ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...
ಉಡುಪಿ ನಗರದ ರಿಕ್ಷಾ ನಿಲ್ದಾಣಗಳಿಗೆ ವಾರದೊಳಗೆ ನಿಯಮಾವಳಿ ರಚನೆ: ಶಾಸಕ ಸುವರ್ಣ
ಉಡುಪಿ: ರಿಕ್ಷಾ ಚಾಲಕರ ಎಲ್ಲ ಸಮಸ್ಯೆಗಳನ್ನು ಗಮನದಲ್ಲಿರಿಸಿಕೊಂಡು ಚಾಲಕರ ವೃತ್ತಿಗೆ ನ್ಯಾಯ ಒದಗಿಸಿಕೊಡುವ ರೀತಿಯಲ್ಲಿ ಮತ್ತು ಜನರಿಗೆ ಉತ್ತಮ ಸೇವೆ, ವಾಹನ ಸಂಚಾರಕ್ಕೆ ತೊಂದರೆ ಆಗದಂತೆ ಎಲ್ಲರ ಅಭಿಪ್ರಾಯ ಪಡೆದು ವಾರದೊಳಗೆ ಸೂಕ್ತ ನಿರ್ಣಯವನ್ನು ತೆಗೆದುಕೊಳ್ಳಲಾಗುವುದು ಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಹೇಳಿದರು.
ಉಡುಪಿ ನಗರದಲ್ಲಿ ಕಾರ್ಯಾಚರಿಸುತ್ತಿರುವ ರಿಕ್ಷಾ ನಿಲ್ದಾಣಗಳಿಗೆ ನಿಯಮಾವಳಿ ರಚನೆ, ಮೂಲಭೂತ ಸೌಕರ್ಯ ಹಾಗೂ ಜನರಿಗೆ ಉತ್ತಮ ಸೇವೆ ನೀಡುವ ಕುರಿತು ಅಭಿಪ್ರಾಯ ಸಂಗ್ರಹಿಸುವ ನಿಟ್ಟಿನಲ್ಲಿ ಉಡುಪಿ ನಗರಸಭೆ ವತಿಯಿಂದ ನಗರಸಭೆ ಸಭಾಂಗಣದಲ್ಲಿ ಕರೆಯಲಾದ ರಿಕ್ಷಾ ಚಾಲಕರ ಸಭೆಯಲ್ಲಿ ಮಾತನಾಡಿದರು. ನಗರಸಭೆ ತೆಗೆದುಕೊಳ್ಳುವ ಈ ನಿರ್ಣಯಕ್ಕೆ ಎಲ್ಲ ರಿಕ್ಷಾ ಚಾಲಕರು ಬದ್ಧರಾಗಿರಬೇಕು ಎಂದರು.
ರಿಕ್ಷಾ ಚಾಲಕರ ಸಂಘದ ಪದಾಧಿಕಾರಿಗಳಾದ ಶಿವಾನಂದ ಮೂಡಬೆಟ್ಟು ಮಾತನಾಡಿ, ಗ್ರಾಮೀಣ ಪ್ರದೇಶದ ವಲಯ ಎರಡರ ರಿಕ್ಷಾಗಳು ತುರ್ತು ಬಾಡಿಗೆಗೆ ನಗರಕ್ಕೆ ಬಂದರೆ ಪೊಲೀಸರು ದಂಡ ವಿಧಿಸುತ್ತಿದ್ದಾರೆ. ಸಿಎನ್ಜಿ ತುಂಬಿಸಲು ನಗರಕ್ಕೆ ಬರಲು ತೊಂದರೆ ಆಗುತ್ತದೆ. ವಲಯ 2ರ ರಿಕ್ಷಾಗಳು ಹಲವು ವರ್ಷಗಳಿಂದ ಇಲ್ಲೇ ಇದ್ದವು. ಇದೀಗ ನಗರಕ್ಕೆ ಬರಬಾರದು ಎಂಬುದಾಗಿ ದೌರ್ಜನ್ಯ ಮಾಡಲಾಗುತ್ತಿದೆ.ಈ ಬಗ್ಗೆ ಸರಿಯಾದ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಸಂಘದ ಪದಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಮಾತನಾಡಿ, ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ 2000ರವರೆಗೆ 40 ರಿಕ್ಷಾ ನಿಲ್ದಾಣಕ್ಕೆ ಅನುಮತಿ ನೀಡಿ, ಒಂದೊಂದು ನಿಲ್ದಾಣದಲ್ಲಿ ಇಂತಿಷ್ಟು ರಿಕ್ಷಾಗಳಿಗೆ ಮಿತಿ ನಿಗದಿಪಡಿಸಲಾಗಿತ್ತು. ಇದೀಗ ರಿಕ್ಷಾಗಳ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ. ಅದರ ನಂತರ ಅಧಿಕೃತ ಯಾವುದೇ ನಿಲ್ದಾಣಗಳು ಆಗಿಲ್ಲ. ಸದ್ಯ 60 ನಿಲ್ದಾಣ ಗಳಿದ್ದು, ಅವುಗಳಲ್ಲಿ 20 ಅನಧಿಕೃತವಾಗಿದೆ ಎಂದು ತಿಳಿಸಿದರು.ಸಭೆಯಲ್ಲಿ ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಪೌರಾಯುಕ್ತ ಡಾ.ಉದಯ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.