ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು

ದರ್ಶನ್​ಗೆ ಬೆನ್ನು ನೋವು ತೀವ್ರ, ನಡೆಯಲೂ ಸಾಧ್ಯವಾಗದೆ ಒದ್ದಾಟ

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್​ಗೆ ಜೈಲು ನರಕವಾಗಿ ಪರಿಣಮಿಸಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಆರಂಭದ ದಿನಗಳನ್ನು ಆರಾಮವಾಗಿ ಕಳೆದಿದ್ದ ದರ್ಶನ್​ಗೆ ಈಗ ಜೈಲು ವಾಸದ ನರಕಯಾತನೆ ನಿಜಕ್ಕೂ ಅರಿವಿಗೆ ಬರುತ್ತಿರುವಂತಿದೆ. ಬಳ್ಳಾರಿ ಜೈಲಿನಲ್ಲಿ ನಟ ದರ್ಶನ್ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಮೂಲಗಳ ಪ್ರಕಾರ, ದರ್ಶನ್​ಗೆ ಕೂರುವುದು-ಏಳುವುದು ಮಹಾ ಸಮಸ್ಯೆಯಾಗಿ ಪರಿಣಮಿಸಿದೆ. ನಡೆಯಲು ಸಹ ಬಹಳ ಕಷ್ಟಪಡುವ ಸ್ಥಿತಿ ತಲುಪಿದ್ದಾರೆ. ಚಿಕಿತ್ಸೆ ಕೊಡಿಸಿರೆಂದು ಅಧಿಕಾರಿಗಳ ಬಳಿ ಗೋಗರೆಯುತ್ತಿದ್ದಾರೆ.

ನಿನ್ನೆ ವಕೀಲ ರಾಮ್​ ಸಿಂಗ್, ದರ್ಶನ್ ಭೇಟಿಗಾಗಿ ಬಳ್ಳಾರಿ ಜೈಲಿಗೆ ಆಗಮಿಸಿದ್ದರು. ಸಂದರ್ಶಕರ ಕೊಠಡಿಗೆ ಬರುವಾಗ ಬೆನ್ನನ್ನು ಪದೇ ಪದೇ ಮುಟ್ಟಿಕೊಳ್ಳುತ್ತಾ ನೋವಿನಲ್ಲಿಯೇ ಸಂದರ್ಶಕರ ಕೊಠಡಿಗೆ ದರ್ಶನ್ ಬಂದರು. ಹೆಚ್ಚು ಸಮಯ ನಿಲ್ಲಲು ಸಹ ಆಗದೆ ಗೋಡೆಯ ಆಸರೆ ಪಡೆದು ಹೈಸೆಕ್ಯುರಿಟಿ ಸೆಲ್ ಮುಂದೆ ನಿಂತಿದ್ದರು ದರ್ಶನ್. ದರ್ಶನ್​ಗೆ ಜೈಲಿನಲ್ಲಿ ಫಿಜಿಯೋಥೆರಪಿ ಚಿಕಿತ್ಸೆ ನೀಡಲಾಗುತ್ತಿದೆ. ಹಾಗಿದ್ದರೂ ಸಹ ಬೆನ್ನು ನೋವು ಕಡಿಮೆ ಆಗಿಲ್ಲ. ದರ್ಶನ್​ರ ಬೆನ್ನಿನ ಎಲ್​1 ಹಾಗೂ ಎಲ್​5 ಭಾಗದಲ್ಲಿ ತೀವ್ರವಾಗಿ ನೋವಿದ್ದು, ಶಸ್ತ್ರಚಿಕಿತ್ಸೆಯ ಅಗತ್ಯ ಇದೆಯೆಂದು ವೈದ್ಯರು ಸಲಹೆ ನೀಡಿದ್ದಾರೆ.

ಬೆನ್ನು ನೋವಿಗೆ ಶೀಘ್ರ ಚಿಕಿತ್ಸೆಯ ಅಗತ್ಯ ಇದ್ದು, ದರ್ಶನ್, ತಮ್ಮನ್ನು ಬೆಂಗಳೂರಿಗೆ ಕಳಿಸುವಂತೆ, ಅಲ್ಲಿ ತಮ್ಮ ವೈದ್ಯರ ಬಳಿ ತಾನು ಚಿಕಿತ್ಸೆ ಪಡೆದುಕೊಳ್ಳುವುದಾಗಿ ಅಧಿಕಾರಿಗಳ ಬಳಿ ಮನವಿ ಮಾಡಿದ್ದಾರೆ. ತಮ್ಮನ್ನು ಬೆಂಗಳೂರಿಗೆ ಕಳಿಸುವಂತೆ ಅಧಿಕಾರಿಗಳ ಬಳಿ ದರ್ಶನ್ ಗೋಗರೆದಿದ್ದಾರೆ ಎನ್ನಲಾಗುತ್ತಿದೆ. ದರ್ಶನ್ ಬೆನ್ನು ನೋವು ಹೆಚ್ಚಾಗಿರುವ ಕಾರಣ ಸ್ಥಳೀಯ ಆಸ್ಪತ್ರೆಯಿಂದ ಮೆಡಿಕಲ್ ಬೆಡ್ ಅನ್ನು, ಚೇರ್ ಅನ್ನು ಹಾಗೂ ದಿಂಬನ್ನು ದರ್ಶನ್​ಗೆ ನೀಡಲಾಗಿದೆ. ಹಾಗಿದ್ದರೂ ಸಹ ದರ್ಶನ್​ ಬೆನ್ನು ನೋವು ಇನ್ನೂ ಕಡಿಮೆ ಆಗಿಲ್ಲ.

ದರ್ಶನ್ ಜಾಮೀನಿನಾಗಿ ಅರ್ಜಿ ಸಲ್ಲಿಸಲಾಗಿತ್ತು, 57ನೇ ಸಿಸಿಎಚ್ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಅರ್ಜಿ ವಜಾ ಆಗಿದೆ. ಇದೀಗ ದರ್ಶನ್ ಪರ ವಕೀಲರು ಹೈಕೋರ್ಟ್​ನಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಅಲ್ಲಿಯೂ ಸಹ ಜಾಮೀನು ಸಿಗುವುದು ಸರಳವಾಗಿಲ್ಲ. ಬೆನ್ನು ನೋವಿನ ಕಾರಣ ನೀಡಿ ದರ್ಶನ್ ಜಾಮೀನು ಪಡೆಯುವ ನಿರೀಕ್ಷೆ ಇದೆ. ಅಲ್ಲದೆ ದರ್ಶನ್, ಬಳ್ಳಾರಿಯಲ್ಲಿ ಬೆನ್ನು ನೋವಿಗೆ ಚಿಕಿತ್ಸೆ ಪಡೆಯಲು ನಿರಾಕರಿಸಿದ್ದು, ನನ್ನನ್ನು ಬೆಂಗಳೂರಿಗೆ ಕಳಿಸಿ, ನಾನು ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತೇನೆ ಎಂದಿದ್ದಾರೆ.

No Comments

Leave A Comment