೋತ್ಪಾದಕರ ಬೆನ್ನು ಮುರಿಯುವುದಂತೂ ಖಂಡಿತ ಎಂದರು.