ನವೆ೦ಬರ್ 25ರಿ೦ದ ಉಡುಪಿಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವವು ಆರ೦ಭಗೊ೦ಡಿದ್ದು ,ಇದು 97ನೇ ವರ್ಷದ ಭಜನಾ ಸಪ್ತಾಹ ಮಹೋತ್ಸವವಾಗಿರುತ್ತದೆ........ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ
ಭಾರತ ರತ್ನ ಸಚಿನ್ ತೆಂಡೂಲ್ಕರ್ ಕಿರೀಟಕ್ಕೆ ಜೀವಮಾನ ಸಾಧನೆ ಪ್ರಶಸ್ತಿ ಗರಿ
ಫೆಬ್ರವರಿ 1 ರಂದು ಅಂದರೆ ನಾಳೆ ನಡೆಯಲ್ಲಿರುವ ಬಿಸಿಸಿಐ ವಾರ್ಷಿಕ ಪ್ರಶಸ್ತಿ ಸಮಾರಂಭದಲ್ಲಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಜೀವಮಾನ ಸಾಧನೆ ಪ್ರಶಸ್ತಿಗೆ ಭಾಜನರಾಗಲಿದ್ದಾರೆ ಎಂದು ವರದಿಯಾಗಿದೆ. 2013 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ ಮಾಸ್ಟರ್ ಬ್ಲಾಸ್ಟರ್ ತಮ್ಮ ವೃತ್ತಿ ಬದುಕಿನಲ್ಲಿ ಮುರಿಯಲಾಗದಂತಹ ಹಲವು ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಕ್ರಿಕೆಟ್ ಲೋಕದಲ್ಲಿ ತನ್ನದೇಯಾದಂತಹ ಕೋಟ್ಯಾಂತರ ಅಭಿಮಾನಿ ಬಳಗವನ್ನು ಹೊಂದಿರುವ ಸಚಿನ್ ತೆಂಡೂಲ್ಕರ್ಗೆ ನಾನಾ ಪ್ರಶಸ್ತಿಗಳು ಒಲಿದು ಬಂದಿವೆ. ಇದೀಗ ಮುಂಬೈನಲ್ಲಿರುವ ಕೇಂದ್ರ ಕಚೇರಿಯಲ್ಲಿ ನಡೆಯಲ್ಲಿರುವ ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಚಿನ್ ತೆಂಡೂಲ್ಕರ್ಗೆ ಬಿಸಿಸಿಐ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಿದೆ. ಕಳೆದ ವರ್ಷ ನಡೆದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರವಿಶಾಸ್ತ್ರಿ ಮತ್ತು ಮಾಜಿ ಅನುಭವಿ ವಿಕೆಟ್ಕೀಪರ್ ಫಾರೂಕ್ ಇಂಜಿನಿಯರ್ ಕರ್ನಲ್ ಸಿಕೆ ನಾಯುಡು ಜೀವಮಾನ ಸಾಧನೆ ಪ್ರಶಸ್ತಿಯನ್ನು ಸ್ವೀಕರಿಸಿದ್ದರು.
ಭಾರತ ರತ್ನ ಸಚಿನ್ ತೆಂಡೂಲ್ಕರ್
ಸಚಿನ್ ಈ ಹಿಂದೆ ಭಾರತದ ಅತ್ಯುನ್ನತ ಗೌರವ ಭಾರತ ರತ್ನವನ್ನು ಪಡೆದಿದ್ದಾರೆ. ಇದಲ್ಲದೆ, ಅವರು ಅರ್ಜುನ್ ಪ್ರಶಸ್ತಿ, ಖೇಲ್ ರತ್ನ, ಪದ್ಮಶ್ರೀ, ಪದ್ಮವಿಭೂಷಣ ಮತ್ತು ಮಹಾರಾಷ್ಟ್ರ ಭೂಷಣ ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ. ಹಾಗೆಯೇ ಐಸಿಸಿ ಮತ್ತು ಬಿಸಿಸಿಐ ಕೂಡ ಸಚಿನ್ಗೆ ಹಲವು ಕ್ರೀಡಾ ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ.
