ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...
ಬಾಳಾ ಠಾಕ್ರೆಗೆ ಭಾರತ ರತ್ನ ನೀಡುವಂತೆ ಶಿವಸೇನೆ(ಯುಬಿಟಿ) ಆಗ್ರಹ
ಮುಂಬೈ: ಶಿವಸೇನೆ ಸಂಸ್ಥಾಪಕ ದಿವಂಗತ ಬಾಳಾ ಠಾಕ್ರೆ ಅವರಿಗೆ ಭಾರತ ರತ್ನ ನೀಡಬೇಕು ಎಂದು ಶಿವಸೇನೆ(ಯುಬಿಟಿ) ಗುರುವಾರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.
ದಿವಂಗತ ಬಾಳಾ ಠಾಕ್ರೆ ಅವರ 99ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಮಾತನಾಡಿದ ಶಿವಸೇನೆ(ಯುಬಿಟಿ) ನಾಯಕ ಸಂಜಯ್ ರಾವತ್, ಕಳೆದ ಹತ್ತು ವರ್ಷಗಳಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು “ಅರ್ಹರಲ್ಲದ” ಕೆಲವು ವ್ಯಕ್ತಿಗಳಿಗೆ ದೇಶದ ಅತ್ಯುನ್ನತ ನಾಗರಿಕ ಗೌರವನ್ನು ನೀಡಿದೆ ಎಂದು ಆರೋಪಿಸಿದರು.
“ಆದರೆ ದೇಶದಲ್ಲಿ ನಿಜವಾಗಿಯೂ ಹಿಂದುತ್ವದ ಬೀಜ ಬಿತ್ತಿದ ವ್ಯಕ್ತಿಗೆ ಭಾರತ ರತ್ನವನ್ನೂ ನೀಡಬೇಕು. ಶಿವಸೇನೆ ಸಂಸ್ಥಾಪಕರಿಗೆ ಭಾರತ ರತ್ನ ಏಕೆ ನೀಡಿಲ್ಲ? ‘ಹಿಂದೂ ಹೃದಯ ಸಾಮ್ರಾಟ್’ ಬಾಳಾ ಠಾಕ್ರೆ ಅವರಿಗೆ ಭಾರತ ರತ್ನ ನೀಡಿ ಗೌರವಿಸಬೇಕು. ಇದು ಶಿವಸೇನೆ(ಯುಬಿಟಿ)ಯ ಬೇಡಿಕೆಯಾಗಿದೆ” ಎಂದು ಅವರು ಹೇಳಿದರು.
ಠಾಕ್ರೆ ಅವರ ಜನ್ಮ ಶತಮಾನೋತ್ಸವಕ್ಕೆ ಒಂದು ವರ್ಷ ಬಾಕಿ ಇದೆ. “ಶತಮಾನೋತ್ಸವ ಆರಂಭವಾಗುವ ಮೊದಲು, ಅವರಿಗೆ ಭಾರತ ರತ್ನ ನೀಡುವುದು ಅವಶ್ಯಕ. ನೀವು ವೀರ್ ಸಾವರ್ಕರ್ ಅವರಿಗೆ ಭಾರತ ರತ್ನ ನೀಡಬೇಕಿಲ್ಲ. ಆದರೆ ಬಾಳಾ-ಸಾಹೇಬ್ ಅವರಿಗೆ ಭಾರತ ರತ್ನ ನೀಡಿದರೆ, ಅದು ವೀರ್ ಸಾವರ್ಕರ್ ಅವರಿಗೆ ನೀಡಿದ ಗೌರವವಾಗುತ್ತದೆ” ಎಂದು ರಾಜ್ಯಸಭಾ ಸದಸ್ಯ ಹೇಳಿದರು.
ಪಕ್ಷದ ಸಹೋದ್ಯೋಗಿ ಮತ್ತು ಮುಂಬೈ ದಕ್ಷಿಣ ಸಂಸದ ಅರವಿಂದ್ ಸಾವಂತ್ ಕೂಡ ಇದೇ ಬೇಡಿಕೆಯನ್ನು ಮಂಡಿಸಿದರು. “ತಾನು ಹಿಂದುತ್ವ ಪರ ಎಂದು ಕರೆದುಕೊಳ್ಳುವ ಕೇಂದ್ರ ಸರ್ಕಾರ, ಠಾಕ್ರೆ ಅವರಿಗೆ ಭಾರತ ರತ್ನ ನೀಡಿ ಗೌರವಿಸಬೇಕು. ನಾವು ಇದನ್ನು ಬಲವಾಗಿ ಒತ್ತಾಯಿಸುತ್ತೇವೆ” ಎಂದು ಹೇಳಿದರು.