``````````````ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆ ,ಅಭಿಮಾನಿಗಳಿಗೆ "ಶ್ರೀಅನ೦ತವೃತದ"ಶುಭಾಶಯಗಳು......

ದರ್ಶನ್​ ಮನೆ ಸಿಸಿಟಿವಿಯಲ್ಲಿ ಶಾಕಿಂಗ್​ ವಿಚಾರ ಬಯಲು; ಕೊಲೆ ಕೇಸ್​ನಲ್ಲಿ ನಟನಿಗೆ ಹೆಚ್ಚಿತು ಸಂಕಷ್ಟ

ಚಿತ್ರದುರ್ಗದ ರೇಣುಕಾ ಸ್ವಾಮಿ ಎಂಬಾತನನ್ನು ಬೆಂಗಳೂರಿಗೆ ಕರೆಸಿಕೊಂಡು ಕೊಲೆ ಮಾಡಿದ ಆರೋಪದಲ್ಲಿ ನಟ ದರ್ಶನ್​ ಜೈಲು ಸೇರಿದ್ದು, ತನಿಖೆ ತೀವ್ರಗೊಂಡಿದೆ. ಪೊಲೀಸರು ಹಲವು ಆಯಾಮದಲ್ಲಿ ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಪ್ರತಿ ಹಂತದಲ್ಲೂ ಹೊಸ ಹೊಸ ಸಾಕ್ಷಿಗಳು ಪೊಲೀಸರಿಗೆ ಲಭ್ಯವಾಗುತ್ತಿವೆ. ದರ್ಶನ್​ಗೆ ಈ ಕೇಸ್​ನಲ್ಲಿ ಸಂಕಷ್ಟ ಹೆಚ್ಚಾಗುತ್ತಲೇ ಇದೆ. ದರ್ಶನ್​ ಮನೆಯ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ರಿಟ್ರೀವ್​ ಮಾಡಿದ್ದಾರೆ. ಇದರಲ್ಲಿ ಶಾಕಿಂಗ್​ ವಿಚಾರಗಳು ಬಯಲಾಗಿವೆ. ರೇಣುಕಾ ಸ್ವಾಮಿ ಮರ್ಡರ್​ ಕೇಸ್​ನಲ್ಲಿ ಈ ಸಾಕ್ಷಿ ಪ್ರಮುಖವಾಗಲಿದೆ.

ರೇಣುಕಾ ಸ್ವಾಮಿಯ ಕೊಲೆ ಆರೋಪದಲ್ಲಿ ದರ್ಶನ್​, ಪವಿತ್ರಾ ಗೌಡ ಸೇರಿ ಒಟ್ಟು 17 ಮಂದಿ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ಕೊಲೆ ನಡೆದ ಬಳಿಕ ಸಾಕ್ಷಿನಾಶಕ್ಕೆ ಇವರೆಲ್ಲ ಪ್ರಯತ್ನಿಸಿದ್ದರು. ದರ್ಶನ್​ ಮನೆಯ ಸಿಸಿಟಿವಿ ವಿಡಿಯೋಗಳನ್ನು ಡಿಲೀಟ್​ ಮಾಡಲಾಗಿತ್ತು. ಆದರೆ ಸಿಐಡಿ ಸೈಬರ್ ತಜ್ಞರಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ಈಗ ರಿಟ್ರೀವ್ ಮಾಡಲಾಗಿದೆ. ಇದರಲ್ಲಿ ಪ್ರಮುಖ ಆರೋಪಿಗಳ ಚಲನವಲನ ದಾಖಲಾಗಿದೆ.

ಪೊಲೀಸರು ರಿಟ್ರೀವ್​ ಮಾಡಿರುವ ಸಿಸಿಟಿವಿ ದೃಶ್ಯಾವಳಿಯಲ್ಲಿ ಕೊಲೆ ನಡೆದ ದಿನ ದರ್ಶನ್ ಸೇರಿ ಆರೋಪಿಗಳು ಹೊರಗೆ ಬಂದು ಹೋಗಿರುವುದು ಪತ್ತೆಯಾಗಿದೆ. ಜೂನ್ 8 ರಿಂದ ಜೂನ್ 10ರವರೆಗೆ ಕೊಲೆಯ ಆರೋಪಿಗಳ ಚಲನವಲನ ಈ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆರೋಪಿಗಳು ಮಾತ್ರವಲ್ಲದೆ ಕೃತ್ಯಕ್ಕೆ ಬಳಸಿದ್ದ ವಾಹನಗಳ ಓಡಾಟ ಕೂಡ ಸೆರೆಯಾಗಿದೆ. ಹಾಗಾಗಿ ಪೊಲೀಸರು ಸಿಸಿಟಿವಿ ವಿಡಿಯೋ ರಿಟ್ರೀವ್ ಮಾಡಿ ಪಂಚನಾಮೆ ಮಾಡಿದ್ದಾರೆ.

ಕಾಮಾಕ್ಷಿಪಾಳ್ಯ ಪೊಲೀಸರು ದರ್ಶನ್ ಸ್ನೇಹಿತನ ವಿಚಾರಣೆ ನಡೆಸಿದ್ದಾರೆ. ಕೊಲೆ ಸಂಬಂಧವಾಗಿ ಹೇಳಿಕೆ ಪಡೆದುಕೊಂಡಿದ್ದಾರೆ. ನ್ಯಾಯಾಧೀಶರ ಮುಂದೆ 164ರ ಅಡಿಯಲ್ಲಿ ಹೇಳಿಕೆ ದಾಖಲು ಮಾಡಲಾಗಿದೆ. ಈಗಾಗಲೇ ಪೊಲೀಸರು ಹಲವು ಬಗೆಯ ಸಾಕ್ಷಿಗಳನ್ನು ಕಲೆ ಹಾಕಿದ್ದಾರೆ. ಇದರಿಂದಾಗಿ ಪವಿತ್ರಾ ಗೌಡ, ದರ್ಶನ್​ ಸೇರಿದಂತೆ ಎಲ್ಲ ಆರೋಪಿಗಳಿಗೆ ಢವಢವ ಶುರುವಾಗಿದೆ. ರೇಣುಕಾ ಸ್ವಾಮಿ ಬಳಸಿದ್ದ ಮೊಬೈಲ್​ನಲ್ಲಿದ್ದ ಮಾಹಿತಿಗಳು ಕೂಡ ಪೊಲೀಸರಿಗೆ ಲಭ್ಯವಾಗಿದ್ದು, ತನಿಖೆಯಲ್ಲಿ ಇದು ಪ್ರಮುಖ ಸಾಕ್ಷಿಯಾಗಿದೆ.

No Comments

Leave A Comment