``````````````ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆ ,ಅಭಿಮಾನಿಗಳಿಗೆ "ಶ್ರೀಅನ೦ತವೃತದ"ಶುಭಾಶಯಗಳು......

ಉಡುಪಿ: ಚಲಿಸುತ್ತಿದ್ದ ರೈಲಿನಲ್ಲಿ ಯುವತಿಗೆ ಲೈಂಗಿಕ ಕಿರುಕುಳ, ಕಾಮುಕ ಬಂಧನ

ಉಡುಪಿ: ಬೆಂಗಳೂರಿನಿಂದ ಕಾರವಾರಕ್ಕೆ ಚಲಿಸುತ್ತಿದ್ದ ರೈಲಿನಲ್ಲಿ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲ ಭಟ್ಕಳದ ವಿದ್ಯಾರ್ಥಿಯೊಬ್ಬನನ್ನು ಮಣಿಪಾಲ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಮೊಹಮ್ಮದ್ ಶುರೈಮ್ (22) ಬಂಧಿತ ವ್ಯಕ್ತಿ. ಕಳೆದ ಭಾನುವಾರ ಬೆಳಿಗ್ಗೆ ರೈಲಿನಲ್ಲಿ ಬರುತ್ತಿದ್ದಾಗ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಮೂಲತಃ ಉಡುಪಿ ತಾಲೂಕಿನ ಮಣಿಪಾಲದ ಯುವತಿ ಬೆಂಗಳೂರಿನಲ್ಲಿ ಐಟಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದಾರೆ. ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಅವರು ಶನಿವಾರ ರಾತ್ರಿ ಬೆಂಗಳೂರಿನಿಂದ ಉಡುಪಿಗೆ ಹೊರಟಿದ್ದರು.

ಭಾನುವಾರ ಮುಂಜಾನೆ ರೈಲು ಸಂಚರಿಸುತ್ತಿದ್ದಾಗಲೇ ಅಸಭ್ಯ ವರ್ತನೆ ತೋರುತ್ತಿದ್ದ ಆರೋಪಿ, ಯುವತಿಯ ಖಾಸಗಿ ಅಂಗಗಳನ್ನು ಮುಟ್ಟಿ ಕಾಮಚೇಷ್ಠೆ ತೀರಿಸಿಕೊಳ್ಳುತ್ತಿದ್ದ ಎನ್ನಲಾಗಿದೆ. ಇನ್ನೇನು ಉಡುಪಿಗೆ ಅರ್ಧ ಗಂಟೆ ಇರುವಾಗ ಮಂಗಳೂರು ಹೊರವಲಯದ ಮುಲ್ಕಿ ಬಳಿ ಯುವತಿಯ ಮೇಲೆ ಎರಗಿ ಮಾನಭಂಗಕ್ಕೆ ಯತ್ನಿಸಿದ್ದಾನೆ.

ಕೂಡಲೇ ಇದಕ್ಕೆ ಯುವತಿ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಗಾಬರಿಗೊಂಡ ಶುರೈಮ್ ಕ್ಷಮೆಯಾಚಿಸಿದ್ದಾನೆ. ಆದರೆ ಯುವತಿ ಆತನ ಫೋಟೊ ತೆಗೆದುಕೊಂಡಿದ್ದಾಳೆ. ಕೂಡಲೇ ಯುವತಿ ಉಡುಪಿ ರೈಲ್ವೆ ಪೊಲೀಸರಿಗೆ ಘಟನೆ ಬಗ್ಗೆ ಮಾಹಿತಿ ನೀಡಿದ್ದಾಳೆ. ರೈಲ್ವೆ ಮದದ್ ಆ್ಯಪ್ ಮೂಲಕವೂ ದೂರು ನೀಡಿದ್ದಾಳೆ.

ಪ್ರಕರಣದ ತನಿಖೆಗಾಗಿ ಮಣಿಪಾಲ ಪೊಲೀಸ್ ಇನ್ಸ್‌ಪೆಕ್ಟರ್ ದೇವರಾಜ್ ಟಿ ವಿ ಮತ್ತು ಎಸ್‌ಐ ರಾಘವೇಂದ್ರ ನೇತೃತ್ವದಲ್ಲಿ ಎಸ್‌ಪಿ ಡಾ.ಅರುಣ್ ಕೆ ವಿಶೇಷ ತಂಡ ರಚಿಸಿದ್ದರು. ಪೊಲೀಸರ ತಂಡ ಕೇವಲ 20 ಗಂಟೆಯ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಬಂಧನಕ್ಕೊಳಪಡಿಸಿದ್ದಾರೆ.

ಯುವತಿ ತೆಗೆದ ಆರೋಪಿಯ ಫೋಟೊ ಮಾತ್ರ ಪೊಲೀಸರಿಗಿದ್ದ ಕುರುಹಾಗಿತ್ತು. ಅದರಂತೆ ಪೊಲೀಸರು ಆ ದಿನ ಬೋಗಿಯಲ್ಲಿ ಪ್ರಯಾಣಿಸಿದ್ದ ಪ್ರಯಾಣಿಕರ ಲಿಸ್ಟ್‌ ಪಡೆದುಕೊಂಡಿದ್ದಾರೆ. ಒಟ್ಟು 1,200 ಮಂದಿ ಲಿಸ್ಟ್‌ನಲ್ಲಿದ್ದರು. ಆದರೆ, ಯುವತಿಯ ಫೋಟೊದಲ್ಲಿದ್ದ ವ್ಯಕ್ತಿ ಟೋಪಿ ಹಾಕಿಕೊಂಡಿದ್ದರಿಂದ ಆತ ಮುಸ್ಲಿಂ ವ್ಯಕ್ತಿ ಎಂದುಕೊಂಡು, ಪ್ರಯಾಣಿಕರ ಲಿಸ್ಟ್‌ನಲ್ಲಿದ್ದ ಮುಸ್ಲಿಂ ಹೆಸರುಗಳ ಪಟ್ಟಿ ತಗೆದರು. ಬಳಿಕ ಸಿಎನ್‌ಆರ್‌ ನಂಬರ್‌ಗಳನ್ನು ಪಡೆದಾಗ ಅದರಲ್ಲಿದ್ದ ಎಲ್ಲರ ಮೊಬೈಲ್‌ ಸಂಖ್ಯೆ ಪೊಲೀಸರಿಗೆ ಸಿಕ್ಕಿತು. ಈ ನಡುವೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಯ ಚಲನವಲನ ಕಂಡುಹಿಡಿದರು. ಆರೋಪಿ ಭಟ್ಕಳ ನಿವಾಸಿ ಎಂಬುದು ಪೊಲೀಸರಿಗೆ ದೃಢವಾಯಿತು. ಅದರಂತೆ ಭಟ್ಕಳಕ್ಕೆ ತೆರಳಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

No Comments

Leave A Comment