ಸಚಿನ್ ವೃತ್ತಿ ಬದುಕು
ಸಚಿನ್ ಭಾರತದ ಪರ 1 ಟಿ20, ದಾಖಲೆಯ 200 ಟೆಸ್ಟ್ ಮತ್ತು 463 ಏಕದಿನ ಅಂದರೆ ಒಟ್ಟು 664 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ ಅವರು ಟೆಸ್ಟ್ನಲ್ಲಿ 15921 ರನ್, ಏಕದಿನದಲ್ಲಿ 18426 ರನ್ ಗಳಿಸಿ ದಾಖಲೆ ಬರೆದಿದ್ದಾರೆ. ಸಚಿನ್ ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ 100 ಶತಕ ಸಿಡಿಸಿದ ದಾಖಲೆ ಕೂಡ ಇದೆ. ಈ ಕಾರಣಕ್ಕಾಗಿಯೇ ಬಿಸಿಸಿಐ ಅವರಿಗಾಗಿ ಈ ದೊಡ್ಡ ಪ್ರಶಸ್ತಿ ನೀಡಿ ಗೌರವಿಸುತ್ತಿದೆ.
ಜೀವಮಾನ ಸಾಧನೆ ಪ್ರಶಸ್ತಿ ಪಡೆದ ದಿಗ್ಗಜರಿವರು
ಇನ್ನು ಜೀವಮಾನ ಸಾಧನೆಗಾಗಿ ನೀಡುವ ಸಿಕೆ ನಾಯುಡು ಪ್ರಶಸ್ತಿಯ ಬಗ್ಗೆ ಹೇಳುವುದಾದರೆ.. ಸಚಿನ್ ಅವರಿಗಿಂತ ಮೊದಲು ಭಾರತೀಯ ಕ್ರಿಕೆಟ್ನ ಅನೇಕ ದಂತಕಥೆಗಳು ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಕಳೆದ ಬಾರಿ ಅಂದರೆ 2023ರಲ್ಲಿ ಟೀಂ ಇಂಡಿಯಾದ ಮಾಜಿ ಕೋಚ್ ರವಿಶಾಸ್ತ್ರಿ ಅವರಿಗೆ ಈ ಪ್ರಶಸ್ತಿ ನೀಡಲಾಗಿತ್ತು. ಇವರಿಗಿಂತ ಮೊದಲು ಲಾಲಾ ಅಮರನಾಥ್, ಸೈಯದ್ ಮುಷ್ತಾಕ್ ಅಲಿ, ವಿಜಯ್ ಹಜಾರೆ, ಕೆಎನ್ ಪ್ರಭು, ಹೇಮು ಅಧಿಕಾರಿ, ಸುಭಾಷ್ ಗುಪ್ತೆ, ಮನ್ಸೂರ್ ಅಲಿ ಖಾನ್ ಪಟೌಡಿ ಕೂಡ ಈ ಪ್ರಶಸ್ತಿ ಪಡೆದಿದ್ದಾರೆ.
ಇವರಲ್ಲದೆ ಸುನಿಲ್ ಗವಾಸ್ಕರ್, ಬಿಬಿ ನಿಂಬಾಳ್ಕರ್, ಚಂದು ಬೋರ್ಡೆ, ಬಿಶನ್ ಸಿಂಗ್ ಬೇಡಿ, ಎ ವೆಂಕಟರಾಘವನ್, ಇಎಎಸ್ ಪ್ರಸನ್ನ, ಬಿಎಸ್ ಚಂದ್ರಶೇಖರ್, ಮೊಹಿಂದರ್ ಅಮರನಾಥ್, ಸಲೀಂ ದುರಾನಿ, ಅಜಿತ್ ವಾಡೇಕರ್, ಕಪಿಲ್ ದೇವ್, ದಿಲೀಪ್ ವೆಂಗ್ಸರ್ಕರ್, ಸೈಯದ್ ಕಿರ್ಮಾನಿ, ರಾಜಿಂದರ್ ಗೋಯಲ್, ಪದ್ಮಾಕರ್ ಶಿವಣ್ಣಕರ್, ಕೆ. ಫಾರೂಕ್ ಇಂಜಿನಿಯರ್ ಅವರಿಗೆ ಸಿಕೆ ನಾಯ್ಡು ಪ್ರಶಸ್ತಿ ನೀಡಿ ಗೌರವಿಸಲಾಗಿದೆ.