``````````````ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆ ,ಅಭಿಮಾನಿಗಳಿಗೆ "ಶ್ರೀಅನ೦ತವೃತದ"ಶುಭಾಶಯಗಳು......

Ankola Landslide in NH 66: ಅಂಕೋಲಾ, ಶಿರೂರು ಬಳಿ ಗುಡ್ಡ ಕುಸಿದು ಮಣ್ಣಿನಡಿ ಸಿಲುಕಿಅಂಕೋಲಾ: ಗುಡ್ಡ ಕುಸಿದು ಮಣ್ಣಿನಡಿಯಲ್ಲಿ ಸಿಲುಕಿದ್ದ 7 ಮಂದಿ ಮೃತ್ಯು

ಕಾರವಾರ, ಜುಲೈ 16: ಉತ್ತರ ಕನ್ನಡ ಜಿಲ್ಲೆಯಾದ್ಯಂತ ಭಾರಿ ಮಳೆ ಸುರಿಯುತ್ತಿದ್ದು, ಅಂಕೋಲಾ ತಾಲೂಕಿನ ಶಿರೂರು ಬಳಿ ಗುಡ್ಡ ಕುಸಿದು 9 ಮಂದಿ ಮಣ್ಣಿನಡಿ ಸಿಲುಕಿ  7 ಮಂದಿ ಮೃತ್ಯು ಆಗಿದ್ದಾರೆ.

 ಇದರಲ್ಲಿ ಕಾರಿನಲ್ಲಿ ತೆರಳುತ್ತಿದ್ದ ಒಂದೇ ಕುಟುಂಬದ ಐವರು ಇದ್ದಾರೆ ಎನ್ನಲಾಗಿದೆ. ಒಂದೇ ಕುಟುಂಬದ ಲಕ್ಷ್ಮಣ ನಾಯ್ಕ, ಶಾಂತಿ ನಾಯ್ಕ, ರೋಷನ್​, ಆವಂತಿಕಾ, ಜಗನ್ನಾಥ ಸಾವನಪ್ಪಿದ್ದಾರೆ.

 ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಎನ್​ಡಿಆರ್​ಎಫ್ ಸಿಬ್ಬಂದಿ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ. ಗುಡ್ಡ ಕುಸಿತದಿಂದ ಹೆದ್ದಾರಿಯಲ್ಲಿ‌ ವಾಹನ ಸಂಚಾರ ಸ್ಥಗಿತಗೊಂಡಿದೆ.

ರಸ್ತೆ ಬದಿ ಚಹಾ ಕುಡಿಯುತ್ತಿದ್ದ ವೇಳೆ ದುರ್ಘಟನೆ:-

ರಾಷ್ಟ್ರೀಯ ಹೆದ್ದಾರಿ 66 ರ ಪಕ್ಕದಲ್ಲಿ ಟ್ಯಾಂಕರ್ ಚಾಲಕ ಹಾಗೂ ಕ್ಲೀನರ್ ಟಿ ಕುಡಿಯುತ್ತಿದ್ದರು. ಇದೇ ವೇಳೆ ಭಾರಿ ಗುಡ್ಡ ಕುಸಿದಿದೆ. ಗುಡ್ಡ ಕುಸಿತದ ರಭಸಕ್ಕೆ ಗ್ಯಾಸ್ ಟ್ಯಾಂಕರ್ ನದಿಗೆ ಬಿದ್ದಿದ್ದು, ಚಾಲಕ ಹಾಗೂ ಕ್ಲೀನರ್ ಮಣ್ಣಿನಡಿ ಸಿಲುಕಿದ್ದಾರೆ. ಮಣ್ಣಿನಡಿ ಸಿಲುಕಿದವರು ಮೃತಪಟ್ಟಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು, ಜಿಲ್ಲಾಡಳಿತವು ಹೆದ್ದಾರಿ‌ ಮೇಲಿನನ ಮಣ್ಣಿನ ತೆರವು ಕಾರ್ಯಾಚರಣೆ ಪ್ರಾರಂಭಿಸಿದೆ.

ಪ್ರತ್ಯಕ್ಷದರ್ಶಿ ಹೇಳಿದ್ದೇನು?

ಕಾರಿನಲ್ಲಿ ಒಂದು ಕುಟುಂಬ ಹೋಗುತಿತ್ತು. ಹಠಾತ್ ಆಗಿ ಕಾರು ನಿಲ್ಲಿಸಿ ನಿಧಾನಕ್ಕೆ ಹಿಂದೆ ತೆಗೆದುಕೊಳ್ಳುತ್ತಿದ್ದರು. ನಾನು ಹಿಂದಿನ ಗಾಡಿಯಲ್ಲಿ ಇದ್ದೆ. ಇಳಿದು ಬಂದು ನೋಡಿದೆ. ಗುಡ್ಡ ಕುಸಿಯುತ್ತಾ ಇತ್ತು. ದಿಢೀರಾಗಿ ಅಲ್ಲಿಂದ ಬೇರೆ ಕಡೆ ಹಾರಿದೆ. ಸ್ವಲ್ಪದರಲ್ಲೇ ನನ್ನ ಸಾವು ತಪ್ಪಿತ್ತು. ಇಲ್ಲಿ ಒಂದು ಟೀ ಅಂಗಡಿ ಇತ್ತು. ಟಿ ಅಂಗಡಿಯಲ್ಲಿ ನಾಲ್ಕು ಜನ ಇದ್ದರು. ಗ್ಯಾಸ್ ಟ್ಯಾಂಕರ ಕೂಡ ಇಲ್ಲೇ ನಿಲ್ಲಿಸಿದ್ದರು. ಗ್ಯಾಸ್ ಟ್ಯಾಂಕರ್ ಕೆಳಗೆ ನದಿಗೆ ಬಿದ್ದಿದೆ. ಕಾರು ಮತ್ತು ಟೀ ಅಂಗಡಿಯಲ್ಲಿದ್ದವರು ಸೇರಿ ಸುಮಾರು ಒಂಬತ್ತು ಜನ ಮಣ್ಣಿನಡಿ ಸಿಲುಕಿದ್ದಾರೆ ಎಂದು ಪ್ರತ್ಯಕ್ಷ ದರ್ಶಿ ರಾಜು ಎಂಬವರು ತಿಳಿಸಿದ್ದಾರೆ.

