ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು

ಹಾವೇರಿಯಲ್ಲಿ ಭೀಕರ ರಸ್ತೆ ಅಪಘಾತ: ಹೆದ್ದಾರಿಯಿಂದ ಸರ್ವಿಸ್ ರಸ್ತೆಗೆ ಬಿದ್ದ ಕಾರು, ನಾಲ್ವರ ದುರ್ಮರಣ!

ಹಾವೇರಿ: ಹಾವೇರಿಯಿಂದ ತಿರುಪತಿಗೆ ತೆರಳುತ್ತಿದ್ದ ಎರ್ಟಿಗಾ ಕಾರು​ ಪಲ್ಟಿಯಾಗಿ ಸರ್ವಿಸ್​​ ರೋಡ್‌ಗೆ​ ಬಿದ್ದು, ನಾಲ್ವರು ಸಾವನ್ನಪ್ಪಿರುವ ಘಟನೆ ರಾಣೆಬೆನ್ನೂರು ತಾಲೂಕಿನ ರಾಷ್ಟ್ರೀಯ ಹೆದ್ದಾರಿ 48ರ ಹಲಗೇರಿ ಸೇತುವೆ ಬಳಿ ಶುಕ್ರವಾರ ನಡೆದಿದೆ.

ಹಾವೇರಿಯಿಂದ ತಿರುಪತಿ ದೇವರ ದರ್ಶನಕ್ಕೆಂದು ಕಾರಿನಲ್ಲಿ ಹೋಗುತ್ತಿದ್ದ ವೇಳೆ ರಾತ್ರಿ 12:30ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರು ರಾಷ್ಟ್ರೀಯ ಹೆದ್ದಾರಿ 4 ಪಿಬಿ ರಸ್ತೆಯಿಂದ ಕೆಳಗೆ ಸರ್ವಿಸ್ ರಸ್ತೆಗೆ ಬಿದ್ದು ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.

ಮೃತರನ್ನು ಹಾವೇರಿಯ ಅಶ್ವಿನಿ ನಗರದ ಸುರೇಶ್(45), ಐಶ್ವರ್ಯ(22), ಚೇತನಾ(7), ಪ್ರಮಿಳಾ(28) ಎಂದು ಗುರುತಿಸಲಾಗಿದೆ. ಸುರೇಶ್​, ಐಶ್ವರ್ಯ, ಚೇತನಾ ಸ್ಥಳದಲ್ಲೇ ಮೃತಪಟ್ಟರೆ, ಪ್ರಮೀಳಾ (28) ರಾಣೆಬೆನ್ನೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

ಘಟನೆಯಲ್ಲಿ ಚನ್ನವೀರಪ್ಪ ಜಾಡಿ, ಸಾವಿತ್ರಾ ಜಾಡಿ, ವಿಕಾಸ ಬಾರ್ಕಿ, ಪ್ರಭುರಾಜ್ ಸಮಗಂಡಿ, ಗೀತಾ ಭಾರ್ಕಿ, ಹೊನ್ನಪ್ಪ ಬಾರ್ಕಿ ಎಂಬವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ರಾಣೆಬೆನ್ನೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ಹಾವೇರಿ ಎಸ್‌ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಾಣೆಬೆನ್ನೂರು ಸಂಚಾರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No Comments

Leave A Comment