ಕೇಜ್ರಿವಾಲ್ ಖುಲಾಸೆ: ದ್ವೇಷದ ರಾಜಕೀಯಕ್ಕೆ ಕಪಾಳ ಮೋಕ್ಷ ಎಂದ ಶಿವಸೇನಾ (UBT), ಪ್ರಧಾನಿ ಮೋದಿ, ಶಾ ಕ್ಷಮೆಯಾಚಿಸಲು ಒತ್ತಾಯ!
ಮುಂಬೈ: ಅಬಕಾರಿ ಹಗರಣದಲ್ಲಿ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ಅವರನ್ನು ನ್ಯಾಯಾಲಯ ಖುಲಾಸೆಗೊಳಿಸಿರುವುದು ದ್ವೇಷದ ರಾಜಕೀಯಕ್ಕೆ ಮಾಡಿದ ಕಪಾಳ ಮೋಕ್ಷ ಎಂದು ಶಿವಸೇನಾ (ಯುಬಿಟಿ) ಶನಿವಾರ ಹೇಳಿದೆ.
ದೆಹಲಿ ಮಾಜಿ ಮುಖ್ಯಮಂತ್ರಿ ವಿರುದ್ಧ ಸುಳ್ಳಿ ಕೇಸ್ ಹಾಕಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ.
ತನ್ನ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಕಟುವಾಗಿ ಟೀಕಿಸಿದ್ದು, ಅಬಕಾರಿ ನೀತಿ ಪ್ರಕರಣದ ಆರೋಪಗಳು “ರಾಜಕೀಯ ಪ್ರೇರಿತವಾಗಿವೆ. ಅಲ್ಲದೇ ಬಿಜೆಪಿ ನಾಯಕರು, ದೆಹಲಿ ಲೆಫ್ಟಿನೆಂಟ್ ಗವರ್ನರ್ ಮತ್ತು ಇಡಿ ಮತ್ತು ಸಿಬಿಐನಂತಹ ಕೇಂದ್ರೀಯ ಏಜೆನ್ಸಿಗಳು ರಾಷ್ಟ್ರ ರಾಜಧಾನಿಯಲ್ಲಿ ಎಎಪಿ ಸರ್ಕಾರವನ್ನು ಪದಚ್ಯುತಗೊಳಿಸಲು ಕೈಜೋಡಿಸಿವೆ ಎಂದು ಆರೋಪಿಸಿದೆ.
AAP ಸರ್ಕಾರದ ಪತನಕ್ಕೆ ಕಾರಣವಾದ ಅಬಕಾರಿ ನೀತಿ ಪ್ರಕರಣದಲ್ಲಿ ಕೇಜ್ರಿವಾಲ್, ಉಪ ನಾಯಕ ಮನೀಶ್ ಸಿಸೋಡಿಯಾ ಮತ್ತು ಇತರ 21 ಜನರನ್ನು ದೆಹಲಿ ನ್ಯಾಯಾಲಯ ಶುಕ್ರವಾರ ಬಿಡುಗಡೆ ಮಾಡಿದೆ.
ನೀತಿಯಲ್ಲಿ ಯಾವುದೇ ಪಿತೂರಿ ಅಥವಾ ಕ್ರಿಮಿನಲ್ ಉದ್ದೇಶ” ಕಂಡುಬಂದಿಲ್ಲ ಎಂದು ನ್ಯಾಯಾಲಯ, ಸಿಬಿಐಯನ್ನು ತರಾಟೆಗೆ ತೆಗೆದುಕೊಂಡಿದೆ.
ಅಬಕಾರಿ ನೀತಿ ಪ್ರಕರಣದಲ್ಲಿ ಮಾರ್ಚ್ 21, 2024ರಂದು ಜಾರಿ ನಿರ್ದೇಶನಾಲಯದಿಂದ ತದನಂತರ ಸಿಬಿಐನಿಂದ ಬಂಧಿಸಲ್ಪಟ್ಟ ಕೇಜ್ರಿವಾಲ್ 155 ದಿನಗಳನ್ನು ಜೈಲಿನಲ್ಲಿ ಕಳೆದ ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.
