Log In
BREAKING NEWS >
...........ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆ,ಅಭಿಮಾನಿಗಳಿಗೆ "ಶ್ರೀರಾಮನವಮಿ"ಯ ಶುಭಾಶಯಗಳು.......

ಮಲೆನಾಡು, ಮಧ್ಯ ಕರ್ನಾಟಕದಲ್ಲಿ ಪ್ರಾಬಲ್ಯ ಉಳಿಸಿಕೊಳ್ಳಲು ಬಿಜೆಪಿಗೆ ಕಷ್ಟ: ವಿಧಾನಸಭೆ ಚುನಾವಣೆ ಗೆಲ್ಲಲು ಎದುರಾಗಿವೆ ಹಲವು ಸಂಕಷ್ಟ!

ಬೆಂಗಳೂರು: ಮಲೆನಾಡು ಮತ್ತು ಮಧ್ಯ ಕರ್ನಾಟಕ ಜಿಲ್ಲೆಗಳಿಂದ  ರಾಜ್ಯಕ್ಕೆ ಐವರು ಮುಖ್ಯಮಂತ್ರಿಗಳು ಆರಿಸಿ ಬಂದಿದ್ದಾರೆ. ಹೀಗಾಗಿ ಈ ಭಾಗ ಭಾರೀ ಪ್ರಭಾವಶಾಲಿಯಾಗಿದೆ.

ಕಡಿದಾಳ್ ಮಂಜಪ್ಪ, ಎಸ್ ಬಂಗಾರಪ್ಪ, ಜೆಎಚ್ ಪಟೇಲ್ ಮತ್ತು ಬಿಎಸ್ ಯಡಿಯೂರಪ್ಪ ಎಲ್ಲರೂ ಅವಿಭಜಿತ ಶಿವಮೊಗ್ಗ ಜಿಲ್ಲೆಯವರಾಗಿದ್ದರೆ, ಎಸ್ ನಿಜಲಿಂಗಪ್ಪ ಚಿತ್ರದುರ್ಗ ಜಿಲ್ಲೆಯವರು.

2018ರ ವಿಧಾನಸಭಾ ಚುನಾವಣೆಯಲ್ಲಿ ಶಿವಮೊಗ್ಗ ಜಿಲ್ಲೆಯ 7 ಕ್ಷೇತ್ರಗಳ ಪೈಕಿ ಭದ್ರಾವತಿ ಹೊರತು ಪಡಿಸಿ 6 ಕ್ಷೇತ್ರಗಳನ್ನು ಬಿಜೆಪಿ ಗೆದ್ದುಕೊಂಡಿದ್ದು, ಚಿಕ್ಕಮಗಳೂರು ಜಿಲ್ಲೆಯ ಐದು ಕ್ಷೇತ್ರಗಳ ಪೈಕಿ ಬಿಜೆಪಿ 4 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರೆ, ಕಾಂಗ್ರೆಸ್ ಒಂದರಲ್ಲಿ ಗೆಲುವು ಸಾಧಿಸಿದೆ.

ಮಲೆನಾಡು ಮತ್ತು ಮಧ್ಯ ಕರ್ನಾಟಕ ಭಾಗದ 25 ಕ್ಷೇತ್ರಗಳ ಪೈಕಿ ಬಿಜೆಪಿ 20 ಸ್ಥಾನಗಳನ್ನು ಗೆಲ್ಲುವ ಮೂಲಕ ರಾಜಕೀಯ ಭೂದೃಶ್ಯದಲ್ಲಿ ಪ್ರಾಬಲ್ಯ ಸಾಧಿಸಿದೆ, ಉಳಿದವುಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ.

ಒಂದು ಕಾಲದಲ್ಲಿ ಕಾಂಗ್ರೆಸ್‌ನ ಕೋಟೆಯಾಗಿದ್ದ ನಾಲ್ಕು ಜಿಲ್ಲೆಗಳು ಕಾಂಗ್ರೆಸ್ ನಿಂದ ಕೈ ತಪ್ಪಿವೆ. ಆದರೂ ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ನಡೆಯಲಿದೆ.

ಚಿಕ್ಕಮಗಳೂರಿನಲ್ಲಿ ಬಿಜೆಪಿ 2004 ರಿಂದ ಹಿಂದೂ ಮತಗಳನ್ನು ಕ್ರೋಢೀಕರಿಸಿ ತನ್ನ ನೆಲೆಯನ್ನು ಸ್ಥಾಪಿಸುವಲ್ಲಿ ಯಶಸ್ವಿಯಾಗಿದೆ.

ಪ್ರಾಬಲ್ಯವಿರುವ ಲಿಂಗಾಯತ ಸಮುದಾಯವು ಕೇಸರಿ ಪಕ್ಷವನ್ನು ಬೆಂಬಲಿಸಿರುವ ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಹಿಂದುತ್ವದ ಅಂಶವು ಬಿಜೆಪಿ ಪರ ಚೆನ್ನಾಗಿ ಕೆಲಸ ಮಾಡಿದೆ.

