Log In
BREAKING NEWS >
``````````````ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆ ,ಅಭಿಮಾನಿಗಳಿಗೆ "ಶ್ರೀಅನ೦ತವೃತದ"ಶುಭಾಶಯಗಳು......

ಮನ್ ಕಿ ಬಾತ್: ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇರಿಸಿದ್ದಕ್ಕೆ ಧನ್ಯವಾದ; ಪ್ರಧಾನಿ ಮೋದಿ

ನವದೆಹಲಿ: 2024ರ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡುವ ಮೂಲಕ ಸಂವಿಧಾನ ಮತ್ತು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು ನಂಬಿಕೆ ಇರಿಸಿದ್ದಕ್ಕೆ ಧನ್ಯವಾದಗಳು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ಹೇಳಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸತತ ಮೂರನೇ ಬಾರಿಗೆ ಕೇಂದ್ರದಲ್ಲಿ ಸರ್ಕಾರ ರಚಿಸಿದ ಬಳಿಕ ಮೊದಲ ಮನ್​ ಕಿ ಬಾತ್​ ಕಾರ್ಯಕ್ರಮದ ಮೊದಲ ಸಂಚಿಕೆಯಲ್ಲಿ ದೇಶದ ಜನರೊಂದಿಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಇದು ಪ್ರಧಾನಿ ಅವರ ಮನ್​ ಕಿ ಬಾತ್​​ ಕಾರ್ಯಕ್ರಮದ 111ನೇ ಸಂಚಿಕೆಯಾಗಿದ್ದು, ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವನ್ನು (ಎನ್‌ಡಿಎ) ಅಧಿಕಾರಕ್ಕೆ ಮರು ಆಯ್ಕೆ ಮಾಡಿದ್ದಕ್ಕಾಗಿ ದೇಶದ ಜನತೆಗೆ ಕೃತಜ್ಞತೆ ಸಲ್ಲಿಸಿದರು.

ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮ್ಮ ನಂಬಿಕೆಯನ್ನು ಜನರು ಚುನಾವಣೆಯಲ್ಲಿ ಮರುಸ್ಥಾಪಿಸಿದ್ದಾರೆ ಎಂದು ಹೇಳಿದರು. ಅಲ್ಲದೆ, 2024ರ ಚುನಾವಣೆ ವಿಶ್ವದ ಅತಿದೊಡ್ಡ ಚುನಾವಣೆಯಾಗಿದೆ. ಇಷ್ಟು ದೊಡ್ಡ ಚುನಾವಣೆ ಜಗತ್ತಿನ ಯಾವುದೇ ದೇಶದಲ್ಲಿ ನಡೆದಿಲ್ಲ. ಈ ಚುನಾವಣೆಯಲ್ಲಿ ದೇಶದ 65 ಕೋಟಿ ಜನರು ಮತ ಚಲಾಯಿಸಿದ್ದಾರೆ ಎಂದು ತಿಳಿಸಿದರು.

ಲೋಕಸಭೆ ಚುನಾವಣೆಯನ್ನು ಯಶಸ್ವಿಯಾಗಿ ನಡೆಸಿದ್ದಕ್ಕಾಗಿ ಚುನಾವಣಾ ಆಯೋಗ ಮತ್ತು ಮತದಾನ ಪ್ರಕ್ರಿಯೆಗೆ ಸಂಬಂಧಿಸಿದ ಪ್ರತಿಯೊಬ್ಬರನ್ನು ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಪ್ಯಾರಿಸ್ ಒಲಿಂಪಿಕ್ಸ್ ಬಗ್ಗೆಯೂ ಪ್ರಧಾನಿ ಮೋದಿಯವರು ಮಾತನಾಡಿದರು. ಈ ಹೊತ್ತಿಗೆ ಮುಂದಿನ ತಿಂಗಳು ಪ್ಯಾರಿಸ್ ಒಲಿಂಪಿಕ್ಸ್ ಪ್ರಾರಂಭವಾಗಲಿದೆ. ಅದರಲ್ಲಿ ಭಾರತೀಯ ತಂಡವು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.