ಶಿವಸೇನಾ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ನ್ಯಾಯಾಲಯದ ತೀರ್ಪನ್ನು ದ್ವೇಷದ ರಾಜಕೀಯಕ್ಕೆ ಮಾಡಿದ”ಕಪಾಳಮೋಕ್ಷ” ಎಂದು ಬಣ್ಣಿಸಿದೆ. ಅಲ್ಲದೇ ಪ್ರಾಸಿಕ್ಯೂಷನ್ ತನ್ನ ಆರೋಪಗಳನ್ನು ರುಜುವಾತುಪಡಿಸಲು ವಿಫಲವಾಗಿದೆ ಎಂದು ಹೇಳಿದೆ.
ಸಿಬಿಐ ಹೊರಿಸಿರುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ಯಾವುದೇ ಕ್ರಿಮಿನಲ್ ಪಿತೂರಿ ಇಲ್ಲ ಎಂಬುದನ್ನು ನ್ಯಾಯಾಲಯವು ಸ್ಪಷ್ಟವಾಗಿ ಗಮನಿಸಿದ್ದು, ಪ್ರಕರಣವನ್ನು “ಪೊಳ್ಳು” ಎಂದು ಬಣ್ಣಿಸಿದೆ. ದೆಹಲಿ ಚುನಾವಣೆ ಹಿನ್ನೆಲೆಯಲ್ಲಿ ಎಎಪಿ ಸರ್ಕಾರವನ್ನು ಭ್ರಷ್ಟ ಸರ್ಕಾರ ಎಂದು ಬಿಂಬಿಸುವ ಉದ್ದೇಶದಿಂದ ಕೇಜ್ರಿವಾಲ್ ಅವರ ನಿವಾಸದ ಮೇಲೆ ದಾಳಿ ನಡೆಸಲಾಯಿತು. ನಂತರ ಅವರನ್ನು ಬಂಧಿಸಿ ಸುದೀರ್ಘ ಅವಧಿಗೆ ಜೈಲಿನಲ್ಲಿ ಇರಿಸಲಾಗಿತ್ತು ಎಂದು ಟೀಕಾ ಪ್ರಹಾರ ನಡೆಸಲಾಗಿದೆ.
ಅಬಕಾರಿ ನೀತಿ ಹಗರಣದಲ್ಲಿ ಕೇಂದ್ರೀಯ ತನಿಖಾ ಏಜೆನ್ಸಿಗಳು ಕೇಜ್ರಿವಾಲ್, ಸಿಸೋಡಿಯಾ ಮತ್ತಿತರ ಸಚಿವರನ್ನು ತೀವ್ರ ವಿಚಾರಣೆ ನಡೆಸಿತ್ತು. ಇದೀಗ ಸುಪ್ರೀಂಕೋರ್ಟ್ ಸಿಬಿಐಗೆ ಕಪಾಳ ಮೋಕ್ಷ ಮಾಡಿದೆ. ಕೇಜ್ರಿವಾಲ್ ಬಂಧನ ನಂತರ ಸತ್ಯಕ್ಕೆ ಸಂದ ಜಯ ಎಂದು ಬಿಜೆಪಿ ನಾಯಕರು ಸಂಭ್ರಮಾಚರಣೆ ಮಾಡಿದ್ದರು. ಆದರೆ, ಅವರನ್ನು ಬಿಡುಗಡೆ ಮಾಡಲು ಕೋರ್ಟ್ ನೀಡಿರುವ ತೀರ್ಪು ಪ್ರಕರಣ ಪೊಳ್ಳು ಎಂಬುದನ್ನು ಸಾಬೀತುಪಡಿಸಿದೆ. ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಕೇಜ್ರಿವಾಲ್ ಅವರನ್ನು ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದೆ.