ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...
ಮಂಗಳೂರಿನಲ್ಲಿ ಅಯ್ಯಪ್ಪಸ್ವಾಮಿ ಪವಾಡ: ಮಾಲೆ ಹಾಕಿದ ಬಳಿಕ ಬಾಲಕನಿಗೆ ಬಂತು ಮಾತು
ಮಂಗಳೂರು:ಡಿ. 15: ಅಯ್ಯಪ್ಪ ಸ್ವಾಮಿಯ ಭಕ್ತರಿಗೆ ಸ್ವಾಮಿಯ ಮಹಿಮೆಯ ಪ್ರತ್ಯಕ್ಷ್ಯ ದರ್ಶನವಾಗುತ್ತದೆ ಎನ್ನುವ ಹಲವು ಸುದ್ಧಿಗಳು ಎಲ್ಲೆಡೆ ಕೇಳಿ ಬರುತ್ತದೆ. ಇದೇ ಕಾರಣಕ್ಕಾಗಿಯೇ ಅಯ್ಯಪ್ಪ ಸ್ವಾಮಿಯ ಪ್ರಮುಖ ಕ್ಷೇತ್ರ ಶಬರಿಮಲೆಗೆ ಭೇಟಿ ನೀಡುವ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತೆ. ಇಂತಹದೊಂದು ಪವಾಡ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಬೆಳಕಿಗೆ ಬಂದಿದೆ. ಒಂದು ಶಬ್ದ ಕೂಡ ಮಾತನಾಡಲು ಬಾಯಿ ಬರದ ಬಾಲಕನೊಬ್ಬ ಒಂದು ವರ್ಷದ ಹಿಂದೆ ಶಬರಿಮಲೆ ಏರಿದ್ದ. ಈ ಬಾರಿ ಮತ್ತೆ ಶಬರಿಮಲೆ ಏರಲು ಮಾಲೆ ಹಾಕಿರುವ ಬಾಲಕ ಇದೀಗ ಮಾತನಾಡಲು ಆರಂಭಿಸಿದ್ದಾನೆ. ಈ ಘಟನೆ ಎಲ್ಲರ ಅಚ್ಚರಿಗೆ ಕಾರಣವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಸಾಮೆತ್ತಡ್ಕ ನಿವಾಸಿ ಪ್ರಸನ್ನ ಇದೀಗ ಮಾತನಾಡುವ ಮೂಲಕ ಅಯ್ಯಪ್ಪ ಮಾಲಾಧಾರಿಗಳಿಗೆ ಅಚ್ಚರಿ ತಂದಿದ್ದಾರೆ. ಸಣ್ಣ ಮಕ್ಕಳು ಮೊದ ಮೊದಲಿಗೆ ಯಾವ ರೀತಿ ತೊದಲು ಮಾತನಾಡುತ್ತಾರೆ, ಅದೇ ರೀತಿ ಈ ಬಾಲಕ ಮಾತನಾಡಲು ಆರಂಭಿಸಿದ್ದಾರೆ. ಒಂದು ಶಬ್ದವನ್ನೂ ಸರಿಯಾಗಿ ಮಾತನಾಡದ ಪ್ರಸನ್ನ ಕಳೆದ ವರ್ಷ ಕರುಣಾಮಯಿ ಅಯ್ಯಪ್ಪ ಭಕ್ತವೃಂದ ಪುತ್ತೂರು ಇವರ ತಂಡದಲ್ಲಿ ಅಯ್ಯಪ್ಪ ಮಾಲೆ ಹಾಕಿ, ನಲವತ್ತೆಂಟು ದಿನಗಳ ಕಾಲ ಕಠಿಣ ವೃತಾಚರಣೆ ನಡೆಸಿ ಶಬರಿಮಲೆ ಏರಿದ್ದ.
