Log In
BREAKING NEWS >
ಕರಾವಳಿಯಲ್ಲಿ ಹೆಚ್ಚಿದ ಬಿಸಿಲಿನ ತಾಪಮಾನ-ಸಾವು ಸ೦ಭವಿಸುವ ಸಾಧ್ಯತೆ-ಎಚ್ಚರ ಬಿಸಿಲಿನಲ್ಲಿ ಹೊರಗೆ ಬರಲೇ ಬೇಡಿ....

ಹಾಸನದಲ್ಲಿ ಬಿಜೆಪಿ ಮುಖಂಡನ ಮೇಲೆ ದಾಳಿ: ಪ್ರಜ್ವಲ್‌ ಪರ ಪ್ರಚಾರ ಮಾಡಿದ್ದಕ್ಕೆ ಪ್ರೀತಂಗೌಡ ಬೆಂಬಲಿಗರ ಹಲ್ಲೆ?

ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ರಂಗೇರಿದೆ. ಮೂರು ಪಕ್ಷಗಳು ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಇದರ ಮಧ್ಯೆ ದ್ವೇಷ ರಾಜಕಾರಣವೂ ಸಹ ನಡೆಯುತ್ತಿದೆ. ಮೊನ್ನೆ ಅಷ್ಟೇ ತುಮಕೂರಿನಲ್ಲಿ ಜೆಡಿಎಸ್​ ಕಾರ್ಯಕರ್ತನೋರ್ವನ ಮೇಲೆ ಹಲ್ಲೆಯಾಗಿತ್ತು. ಇದೀಗ ಹಾಸನದಲ್ಲಿ ಬಿಜೆಪಿ ಮುಖಂಡನ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ.

ಹಾಸನ, (ಏಪ್ರಿಲ್ 12): ಮೊನ್ನೇ ಅಷ್ಟೇ ಬೆಂಗಳೂರು ಗ್ರಾಮಾಂತರ (Bengaluru Rural ) ಬಿಜೆಪಿ ಅಭ್ಯರ್ಥಿ ಡಾ ಸಿಎನ್ ಮಂಜುನಾಥ್ ಅವರ ಪರ ಪ್ರಚಾರ ಮಾಡಿದ್ದಕ್ಕೆ ಕುಣಿಗಲ್​ನಲ್ಲಿ ಜೆಡಿಎಸ್ (JDS)​ ಕಾರ್ಯಕರ್ವನ ಮೇಲೆ ಹಲ್ಲೆಯಾಗಿರುವ ಘಟನೆ ನಡೆದಿತ್ತು. ಇದೀಗ ಇಂದು (ಏಪ್ರಿಲ್ 12) ಹಾಸನದಲ್ಲಿ(Hassan) ಬಿಜೆಪಿ (BJP) ಮುಖಂಡನ ಮೇಲೆ ಹಲ್ಲೆಯಾಗಿದೆ. 30ಕ್ಕೂ ಹೆಚ್ಚು ಯುವಕರ ತಂಡವೊಂದು ಏಕಾಏಕಿ ಹಾಸನದ ಎಂ.ಜಿ.ರಸ್ತೆಯಲ್ಲಿರುವ ಅಂಗಡಿ ಮೇಲೆ ದಾಳಿ ಮಾಡಿದೆ. ಈ ವೇಳೆ ಅಂಗಡಿ ಮಾಲೀಕ, ಬಿಜೆಪಿಯ ಮಾಧ್ಯಮ ವಕ್ತಾರ ಐನೆಟ್ ವಿಜಯ್ ಕುಮಾರ್ ಅವರ ಮೇಲೆ ಹಲ್ಲೆ ಮಾಡಿದೆ. ಸದ್ಯ ಗಾಯಗೊಂಡಿರುವ ವಿಜಯ್ ಕುಮಾರ್ ಅವರು ಹಿಮ್ಸ್​ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇನ್ನು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ಬೆಂಬಲಿಗರೇ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಪ್ರೀತಂಗೌಡ ವಿಚಾರಕ್ಕೆ ಯಾಕೋ ಬರುತ್ತೀಯ ಎಂದು ಹೇಳಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ. ಅಲ್ಲದೇ, ಅಂಗಡಿ‌ ಮೇಲೆ‌ ಕಲ್ಲು ತೂರಿ ಗ್ಲಾಸ್ ಪುಡಿ ಪುಡಿ ಮಾಡಿದ್ದಾರೆ. ಸದ್ಯ ಇದೀಗ ಈ ವಿಡಿಯೋ ವೈರಲ್ ಆಗಿದೆ.

ಕಳೆದ ವಿದಾನಸಭೆ ಚುನಾವಣೆಯಿಂದಲೂ ಪ್ರೀತಂಗೌಡ ತಂಡದಿಂದ ವಿಜಯ್ ಅಂತರ ಅಂತರ ಕಾಯ್ದುಕೊಂಡಿದ್ದ. ಅಲ್ಲದೇ ಇದೀಗ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್​-ಬಿಜೆಪಿ ಮೈತ್ರಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಪ್ರಜ್ವಲ್ ರೇವಣ್ಣ ಪರ ಪ್ರಚಾರ ನಡೆಸಿದ್ದಾರೆ. ಹೀಗಾಗಿ ಸ್ವತಃ ಪ್ರಜ್ವಲ್ ರೇವಣ್ಣ ಅವರೇ ವಿಜಯ್ ಅವರನ್ನು ಭೇಟಿ ನೀಡಿ ಅಭಿನಂದಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರೀತಂಗೌಡ ವಿರೋಧದ ನಡುವೆಯೂ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಪ್ರಚಾರ ಮಾಡುತ್ತಿರುವುದಕ್ಕೆ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.ಹಾಸನ ವಿಜಿ ಜೊತೆ ಇದ್ದ ಪ್ರಮೋದ್ ಹಾಗೂ ಸಂದೇಶ್ ಮೇಲೂ ಅಟ್ಯಾಕ್ ಮಾಡಲಾಗಿದೆ. ಸದ್ಯ ಮೂವರಿಗೂ ಹಾಸನದ ವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರೀತಂಗೌಡ ಬೆಂಬಲಿಗರು ಹಲ್ಲೆ ಮಾಡಿದ್ದಾರೆ ಎಂದು ಆರೋಪಗಳು ಕೇಳಿಬಂದಿವೆ. ಹೀಗಾಗಿ ಹಾಸನದಲ್ಲಿ ಪ್ರೀತಂಗೌಡ ಹಾಗೂ ಜೆಡಿಎಸ್ ನಡುವಿನ ಮುಸುಕಿನ ಗುದ್ದಾಟ ಬಹಿರಂಗವಾದಂತಾಗಿದೆ.

ಇನ್ನು ಆಸ್ಪತ್ರೆಗೆ ಹಾಸನ ಜೆಡಿಎಸ್ ಶಾಸಕ ಸ್ವರೂಪ್ ಭೇಟಿ ನೀಡಿ ಗಾಯಗೊಂಡಿರುವ ವಿಜಯ್ ಕುಮಾರ್ ಅವರ ಆರೋಗ್ಯ ವಿಚಾರಿಸಿದರು.

No Comments

Leave A Comment