ಟೋಕಿಯೊ ಒಲಿಂಪಿಕ್ಸ್‌ನ ನೆನಪುಗಳು ನಮ್ಮೆಲ್ಲರ ಮನಸ್ಸಿನಲ್ಲಿ ಇನ್ನೂ ಉಳಿದಿದೆ. ಟೋಕಿಯೊದಲ್ಲಿ ನಮ್ಮ ಆಟಗಾರರ ಪ್ರದರ್ಶನವು ಪ್ರತಿಯೊಬ್ಬ ಭಾರತೀಯನ ಹೃದಯವನ್ನು ಗೆದ್ದಿದೆ ಎಂದು ಹೇಳಿದರು.

ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ಆಟಗಾರರನ್ನು ಪ್ರೋತ್ಸಾಹಿಸಲು ‘Cheer4India’ ಎಂಬ ಹ್ಯಾಶ್‌ಟ್ಯಾಗ್ ಅನ್ನು ಬಳಸಬೇಕೆಂದು ಮನವಿ ಮಾಡಿದರು.

ಈ ವರ್ಷದ ವಿಶ್ವ ಪರಿಸರ ದಿನದಂದು ‘ಏಕ್ ಪೇಡ್ ಮಾ ಕೆ ನಾಮ್’ (ತಾಯಿಗಾಗಿ ಒಂದು ಗಿಡ) ಅಭಿಯಾನವನ್ನು ಪ್ರಾರಂಭಿಸಲಾಗಿದೆ. ನನ್ನ ತಾಯಿಯ ಹೆಸರಲ್ಲಿ ನಾನು ಗಿಡವನ್ನು ನೆಟ್ಟಿದ್ದೇನೆ. ದೇಶದ ಎಲ್ಲರೂ ತಾಯಿಗಾಗಿ ಒಂದು ಗಿಡ ನೆಡುವಂತೆ ಮನವಿ ಮಾಡುತ್ತೇನೆ ಎಂದು ಅವರು ತಿಳಿಸಿದರು.

ಇಂದು (ಜೂನ್ 30) ಬುಡಕಟ್ಟು ಜನಾಂಗಕ್ಕೆ ಮಹತ್ವದ ದಿನವಾಗಿದ್ದು, ‘Hul Diwas’ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ವಿದೇಶಿ ಸಾಮ್ರಾಜ್ಯಶಾಹಿ ಶಕ್ತಿಗಳ ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರಾದ ವೀರ ಸಿಧು ಮತ್ತು ಕನ್ಹು ಅವರನ್ನು ಪ್ರಧಾನಿ ಮೋದಿ ಅವರು ಇದೇ ವೇಳೆ ಸ್ಮರಿಸಿದರು.

ಮನ್ ಕಿ ಬಾತ್ ಕಾರ್ಯಕ್ರಮದ ಕೊನೆಯ ಸಂಚಿಕೆ ಫೆಬ್ರವರಿ 25ರಂದು ಪ್ರಸಾರವಾಯಿತು. ಲೋಕಸಭೆ ಚುನಾವಣೆ ಘೋಷಣೆಯಾದ ನಂತರ ಮಾದರಿ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮದ ಪ್ರಸಾರವನ್ನು ಮುಂದೂಡಲಾಗಿತ್ತು.

ಮುಂದಿನ ಬಾರಿ ಈ ಕಾರ್ಯಕ್ರಮದ ಮೂಲಕ ಜನರೊಂದಿಗೆ ಮುಖಾಮುಖಿಯಾದಾಗ ಹೊಸ ಶಕ್ತಿ ಮತ್ತು ಹೊಸ ಮಾಹಿತಿಯೊಂದಿಗೆ ಭೇಟಿಯಾಗುತ್ತೇನೆ ಎಂದು ಪ್ರಧಾನಿ ಅದರ 110ನೇ ಆವೃತ್ತಿಯಲ್ಲಿ ಹೇಳಿದ್ದರು.

No Comments

Leave A Comment