ಉಸ್ಮಾನ್ ಹಾದಿಯ ಸಾವಿನ ಸುದ್ದಿ ಹರಡುತ್ತಿದ್ದಂತೆ ಢಾಕಾದಲ್ಲಿ ಕನಿಷ್ಠ ಮೂರು ಕಟ್ಟಡಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಗಿದ್ದು, ಘಟನೆ ಬೆನ್ನಲ್ಲೇ ಅಗ್ನಿಶಾಮಕ ಹಾಗೂ ನಾಗರಿಕ ರಕ್ಷಣಾ ಇಲಾಖೆಯ ವಕ್ತಾರರು ಕಾರ್ಯಾಚರಣೆ ಆರಂಭಿಸಿದ್ದಾರೆ.
ಡೈಲಿ ಸ್ಟಾರ್ ಕಟ್ಟಡದಲ್ಲಿ ಉಂಟಾದ ಬೆಂಕಿಯನ್ನು ಶುಕ್ರವಾರ ಬೆಳಗಿನ 1.40ರ ವೇಳೆಗೆ ನಿಯಂತ್ರಣಕ್ಕೆ ತರಲಾಗಿದೆ. ಆದರೂ 27 ಸಿಬ್ಬಂದಿ ಕಟ್ಟಡದ ಒಳಗೇ ಸಿಲುಕಿದ್ದಾರೆಂದು ವರದಿಗಳು ತಿಳಿಸಿವೆ.
ಡೈಲಿ ಸ್ಟಾರ್ ಪತ್ರಿಕೆಯ ವರದಿಗಾರ್ತಿ ಝೈಮಾ ಇಸ್ಲಾಂ, “ನಾನು ಉಸಿರಾಡಲು ಸಾಧ್ಯವಾಗುತ್ತಿಲ್ಲ. ಇಲ್ಲಿ ತುಂಬಾ ಹೊಗೆ ಇದೆ. ನಾನು ಒಳಗಿದ್ದೇನೆ ಎಂದು ಫೇಸ್ಬುಕ್ನಲ್ಲಿ ಬರೆಯುವ ಮೂಲಕ ತಮ್ಮ ಸಂಕಷ್ಟವನ್ನು ಹೇಳಿಕೊಂಡಿದ್ದಾರೆ.
ಪ್ರತಿಭಟನಾಕಾರರು ಪತ್ರಿಕೆಗಳು ಭಾರತ ಪರವಾಗಿವೆ ಎಂದು ಆರೋಪಿಸಿದ್ದು, ಮಾಜಿ ಪ್ರಧಾನಿ ಶೇಖ್ ಹಸೀನಾ ಭಾರತದಲ್ಲಿ ಆಶ್ರಯ ಪಡೆದಿರುವುದನ್ನು ಉಲ್ಲೇಖಿಸಿದ್ದಾರೆ.
ಇದೇ ವೇಳೆ, ಬಾಂಗ್ಲಾದೇಶದಲ್ಲಿನ ಭಾರತದ ರಾಯಭಾರಿ ಕಚೇರಿಯನ್ನು ನುಗ್ಗಲು ನೂರಾರು ಪ್ರತಿಭಟನಾಕಾರರು ಯತ್ನಿಸಿದ್ದು, ಪೊಲೀಸರು ಅಶ್ರುವಾಯ ಪ್ರಯೋಗಿಸಿ ಗುಂಪನ್ನು ಚದುರಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಈ ನಡುವೆ ಢಾಕಾದಿಂದ ಹೊರ ಹೋಗುವ ಪ್ರಮುಖ ಹೆದ್ದಾರಿಯನ್ನೂ ಪ್ರತಿಭಟನಾಕಾರರು ತಡೆದಿದ್ದು, ಢಾಕಾದಲ್ಲಿರುವ ಬೆಂಗಾಳಿ ಸಂಸ್ಕೃತಿಗೆ ಸಮರ್ಪಿತ ಕೇಂದ್ರವಾದ ಛಾಯನಾಟ್ ಮೇಲೂ ದಾಳಿ ನಡೆಸಿದ್ದಾರೆಂದು ತಿಳಇದುಬಂದಿದೆ.
