
ಗುಜರಾತ್: ಪಟಾಕಿ ಕಾರ್ಖಾನೆಯಲ್ಲಿ ಬೆಂಕಿ ಅವಘಡ, 17 ಕಾರ್ಮಿಕರ ಸಾವು; ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ
ಅಹಮದಾಬಾದ್: ಗುಜರಾತಿನ ಬನಸ್ಕಾಂತ ಬಳಿಯಿರುವ ದೀಸಾದಲ್ಲಿನ ಪಟಾಕಿ ಕಾರ್ಖಾನೆ ಮತ್ತು ಗೋದಾಮಿನಲ್ಲಿ ಭೀಕರ ಬೆಂಕಿ ಕಾಣಿಸಿಕೊಂಡಿದ್ದು, 17 ಮಂದಿ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಕೂಡಲೇ ದೀಶಾ ಪುರಸಭೆಯ ಅಗ್ನಿಶಾಮಕ ಸಿಬ್ಬಂದಿ ಮತ್ತು 108 ಆಂಬ್ಯುಲೆನ್ಸ್ಗಳು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಿವೆ.
ಪಟಾಕಿ ತಯಾರಿಕೆಗೆ ಬಳಸುತ್ತಿದ್ದ ಗನ್ ಪೌಡರ್ ನಲ್ಲಿ ಭಾರಿ ಸ್ಫೋಟ ಸಂಭವಿಸಿ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸ್ಫೋಟದ ರಭಸಕ್ಕೆ ಪಟಾಕಿ ಕಾರ್ಖಾನೆ ಪಕ್ಕದಲ್ಲಿದ್ದ ಗೋದಾಮು ಕುಸಿದಿದ್ದು, ಅವಶೇಷಗಳು 200 ಮೀಟರ್ ದೂರಕ್ಕೆ ಚದುರಿಹೋಗಿವೆ. ಸ್ಫೋಟ ಸಂಭವಿಸಿದಾಗ ಕಾರ್ಮಿಕರು ಪಟಾಕಿಗಳನ್ನು ತಯಾರಿಸುತ್ತಿದ್ದರು ಎಂದು ಪ್ರಾಥಮಿಕ ಮೂಲಗಳಿಂದ ತಿಳಿದುಬಂದಿದೆ.
ಸ್ಫೋಟವು ತೀವ್ರತೆ ಎಷ್ಟು ಭೀಕರವಾಗಿತ್ತೆಂದರೆ ಕಾರ್ಮಿಕರ ದೇಹದ ಭಾಗಗಳು ಕೆಲವು ದೂರಕ್ಕೆ ಎಸೆಯಲ್ಪಟ್ಟಿವೆ. ಪಕ್ಕದ ಹೊಲಗಳಲ್ಲಿಯೂ ಸಹ ಅವಶೇಷಗಳು ಕಂಡುಬಂದಿವೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಿಸಲು ಹರಸಾಹಸ ಪಟ್ಟಿದ್ದಾರೆ.
ಬೆಂಕಿಯ ತೀವ್ರತೆಯಿಂದಾಗಿ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಎಷ್ಟು ಕಾರ್ಮಿಕರು ಘಟನಾ ಸ್ಥಳದಲ್ಲಿದ್ದರು. ಅವರ್ಲಿ ಎಷ್ಟು ಮಂದಿ ಸುರಕ್ಷಿತವಾಗಿದ್ದಾರೆ ಎಂಬ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಿಲ್ಲ.
ಸುಮಾರು ಏಳು ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಸುಮಾರು ಐವರು ಗಾಯಗೊಂಡ ಕಾರ್ಮಿಕರನ್ನು ಚಿಕಿತ್ಸೆಗಾಗಿ ದೀಸಾ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಘಟನೆಯಲ್ಲಿ 17 ಮಂದಿ ಮೃತಪಟ್ಟಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ.
ದೀಸಾದ ಕೈಗಾರಿಕಾ ಪ್ರದೇಶದಲ್ಲಿನ ಪಟಾಕಿ ಕಾರ್ಖಾನೆಯಲ್ಲಿ ಇಂದು ಬೆಳಗ್ಗೆ ಭಾರಿ ಸ್ಫೋಟ ಸಂಭವಿಸಿದೆ ಎಂದು ಬನಸ್ಕಾಂತ ಕಲೆಕ್ಟರ್ ಮಿಹಿರ್ ಪಟೇಲ್ ಹೇಳಿದ್ದಾರೆ. ಸ್ಫೋಟದ ರಭಸಕ್ಕೆ ಕಾರ್ಖಾನೆಯ ಸ್ಲ್ಯಾಬ್ ಕುಸಿದಿದೆ. ಪಾಲಿಕೆ ಅಗ್ನಿಶಾಮಕ ದಳದ ಸಿಬ್ಬಂದಿ ಇದೀಗ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ ಎಂದು ಅವರು ತಿಳಿಸಿದ್ದಾರೆ.