Union Budget 2026: 16ನೇ ಹಣಕಾಸು ಆಯೋಗದ ಶಿಫಾರಸಿನಂತೆ ರಾಜ್ಯಗಳಿಗೆ ಶೇ. 41ರಷ್ಟು ತೆರಿಗೆ ಹಂಚಿಕೆ - ನಿರ್ಮಲಾ ಸೀತಾರಾಮನ್...ಕೇಂದ್ರ ಬಜೆಟ್ 2026: Operation Sindoor ನಂತರ, ಭಯೋತ್ಪಾದಕ ಬೆದರಿಕೆಗಳ ನಡುವೆ ರಕ್ಷಣಾವಲಯಕ್ಕೆ ದಾಖಲೆಯ 6.81 ಲಕ್ಷ ಕೋಟಿ ಮೀಸಲು!...

ದಿನಗೂಲಿ ಕಾರ್ಮಿಕರ ಮೇಲೆ ದೌರ್ಜನ್ಯ: ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಮತ್ತೊಂದು FIR ದಾಖಲು

ಬೆಂಗಳೂರು: ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರಿಗೆ ಹೊಸ ಸಂಕಷ್ಟ ಎದುರಾಗಿದ್ದು, ದಿನಗೂಲಿ ಕಾರ್ಮಿಕರ ಮೇಲೆ ದೌರ್ಜನ್ಯ ಎಸಗಿದ ಆರೋಪದ ಮೇಲೆ ಮತ್ತೊಂದು ಎಫ್ಐಆರ್ ದಾಖಲಾಗಿದೆ.

ಮುನಿರತ್ನ ಹಾಗೂ ಇತರ ಆರು ಜನ, ಕಟ್ಟಡ ನಿರ್ಮಾಣ ಕಾರ್ಮಿಕರ ಮೇಲೆ ದೌರ್ಜನ್ಯ ಎಸಗಿದ್ದು, ತಾತ್ಕಾಲಿಕ ಶೆಡ್‌ಗಳನ್ನು ಕೆಡವಿದ್ದಾರೆ ಮತ್ತು ಮಹಿಳೆಯರ ಗೌರವಕ್ಕೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ 20 ವರ್ಷದ ದಿನಗೂಲಿ ಕಾರ್ಮಿಕ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.

ದೂರಿನ ಆಧಾರದ ಮೇಲೆ ಪೊಲೀಸರು, ಶಾಸಕ ಮುನಿರತ್ನ, ವಸಂತಕುಮಾರ್, ಚೆನ್ನಕೇಶವ, ನವೀನ್, ಶ್ರೀರಾಮ, ಪೀಣ್ಯ ಕಿಟ್ಟಿ ಮತ್ತು ಪೀಣ್ಯ ಗಂಗಾ ವಿರುದ್ಧ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ಪೀಣ್ಯದ ಎಸ್‌ಆರ್‌ಎಸ್ ವೃತ್ತದ ಪೀಣ್ಯ ಪ್ರಥಮ ದರ್ಜೆ ಕಾಲೇಜು ಬಳಿಯಿರುವ ಅಕ್ಕಮಹಾದೇವಿ ಸ್ಲಂನಲ್ಲಿ ಸುಮಾರು 50 ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿವೆ. ಶಾಸಕ ಮುನಿರತ್ನ ಮತ್ತು ಸಹಚರರು ಜೆಸಿಬಿ ತಂದು ಏಕಾಏಕಿ ಎಲ್ಲರ ಮನೆಯನ್ನು ನೆಲಸಮ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಲಾಗಿದೆ.

ಸೋಮವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಶಾಸಕ ಮುನಿರತ್ನ ತಮ್ಮ ಸಹಚರರೊಂದಿಗೆ ಕೊಳೆಗೇರಿಗೆ ಜೆಸಿಬಿಗಳೊಂದಿಗೆ ಆಗಮಿಸಿ ತಾತ್ಕಾಲಿಕ ಶೆಡ್‌ಗಳನ್ನು ಕೆಡವಿದರು. ಸ್ಥಳೀಯ ನಿವಾಸಿಗಳು ಈ ಕ್ರಮವನ್ನು ಪ್ರಶ್ನಿಸಿದರು. ಆದರೆ ಮುನಿರತ್ನ ಅವರನ್ನು ನಿಂದಿಸಲು ಪ್ರಾರಂಭಿಸಿದರು ಮತ್ತು ಉತ್ತರ ಕರ್ನಾಟಕದ ನಿಮ್ಮ ನಿಮ್ಮ ಊರುಗಳಿಗೆ ತೆರಳುವಂತೆ ಸೂಚಿಸಿದರು. ಕೆಲವು ಮಹಿಳೆಯರಿಗೆ ಒದೆಯುವ ಮೂಲಕ ಹಲ್ಲೆ ನಡೆಸಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.

ಶಾಸಕ ಮತ್ತು ಇತರ ಆರು ಜನರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ(ದೌರ್ಜನ್ಯ ತಡೆ) ಕಾಯ್ದೆಯಡಿಯಲ್ಲಿ ಹಾಗೂ ಸೆಕ್ಷನ್ 324 (ಕಿಡಿಗೇಡಿತನ), 74 (ಮಹಿಳೆಯ ಮೇಲೆ ಹಲ್ಲೆ), 351 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಆರ್‌ಎಂಸಿ ಯಾರ್ಡ್ ಪೊಲೀಸರು ತಿಳಿಸಿದ್ದಾರೆ.

No Comments

Leave A Comment