Log In
BREAKING NEWS >
Nandini Milk: ಕೆಎಂಎಫ್ ನಂದಿನಿ ಮಿಲ್ಕ್ ಹೊಸ ದಾಖಲೆ​​: ಒಂದೇ ದಿನ 51 ಲಕ್ಷ ಲೀಟರ್ ಹಾಲು ಮಾರಾಟ....

ಐಪಿಎಲ್ 2023: RCB ವಿರುದ್ಧ LSG ಜಯದ ಬೆನ್ನಲ್ಲೇ ಗೌತಮ್ ಗಂಭೀರ್ ವರ್ತನೆಗೆ ಅಭಿಮಾನಿಗಳ ಆಕ್ರೋಶ!

ಬೆಂಗಳೂರು: ಆರ್ ಸಿಬಿ ಮತ್ತು ಲಖನೌ ವಿರುದ್ಧದ ಪಂದ್ಯದ ಬಳಿಕ ಲಖನೌ ತಂಡದ ಮೆಂಟರ್ ಗೌತಮ್ ಗಂಭೀರ್ ರ ಆವೇಶದ ಸಂಭ್ರಮಾಚರಣೆ ಇದೀಗ ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ.

ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ 2023ರ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್)ನ 15ನೇ ಪಂದ್ಯದ ಕೊನೆಯ ಓವರ್‌ನಲ್ಲಿ ನಾಟಕೀಯ ತಿರುವು ಪಡೆದ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧ ಲಖನೌ ಸೂಪರ್ ಜೈಂಟ್ಸ್ ತಂಡ 1 ವಿಕೆಟ್‌ ಅಂತರದಿಂದ ರೋಚಕ ಗೆಲುವು ಸಾಧಿಸಿತು. ಆರ್‌ಸಿಬಿ ವಿರುದ್ಧ ರೋಚಕ ಗೆಲುವಿನ ನಂತರ ಸಂಭ್ರಮಾಚರಣೆ ವೇಳೆ ತಂಡದ ಮೆಂಟರ್ ಗೌತಮ್ ಗಂಭೀರ್ ಆರ್ ಸಿಬಿ ಡಗೌಟ್ ನತ್ತ ನೋಡಿ ಆಕ್ರೋಶದಿಂದ ಏನನ್ನೋ ಹೇಳಿದ್ದಾರೆ.

ಅಂತೆಯೇ ಸಂಭ್ರಮಪಡುವ ಆತುರದಲ್ಲಿ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ಅಭಿಮಾನಿಗಳನ್ನು ಮೌನವಾಗಿರುವಂತೆ ಕೈ ಸನ್ನೆ ಮಾಡಿ ಸೂಚಿಸಿದ್ದಾರೆ.  ಗಮನಾರ್ಹವಾಗಿ, ಪಂದ್ಯದ ದಿನದಂದು ಲಕ್ನೋ ತಂಡದ ಚೇಸಿಂಗ್ ಉದ್ದಕ್ಕೂ ಗೌತಮ್ ಗಂಭೀರ್ ತುಂಬಾ ತಾಳ್ಮೆ ಕಳೆದುಕೊಂಡಿದ್ದರು. ಮೇಜಿನ ಮೇಲೆ ಬಡಿಯುವುದು ಮತ್ತು ಇತರ ವಿಷಯಗಳ ನಡುವೆ ಸಿಟ್ಟಿನಿಂದ ಮಾತನಾಡುವುದು ಕಂಡುಬಂದಿತು.

ಕೊನೆಯ ಎಸೆತದಲ್ಲಿ ಬೈ ಮೂಲಕ ರನ್ ತೆಗೆದುಕೊಂಡ ಅವೇಶ್ ಖಾನ್ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಗೆಲುವು ತಂದುಕೊಟ್ಟರು ಮತ್ತು ಇಡೀ ತಂಡ ಮೈದಾನ ಪ್ರವೇಶಿಸಿ ಸಂಭ್ರಮಿಸಿತು. ಆಗ ಅವೇಶ್ ಖಾನ್ ಹೆಲ್ಮೆಟ್ ಕಿತ್ತು ಮೈದಾನದಲ್ಲಿ ಎಸೆದರು. ತಂಡದ ಮಾರ್ಗದರ್ಶಕ ಗೌತಮ್ ಗಂಭೀರ್ ಅವರು ಆಟಗಾರರಿಗಿಂತ ತುಸು ಹೆಚ್ಚಿನ ತಾಳ್ಮೆ ಕಳೆದುಕೊಂಡು ಆಕ್ರಮಣಕಾರಿಯಾಗಿ ವರ್ತಿಸಿದರು.

ಗೆಲುವಿನ ನಂತರ ಗೌತಮ್ ಗಂಭೀರ್ ತನ್ನ ತಂಡದ ಆಟಗಾರರನ್ನು ತಬ್ಬಿಕೊಂಡು ಅಭಿನಂದಿಸಿದರು. ನಂತರ ತನ್ನ ತುಟಿಗಳ ಮೇಲೆ ಬೆರಳಿಟ್ಟು ಬೆಂಗಳೂರಿನ ಪ್ರೇಕ್ಷಕರಿಗೆ ಮೌನವಾಗಿರುವಂತೆ ಸೂಚಿಸಿದ ಘಟನೆ ನಡೆಯಿತು. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಗೌತಮ್ ಗಂಭೀರ್ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

No Comments

Leave A Comment