ವಿಧಾನಸಭೆಯಲ್ಲೂ ಪ್ರಸ್ತಾಪವಾದ ಅಂಕೋಲಾ ದುರಂತ

ಕಾರವಾರ ಹಾಗೂ ಅಂಕೋಲಾದಲ್ಲಿ ಗುಡ್ಡ ಕುಸಿತ ವಿಚಾರವನ್ನು ವಿಧಾನಸಭೆ ಕಲಾಪದ ಶೂನ್ಯವೇಳೆಯಲ್ಲಿ ಕಾರವಾರ ಶಾಸಕ ಸತೀಶ್ ಸೈಲ್ ಪ್ರಸ್ತಾಪಿಸಿದರು. ಘಟನಾ ಸ್ಥಳಕ್ಕೆ ಸಚಿವರು ಭೇಟಿ ನಿಡಬೇಕೆಂದು ಸೈಲ್​ ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಕಂದಾಯ ಇಲಾಖೆ ಸಚಿವ ಕೃಷ್ಣ ಭೈರೇಗೌಡ, ಕೆಲ ದಿನಗಳ ಹಿಂದೆ ಭೇಟಿ ಕೊಟ್ಟು ಪರಿಶೀಲನೆ ಮಾಡಿದ್ದೇನೆ. ಕಾರವಾರದಲ್ಲಿ ಇರಲು ಒಂದು ತಂಡಕ್ಕೆ ಸೂಚನೆ ನೀಡಲಾಗಿದೆ. ಅಲ್ಲಿ ಏನಾಗಿದೆ ಎಂಬ ಮಾಹಿತಿಯನ್ನು ಪಡೆಯಲು ತಿಳಿಸಿದ್ದೇನೆ. ಮಾಹಿತಿ ಪಡೆದು ವರದಿ ನೀಡುತ್ತೇನೆ ಎಂದರು.

ಹೆಗಡೆ ಗ್ರಾಮ ಸಂಪೂರ್ಣ ಜಲಾವೃತ

ಅಬ್ಬರದ ಮಳೆಗೆ ಊರಿಗೆ ಊರೇ ಜಲಾವೃತಗೊಂಡಿದೆ. ಕುಮಟಾ ತಾಲೂಕಿನ ಹೆಗಡೆ ಗ್ರಾಮ ಸಂಪೂರ್ಣ ಜಲಾವೃತಗೊಂಡಿದೆ. ಸುಮಾರು 200 ಕ್ಕೂ ಹೆಚ್ಚು ಮನೆಗಳಿರುವ ಚಿಕ್ಕ ಗ್ರಾಮ ಇದಾಗಿದ್ದು, ಗ್ರಾಮದಲ್ಲಿದ್ದ ಎಲ್ಲ ಮನೆಗಳು ಸಂಪೂರ್ಣ ಜಲಾವೃತಗೊಂಡಿವೆ. ಸಂತ್ರಸ್ತರನ್ನು ಬೋಟ್ ಮೂಲಕ ಹೊರತರಲಾಗುತ್ತಿದೆ. ಜಾನುವಾರುಗಳ ಸಮೇತ ಜನರನ್ನು ಹೊರತರಲು ಹರಸಾಹಸಪಡಲಾಗುತ್ತಿದೆ.

ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಅಘನಾಶಿನಿ ನದಿಯ ನೀರು ಹೆಗಡೆ ಗ್ರಾಮಕ್ಕೆ ನುಗ್ಗಿ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ.

ಕುಮಟಾ-ಶಿರಸಿ ಹೆದ್ದಾರಿಯಲ್ಲಿ ವಾಹನ ಸಂಚಾರ ಬಂದ್​​:-

ಕುಮಟಾ-ಶಿರಸಿ ಹೆದ್ದಾರಿಯಲ್ಲಿ ಗುಡ್ಡ ಕುಸಿತ  ಸಂಭವಿಸಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ. ಶಿರಸಿ ತಾಲೂಕಿನ ರಾಗಿಹೊಸಳ್ಳಿ ಗ್ರಾಮದ ಬಳಿ ಗುಡ್ಡ ಕುಸಿದಿದೆ. ಸದ್ಯ ತಾಲೂಕು ಆಡಳಿತದಿಂದ ಮಣ್ಣು ತೆರವು ಕಾರ್ಯ ತೀವ್ರಗೊಂಡಿದೆ. ಬೆಳಗ್ಗೆಯಿಂದ ಜೆಸಿಬಿ ಮೂಲಕ ಮಣ್ಣು ತೆರವು ಕಾರ್ಯಾಚರಣೆ ನಡೆಯುತ್ತಿದೆ.

No Comments

Leave A Comment