ಸುಮಾರು 48 ಮೈಲು ದುರ್ಗಮ ಕಾಡಿನ ಹಾದಿಯಲ್ಲಿ ಸಾಗಿ ಸ್ವಾಮಿ ದರ್ಶನವನ್ನು ಪಡೆದಿದ್ದ ಈ ಬಾಲಕ ಇದೀಗ ಮಾತನಾಡಲು ಆರಂಭಿಸಿದ್ದಾನೆ. ಒಂದು ವರ್ಷಗಳ ಹಿಂದೆ ಒಂದು ಶಬ್ದ ಮಾತನಾಡಲೂ ಚಡಪಡಿಸುತ್ತಿದ್ದ ಈ ಬಾಲಕ ಇಂದು ಅಯ್ಯಪ್ಪ ಸ್ವಾಮಿಯ ಶರಣು ಕರೆಯುತ್ತಾನೆ. ಶಬ್ದಗಳು ಅಷ್ಟು ಸ್ಪಷ್ಟವಾಗಿಲ್ಲದಿದ್ದರೂ, ಅರ್ಥವಾಗುತ್ತದೆ. ಈ ಬಾರಿ ಮತ್ತೆ ಅಯ್ಯಪ್ಪ ಮಾಲೆ ಧರಿಸಿ ಶಬರಿಮಲೆ ಏರಲು ಸಿದ್ಧತೆ ನಡೆಸಿದ್ದಾನೆ. ಈ ಬಾರಿ ಶಬರಿಮಲೆ ಏರಿದರೆ ಪ್ರಸನ್ನ ಇನ್ನಷ್ಟು ಸ್ಪಷ್ಟವಾಗಿ ಮಾತನಾಡುವ ಸಾಧ್ಯತೆಯಿದೆ ಎನ್ನುವ ನಿರೀಕ್ಷೆಯಲ್ಲಿ ಹಿರಿಯ ಸ್ವಾಮಿಗಳಲ್ಲಿದೆ. ಮೊದಲ ಬಾರಿಗೆ ಮಾಲೆ ಧರಿಸಲು ಬಂದಾಗ ಕೇಳಲು ಮತ್ತು ಮಾತನಾಡಲು ಆಗದ ಸ್ಥಿತಿಯಲ್ಲಿದ್ದ ಪ್ರಸನ್ನನಿಗೆ ಇದೀಗ ಒಂದು ಕಿವಿ ಕೇಳಿಸುತ್ತಿದೆ, ಮಾತನಾಡಲು ಶಬ್ದಗಳು ಹೊರಡುತ್ತಿದೆ.
ಮೊದಲ ಬಾರಿಗೆ ಮಾಲೆ ಹಾಕಲು ಬಂದ ಸಂದರ್ಭದಲ್ಲಿ ಕೈ ಸನ್ನೆಯ ಮೂಲಕ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದ ಪ್ರಸನ್ನ ಇದೀಗ ಮಾತನಾಡಲಾರಂಭಿಸಿರುವುದು ಗುರು ಸ್ವಾಮಿಗಳಿಗೆ ಸಂತಸ ತಂದಿದೆ. ಈ ರೀತಿಯ ಘಟನೆಗಳನ್ನು ಹಿರಿಯ ಅಯ್ಯಪ್ಪ ಮಾಲಾಧಾರಿಗಳು ಉದಾಹರಣೆಯ ಸಹಿತ ವಿವರಿಸಿದ್ದಾರೆ. ಈ ಸಾಲಿಗೆ ಪ್ರಸನ್ನ ಕೂಡ ಸೇರಿದ್ದು, ಅಯ್ಯಪ್ಪನ ಮಹಿಮೆಯಿಂದ ಎಲ್ಲವೂ ಸಾಧ್ಯ ಎನ್ನುವುದು ಮತ್ತೊಮ್ಮೆ ಜಗಜ್ಜಾಹೀರಾಗಿದೆ.
ಪುತ್ತೂರಿನ ಮಹಾಲಿಂಗೇಶ್ವರ ಐಟಿಐ ನಲ್ಲಿ ಎರಡನೇ ವರ್ಷದ ಸಿವಿಲ್ ಡಿಪ್ಲೊಮಾ ಮಾಡುತ್ತಿರುವ ಪ್ರಸನ್ನ, ವರ್ಷದ ಹಿಂದೆ ತನಕ ಒಂದು ಶಬ್ದವನ್ನೂ ಮಾತನಾಡಲಾರದ ಸ್ಥಿತಿಯಲ್ಲಿದ್ದ. ಇದೀಗ ಈತನ ಸ್ವಭಾವದಲ್ಲಾದ ಬದಲಾವಣೆ ಆತನ ಮೇಲೆ ಅಯ್ಯಪ್ಪ ಸ್ವಾಮಿ ದಯೆ ತೋರಿದ್ದಾನೆ ಅನ್ನೋದು ಹಿರಿಯ ಅಯ್ಯಪ್ಪ ಮಾಲಾಧಾರಿಗಳ ಅಭಿಪ್ರಾಯವಾಗಿದೆ.