ಆದರೆ ಈ ಬಾರಿ ಈ ಸ್ಥಾನಗಳನ್ನು ಉಳಿಸಿಕೊಳ್ಳುವುದು ಬಿಜೆಪಿಗೆ ಸುಲಭವಲ್ಲ. ಬಗೈರ್ ಹುಕುಂ ಭೂ ಒಡೆತನ, ಶರಾವತಿ ಪುನರ್ವಸತಿ ಮತ್ತು ಸರ್ಕಾರಿ ಸ್ವಾಮ್ಯದ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಲಿಮಿಟೆಡ್ ಮುಚ್ಚುವ ಸಮಸ್ಯೆಗಳು ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣಾ ವಿಷಯಗಳಾಗಿವೆ.

ಚಿಕ್ಕಮಗಳೂರಿನಲ್ಲಿ ಮಳೆಯಿಂದಾಗಿ ಕಾಫಿ ಬೆಳೆ ನಷ್ಟವಾಗಿರುವುದರ ಜೊತೆಗೆ ಪಶ್ಚಿಮಘಟ್ಟದ ಕಸ್ತೂರಿರಂಗನ್ ಸಮಿತಿ ವರದಿ ಅನುಷ್ಠಾನದ ವಿವಾದ ಪ್ರಸ್ತುತವಾಗಿದೆ. ಮಲೆನಾಡು ಮತ್ತು ಮಧ್ಯ ಕರ್ನಾಟಕದ ಅಡಿಕೆ ಬೆಳೆಗಾರರು ಗುಟ್ಕಾ ನಿಷೇಧವನ್ನು ನಿಲ್ಲಿಸಲು ಸುಪ್ರೀಂ ಕೋರ್ಟ್‌ಗೆ ಇನ್ನೂ ಅಫಿಡವಿಟ್ ಸಲ್ಲಿಸದ ಕಾರಣ ತಮ್ಮ ಉತ್ಪನ್ನಗಳ ಬೆಲೆಯ ಮೇಲೆ ನೇರವಾಗಿ ಪರಿಣಾಮ ಬೀರುವುದರಿಂದ ಕಂಗಾಲಾಗಿದ್ದಾರೆ.

ಭದ್ರಾ ಮೇಲ್ದಂಡೆ ಯೋಜನೆಯು ಚಿತ್ರದುರ್ಗ ಜಿಲ್ಲೆಯಲ್ಲಿ ಚುನಾವಣಾ ವಿಷಯವಾಗಿ ಮಾರ್ಪಟ್ಟಿದೆ. ಕೇಂದ್ರ ಸರ್ಕಾರ ಈ ಯೋಜನೆಗೆ 5,300 ಕೋಟಿ ರೂಪಾಯಿ ಪ್ಯಾಕೇಜ್ ಘೋಷಿಸಿರುವುದರಿಂದ ಈ ಬಾರಿ ಬಿಜೆಪಿಗೆ ಸಹಾಯ ಮಾಡುವ ಸಾಧ್ಯತೆಯಿದೆ.

ದಾವಣಗೆರೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಇಲ್ಲದಿರುವುದು ಸಮಸ್ಯೆಯಾಗಿತ್ತು, ಆದರೆ ಬಿಜೆಪಿ ಸರ್ಕಾರವು ಇಲ್ಲಿ ಕಾಲೇಜು ಸ್ಥಾಪನೆ ಮಾಡುವುದಾಗಿ ಘೋಷಿಸಿದ್ದರಿಂದ ಬಿಜೆಪಿ ವರವಾಗಿದೆ.

ಈ ಪ್ರದೇಶ-ನಿರ್ದಿಷ್ಟ ಸಮಸ್ಯೆಗಳಲ್ಲದೆ, ಅಗತ್ಯ ವಸ್ತುಗಳ ಬೆಲೆ ಏರಿಕೆ ಮತ್ತು ಭ್ರಷ್ಟಾಚಾರದಂತಹ ವಿಷಯಗಳು ಸಾಮಾನ್ಯ ಮತದಾರರ ಮನಸ್ಸಿನ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಒಳಮೀಸಲಾತಿಗೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿಯಕೋಪವನ್ನು ಬಿಜೆಪಿ ಹೇಗೆ ಶಮನಗೊಳಿಸುತ್ತದೆ ಎಂಬುದು ಕುತೂಹಲಕಾರಿಯಾಗಿದೆ.

ಆದರೆ ಕಾಂಗ್ರೆಸ್ ಅದರ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ಲಿಂಗಾಯತರು ಬಿಜೆಪಿಯನ್ನು ಬೆಂಬಲಿಸುತ್ತಾರೆಯೇ ಎಂಬುದು ದೊಡ್ಡ ಪ್ರಶ್ನೆಯಾಗಿದೆ.  ಆ ಸಮಸ್ಯೆಯನ್ನು ಗ್ರಹಿಸಿರುವ ಕಾಂಗ್ರೆಸ್ ಈಗ ಲಿಂಗಾಯತರು, ಹಿಂದುಳಿದವರು, ದಲಿತರು ಮತ್ತು ಮುಸ್ಲಿಮರನ್ನು ಓಲೈಸಲು ಪ್ರಯತ್ನಿಸುತ್ತಿದೆ.

No Comments

Leave A Comment