ಜನವರಿ 18ರಿ೦ದ ಶೀರೂರು ಮಠಾಧೀಶರಾದ ಶ್ರೀವೇದವರ್ಧನ ಶ್ರೀಪಾದರ ಪ್ರಥಮ ಪರ್ಯಾಯ ಆರ೦ಭ-ಅದ್ದೂರಿಯ ಧಾನ್ಯ, ಶಿಖರ ಮುಹೂರ್ತ ಸ೦ಪನ್ನ…..ಉಡುಪಿ ಮೋಟಾರ್ಸ್ ನಲ್ಲಿ ಯಮಹಾ ಕಂಪೆನಿಯ ನೂತನ ರೆಟ್ರೋ ಮೊಡೆಲ್ ಬೈಕ್ ‘XSR 155 ಮಾರುಕಟ್ಟೆಗೆ ಬಿಡುಗಡೆ
ಜೈಪುರ ಗ್ಯಾಸ್ ಟ್ಯಾಂಕರ್ ಸ್ಫೋಟ ಪ್ರಕರಣ: ಮೃತರ ಸಂಖ್ಯೆ 14ಕ್ಕೆ ಏರಿಕೆ, ಹಲವರ ಸ್ಥಿತಿ ಗಂಭೀರ
ಜೈಪುರ: ಜೈಪುರ-ಅಜ್ಮೀರ್ ಹೆದ್ದಾರಿಯಲ್ಲಿ ಎಲ್ಪಿಜಿ ಟ್ಯಾಂಕರ್ ಅಪಘಾತ, ಸ್ಫೋಟ ಪ್ರಕರಣದಲ್ಲಿ ಸಾವನ್ನಪ್ಪಿದವರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ ಎಂದು ಶನಿವಾರ ತಿಳಿದುಬಂದಿದೆ.
ಭೀಕರ ಅಪಘಾತದಲ್ಲಿ 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಗಾಯಾಳುಗಳಿಗೆ ಚಿಕಿತ್ಸೆ ಮುಂದುವರೆದಿದೆ. ಸುಟ್ಟುಹೋಗಿದ್ದ ಐವರ ಮೃತದೇಹಗಳು ಇದೀಗ ಪತ್ತೆಯಾಗಿದ್ದು, ಇದರೊಂದಿಗೆ ಮೃತರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಸ್ತುತ ಪತ್ತೆಯಾಗಿರುವ ಐವರ ಮೃತದೇಹಗಳ ಗುರುತು ಇನ್ನೂ ಪತ್ತೆಯಾಗಿಲ್ಲ. ಗಾಯಾಗೊಂಡಿರುವ ಹಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿಸಿದ್ದಾರೆ.
27 ಗಾಯಾಳುಗಳು ಎಸ್ಎಂಎಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಏಳು ಮಂದಿ ವೆಂಟಿಲೇಟರ್ ಬೆಂಬಲದಲ್ಲಿದ್ದಾರೆಂದು ಆಸ್ಪತ್ರೆಯ ಅಧೀಕ್ಷಕ ಸುಶೀಲ್ ಭಾಟಿ ಅವರು ಹೇಳಿದ್ದಾರೆ.
ಶುಕ್ರವಾರ ಮುಂಜಾನೆ ಭಂಕ್ರೋಟಾ ಪ್ರದೇಶದ ಹೆದ್ದಾರಿಯಲ್ಲಿ ಟ್ರಕ್ವೊಂದು ಎಲ್ಪಿಜಿ ಟ್ಯಾಂಕರ್ಗೆ ಢಿಕ್ಕಿ ಹೊಡೆದಿದ್ದು, ಪರಿಣಾಮ ಸ್ಥಳದಲ್ಲಿ ಟ್ಯಾಂಕರ್ ಸ್ಫೋಟಗೊಂಡು ಭಾರೀ ಪ್ರಮಾಣದ ಬೆಂಕಿ ಕಾಣಿಸಿಕೊಂಡಿತ್ತು. 35ಕ್ಕೂ ಹೆಚ್ಚು ವಾಹನಗಳು ಅಗ್ನಿಗಾಹುತಿಯಾಗಿದ್ದವು.
ಅಪಘಾತದಲ್ಲಿ ಗಾಯಗೊಂಡವರ ಪೈಕಿ ಅರ್ಧದಷ್ಟು ಜನರ ಸ್ಥಿತಿ ಚಿಂತಜನಕವಾಗಿದೆ ಎಂದು ರಾಜಸ್ಥಾನದ ಆರೋಗ್ಯ ಸಚಿವ ಗಜೇಂದ್ರ ಸಿಂಗ್ ಖಿನ್ವ್ಸರ್ ಕಳವಳ ವ್ಯಕ್ತಪಡಿಸಿದ್ದಾರೆ.
ಘಟನೆಯಲ್ಲಿ ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿರುವ ಪ್ರಧಾನಿ ಮೋದಿಯವರು, ಮೃತರ ಕುಟುಂಬದವರಿಗೆ ತಲಾ ರೂ.2 ಲಕ್ಷ ಮತ್ತು ಗಾಯಗೊಂಡವರಿಗೆ ತಲಾ ರೂ.50 ಸಾವಿರ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ. ರಾಜಸ್ಥಾನ ಸರ್ಕಾರವೂ ಮೃತರ ಕುಟುಂಬಕ್ಕೆ ತಲಾ ರೂ.5 ಲಕ್ಷ ಮತ್ತು ಗಾಯಗೊಂಡವರಿಗೆ ರೂ.1 ಲಕ್ಷ ಪರಿಹಾರ ಘೋಷಿಸಿದೆ.