``````````````ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆ ,ಅಭಿಮಾನಿಗಳಿಗೆ "ಶ್ರೀಅನ೦ತವೃತದ"ಶುಭಾಶಯಗಳು......

Sheikh Hasina: ಬಾಂಗ್ಲಾದೇಶದಲ್ಲಿ ಭುಗಿಲೆದ್ದ ಪ್ರತಿಭಟನೆ; ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ, ಭಾರತಕ್ಕೆ ಪಲಾಯನ

ಢಾಕಾ: ಉದ್ಯೋಗ ಕೋಟಾ ಸುಧಾರಣೆಗಳ ಕುರಿತು ವಾರದಿಂದ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಗಳ ನಂತರ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿದ್ದಾರೆ ಎಂದು ಬಾಂಗ್ಲಾದೇಶ ಹೈಕಮಿಷನ್ ಅಧಿಕಾರಿಗಳು ದೆಹಲಿಯಲ್ಲಿ ಮಾಧ್ಯಮಗಳಿಗೆ ಖಚಿತಪಡಿಸಿದ್ದಾರೆ. ಶೇಖ್ ಹಸೀನಾ ರಾಜೀನಾಮೆಯ ಬಳಿಕ ಇಂದು ಢಾಕಾದಿಂದ “ಸುರಕ್ಷಿತ ಸ್ಥಳ”ಕ್ಕೆ ಪಲಾಯನ ಮಾಡಿದ್ದಾರೆ. ರಾಯಿಟರ್ಸ್ ಪ್ರಕಾರ, ಅವರು ಇಂದು ಭಾರತಕ್ಕೆ ಬಂದಿಳಿದಿದ್ದಾರೆ. ಆಕೆ ಮತ್ತು ಆಕೆಯ ಸಹೋದರಿ ತನ್ನ ಅಧಿಕೃತ ನಿವಾಸವಾದ ಗೊನೊ ಭಾಬನ್‌ನಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಬಾಂಗ್ಲಾದೇಶದಲ್ಲಿ ಕನಿಷ್ಠ 300 ಜನರನ್ನು ಬಲಿತೆಗೆದುಕೊಂಡ ಹಿಂಸಾಚಾರದ ಹಿನ್ನೆಲೆಯಲ್ಲಿ ಪ್ರಧಾನಿ ಶೇಖ್ ಹಸೀನಾ ಇಂದು ರಾಜೀನಾಮೆ ನೀಡಿದ್ದಾರೆ ಎಂದು ದೆಹಲಿಯಲ್ಲಿರುವ ಬಾಂಗ್ಲಾದೇಶ ಹೈಕಮಿಷನ್ ಅಧಿಕಾರಿಗಳು ತಿಳಿಸಿದ್ದಾರೆ. ಬಾಂಗ್ಲಾದ ದಿನಪತ್ರಿಕೆಗಳ ವರದಿಗಳ ಪ್ರಕಾರ, ಅವರು ತನ್ನ ಸಹೋದರಿಯೊಂದಿಗೆ ದೇಶವನ್ನು ತೊರೆದಿದ್ದಾರೆ. ಈಗಾಗಲೇ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಭಾರತದ ಅಗರ್ತಲಾಕ್ಕೆ ಬಂದಿಳಿದಿದ್ದಾರೆ. ದೇಶದ ಸೇನಾ ಮುಖ್ಯಸ್ಥ ವಾಕರ್-ಉಜ್-ಜಮಾನ್ ಅವರು ಇಂದು ಸಂಜೆ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಡೈಲಿ ಸ್ಟಾರ್ ವರದಿ ಮಾಡಿದೆ. ಬಾಂಗ್ಲಾದೇಶದ ಬೀದಿಗಳಲ್ಲಿ ಭಾನುವಾರ ಭೀಕರ ಘರ್ಷಣೆಗಳು ನಡೆದಿದ್ದು, ಸಾವಿನ ಸಂಖ್ಯೆ 300ಕ್ಕೆ ಏರಿದೆ ಎಂದು ಎಎಫ್‌ಪಿ ವರದಿ ತಿಳಿಸಿದೆ.

ಭಾರತದಲ್ಲಿ, ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಎಲ್ಲಾ ನಾಗರಿಕರಿಗೆ ಬಾಂಗ್ಲಾದೇಶಕ್ಕೆ ಪ್ರಯಾಣಿಸುವುದನ್ನು ತಪ್ಪಿಸುವಂತೆ ಮತ್ತು ಈಗಾಗಲೇ ಅಲ್ಲಿರುವವರು ತೀವ್ರ ಎಚ್ಚರಿಕೆ ವಹಿಸಲು ಢಾಕಾದಲ್ಲಿರುವ ಹೈಕಮಿಷನ್‌ನೊಂದಿಗೆ ಸಂಪರ್ಕದಲ್ಲಿರಲು ಸಲಹೆ ನೀಡಿದೆ.

ಬಾಂಗ್ಲಾದೇಶದಲ್ಲಿ ಐದು ದಶಕಗಳ ಹಿಂದೆ ದಕ್ಷಿಣ ಏಷ್ಯಾ ರಾಷ್ಟ್ರದ ಜನನದ ನಂತರದ ನಡೆದ ಈ ಕೆಟ್ಟ ಹಿಂಸಾಚಾರಗಳಲ್ಲಿ ಹೆಚ್ಚಿನ ಜನರು ಸಾವನ್ನಪ್ಪಿದ್ದರಿಂದ ಅವರು ಸೋಮವಾರ ದೇಶವನ್ನು ತೊರೆದಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಪ್ರತಿಭಟನಾಕಾರರು ಪ್ರಧಾನಿಯವರ ಅಧಿಕೃತ ನಿವಾಸಕ್ಕೆ ನುಗ್ಗಿದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಭಾನುವಾರ ನಡೆದ ಘರ್ಷಣೆಯಲ್ಲಿ 14 ಪೊಲೀಸರು ಸೇರಿದಂತೆ ಕನಿಷ್ಠ 101 ಜನರು ಸಾವನ್ನಪ್ಪಿದ್ದಾರೆ ಎಂದು ಬಂಗಾಳಿ ಭಾಷೆಯ ಪ್ರಮುಖ ಪತ್ರಿಕೆ ಪ್ರೋಥೋಮ್ ಅಲೋ ವರದಿ ಮಾಡಿದೆ. ಹಿಂಸಾಚಾರದಿಂದ ಮೊಬೈಲ್ ಇಂಟರ್ನೆಟ್ ಅನ್ನು ಕಡಿತಗೊಳಿಸಲಾಗಿದೆ ಮತ್ತು ಅನಿರ್ದಿಷ್ಟ ಅವಧಿಗೆ ರಾಷ್ಟ್ರವ್ಯಾಪಿ ಕರ್ಫ್ಯೂ ಜಾರಿಗೊಳಿಸಲಾಗಿದೆ.

No Comments

Leave A Comment