ಉಸ್ಮಾನ್ ಹಾದಿ ಸಾವು ಕುರಿತು ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಅವರು ಪ್ರತಿಕ್ರಿಯೆ ನೀಡಿದ್ದು, ಹಾದಿ ಸಾವು ದೇಶಕ್ಕೆ ತುಂಬಲಾರದ ನಷ್ಟವಾಗಿದೆ. ಭಯ, ಭೀತಿ ಅಥವಾ ರಕ್ತಪಾತದ ಮೂಲಕ ಪ್ರಜಾಪ್ರಭುತ್ವದ ಪಯಣವನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಈ ದಾಳಿ ಚುನಾವಣೆ ಹಾಳುಮಾಡುವ ಉದ್ದೇಶದಿಂದ ಕೂಡಿರುವ ಪೂರ್ವನಿಯೋಜಿತ ಕೃತ್ಯ ಎಂದೂ ಆರೋಪಿಸಿದ್ದಾರೆ.
ಸಿಂಗಾಪುರದ ವಿದೇಶಾಂಗ ಸಚಿವಾಲಯ ಹೇಳಿಕೆ ನೀಡಿದ್ದು, ವೈದ್ಯರ ಅತ್ಯುತ್ತಮ ಪ್ರಯತ್ನಗಳ ನಡುವೆಯೂ ಚಿಕಿತ್ಸೆ ಫಲಕಾರಿಯಾಗದೆ ಉಸ್ಮಾನ್ ಹಾದಿ ಮೃತಪಟ್ಟಿದ್ದಾರೆ, ಮೃತದೇಹವನ್ನು ಬಾಂಗ್ಲಾದೇಶಕ್ಕೆ ಮರಳಿಸಲು ಸಹಾಯ ಮಾಡಲಾಗುತ್ತಿದೆ ಎಂದು ತಿಳಿಸಿದೆ.
ಈ ನಡುವೆ ಬಾಂಗ್ಲಾದೇಶ ಸರ್ಕಾರ ಶುಕ್ರವಾರ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆಗಳನ್ನು ಆಯೋಜಿಸುವುದಾಗಿ ಮತ್ತು ಶನಿವಾರ ಅರ್ಧ ದಿನದ ಶೋಕಾಚರಣೆ ನಡೆಸುವುದಾಗಿ ಘೋಷಿಸಿದೆ.
ಗುಂಡಿನ ದಾಳಿ ನಡೆಸಿದವರಿಗಾಗಿ ಶೋಧ
ಏತನ್ಮಧ್ಯೆ ಉಸ್ಮಾನ್ ಹಾದಿ ಮೇಲಿನ ಗುಂಡಿನ ದಾಳಿ ನಡೆಸಿದ ಆರೋಪಿಗಳಿಗಾಗಿ ಬಾಂಗ್ಲಾದೇಶ ಪೊಲೀಸರು ವ್ಯಾಪಕ ಶೋಧ ಕಾರ್ಯ ಆರಂಭಿಸಿದ್ದು, ಇಬ್ಬರು ಪ್ರಮುಖ ಶಂಕಿತರ ಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ.
ಆರೋಪಿಗಳ ಕುರಿತು ಮಾಹಿತಿ ನೀಡಿದವರಿಗೆ 50 ಲಕ್ಷ ಟಾಕಾ (ಸುಮಾರು 42 ಸಾವಿರ ಡಾಲರ್) ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.
2024ರ ಜನವರಿಯಲ್ಲಿ ನಡೆದ ಚುನಾವಣೆಯಲ್ಲಿ ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್ 222 ಸ್ಥಾನಗಳನ್ನು ಗೆದ್ದಿದ್ದರೂ, ವಿರೋಧ ಪಕ್ಷಗಳು ಅದನ್ನು ನಕಲಿ ಚುನಾವಣೆ ಎಂದು ಆರೋಪಿಸಿದ್ದವು. ಮುಂದಿನ ಚುನಾವಣೆಯಲ್ಲಿ ಖಾಲಿದಾ ಜಿಯಾ ನೇತೃತ್ವದ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್ಪಿ) ಗೆಲುವಿನ ನಿರೀಕ್ಷೆಯಲ್ಲಿದೆ.