``````````````ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆ ,ಅಭಿಮಾನಿಗಳಿಗೆ "ಶ್ರೀಅನ೦ತವೃತದ"ಶುಭಾಶಯಗಳು......

ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ: 8 ಮಂದಿ ಸಾವು, 45 ಜನ ನಾಪತ್ತೆ

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟದಿಂದ ಉಂಟಾಗಿರುವ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ನಾಪತ್ತೆಯಾಗಿರುವ 45 ಮಂದಿಯ ರಕ್ಷಣೆಗೆ ಕಾರ್ಯಾಚರಣೆ ಶನಿವಾರವೂ ಮುಂದುವರಿದಿದೆ.

ರಾಜ್ಯದ ಕುಲ್ಲು, ಮಂಡಿ ಹಾಗೂ ಶಿಮ್ಲಾ ಜಿಲ್ಲೆಗಳಲ್ಲಿ ಸಂಭವಿಸಿದ ಮೇಘಸ್ಫೋಟದಿಂದಾಗಿ ಹಲವು ಮನೆಗಳು, ಸೇತುವೆಗಳು ಕೊಚ್ಚಿ ಹೋಗಿವೆ. ಈ ಜಿಲ್ಲೆಗಳಲ್ಲಿನ ರಸ್ತೆ ಸಂಪರ್ಕವು ಕಡಿತಗೊಂಡಿದ್ದು, ಅಪಾರ ಪ್ರಮಾಣದ ಆಸ್ತಿ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ವೇಳೆ ಕುಲ್ಲು ಜಿಲ್ಲೆಯ ಮಣಿಕರಣ್‌ನಲ್ಲಿರುವ ಮಲಾನಾ ವಿದ್ಯುತ್‌ ಯೋಜನೆ ಸ್ಥಳದಲ್ಲಿ ಸಿಲುಕಿದ್ದ 33 ಜನರನ್ನು ರಕ್ಷಣೆ ಮಾಡಲಾಗಿದೆ. ಮಳೆಯಿಂದಾಗಿ ಸ್ಥಳದಲ್ಲಿ ಗೋಡೆ ಮತ್ತು ಸುರಂಗ ಮಾರ್ಗಕ್ಕೆ ಹಾನಿಯಾಗಿದ್ದು, ನೀರು ನುಗ್ಗಿದೆ. ಆದರೂ ಸೇನೆ, ಎನ್‌ಡಿಆರ್‌ಎಫ್‌ ಸಿಬ್ಬಂದಿ ಜನರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕುಲ್ಲು ಜಿಲ್ಲೆಯ ನಿರ್ಮಂಡ್, ಸೈಂಜ್‌ ಮತ್ತು ಮಲಾನಾ, ಮಂಡಿಯ ಪಧರ್‌ ಹಾಗೂ ಶಿಮ್ಲಾ ಜಿಲ್ಲೆಯ ರಾಮ್‌ಪುರಗಳಲ್ಲಿ ಸಂಭವಿಸಿದ ಮೇಘಸ್ಫೋಟವು ಹಠಾತ್‌ ಪ್ರವಾಹವನ್ನು ಸೃಷ್ಟಿಸಿದೆ. ಸೇನೆ ಮತ್ತು ಎನ್‌ಡಿಆರ್‌ಎಫ್‌ ಸೇರಿದಂತೆ ಅನೇಕ ಪಡೆಗಳು ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತವಾಗಿದ್ದು, ಕಾಣೆಯಾದವರ ಪತ್ತೆಗಾಗಿ ಡ್ರೋನ್‌ಗಳನ್ನು ಬಳಸಲಾಗುತ್ತಿದೆ.

ಜೂನ್ 27ರಂದು ರಾಜ್ಯದಲ್ಲಿ ಮುಂಗಾರು ಪ್ರಾರಂಭವಾದಾಗಿನಿಂದ ಈವರೆಗೆ ಮಳೆ ಸಂಬಂಧಿತ ಅವಘಡಗಳಲ್ಲಿ 73 ಮಂದಿ ಸಾವಿಗೀಡಾಗಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಸರ್ಕಾರವು `649 ಕೋಟಿ ನಷ್ಟವನ್ನು ಅನುಭವಿಸಿದೆ.

ಸಿಎಂ ಸುಖವಿಂದರ್ ಸಿಂಗ್ ಸುಖು ಅವರು ಸಮೇಜ್‌ಗೆ ಭೇಟಿ ನೀಡಿ, ನಡೆಯುತ್ತಿರುವ ಪರಿಹಾರ ಮತ್ತು ಪುನರ್ವಸತಿ ಪ್ರಯತ್ನಗಳನ್ನು ಪರಿಶೀಲಿಸಿದರು. “ಪ್ರತಿ ಸಂತ್ರಸ್ತ ಕುಟುಂಬವು ಇಂದಿನಿಂದಲೇ ಬಾಡಿಗೆ ವಸತಿಗಾಗಿ ಮೂರು ತಿಂಗಳವರೆಗೆ 50,000 ತಕ್ಷಣದ ಸಹಾಯ ಮತ್ತು ತಿಂಗಳಿಗೆ 5,000 ರ ಹಣ ನೀಡಲಾಗುತ್ತದೆ ಎಂದು ಅವರು ಹೇಳಿದರು. ಸರ್ಕಾರವು ಉಚಿತ ತ್ತಪಡಿತರ, ಅಡುಗೆ ಅನಿಲ ಮತ್ತು ಒಲೆಗಳನ್ನು ನೀಡುತ್ತದೆ ಎಂದು ತಿಳಿಸಿದ್ದಾರೆ.

No Comments

Leave A Comment