``````````````ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆ ,ಅಭಿಮಾನಿಗಳಿಗೆ "ಶ್ರೀಅನ೦ತವೃತದ"ಶುಭಾಶಯಗಳು......

‘ಬಜೆಟ್​ನಲ್ಲಿ ಏನೂ‌ ಕೊಟ್ಟಿಲ್ಲ ಕಾಂಗ್ರೆಸ್ ನಾಯಕರ ಆರೋಪ ಶುದ್ಧ ಸುಳ್ಳು’- ನಿರ್ಮಲಾ ಸೀತಾರಾಮ್ ತಿರುಗೇಟು

ಕೇಂದ್ರ ಸರ್ಕಾರದ ಬಜೆಟ್​ನಲ್ಲಿ ಕರ್ನಾಟಕಕ್ಕೆ ಅನ್ಯಾಯ ಆಗಿದೆ, ಬಜೆಟ್​ನಲ್ಲಿ ಏನೂ‌ ಕೊಟ್ಟಿಲ್ಲ ಅಂತ ಕಾಂಗ್ರೆಸ್ ನಾಯಕರು​ ಆರೋಪ ಮಾಡುತ್ತಿದ್ದಾರೆ. ಇದು ಶುದ್ಧ ಸುಳ್ಳು, ರಾಜ್ಯ ಕಾಂಗ್ರೆಸ್ ಸರ್ಕಾರ​ ಸುಳ್ಳು ಹೇಳುತ್ತಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮ್ ತಿರುಗೇಟು ನೀಡಿದರು.

ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯುಪಿಎ ಸರ್ಕಾರ ಇದ್ದಾಗ ರಾಜ್ಯಕ್ಕೆ 81,791 ಕೋಟಿ ರೂ. ನೀಡಿತ್ತು. ಆದರೆ 2014ರಿಂದ ಇಲ್ಲಿಯವರೆಗೆ ಎನ್​ಡಿಎ ಸರ್ಕಾರ 2,95,818 ಕೋಟಿ ರೂಪಾಯಿ ನೀಡಿದೆ. ಕಳೆದ 10 ವರ್ಷದಲ್ಲಿ 2,36,955 ಕೋಟಿ ತೆರಿಗೆ ಹಂಚಿಕೆಯಾಗಿದೆ ಎಂದರು.

ಬಜೆಟ್​ನಲ್ಲಿ ಸ್ಟಾರ್ಟ್​ಅಪ್​ಗಳಿಗೆ ನಾವು ಹೆಚ್ಚಿನ‌ ಒತ್ತು ನೀಡಿದ್ದೇವೆ. ಕೇಂದ್ರ ಬಜೆಟ್​ನಲ್ಲಿ ಯುವಕರಿಗೆ ಮೂರು ಯೋಜನೆ ತಂದಿದ್ದೇವೆ. ಯುವಕರಿಗೆ ತರಬೇತಿ, ಇಂಟರ್ನ್​ಶಿಪ್ ಯೋಜನೆ, ಕೌಶಲ್ಯಾಭಿವೃದ್ಧಿ ನೀಡಲಾಗುವುದು.

ಎಂಎಸ್ಎಮ್ಇಗಳಿಗೆ ಸ್ವಲ್ಪ ಸಮಸ್ಯೆ ಆಗುತ್ತಿದೆ, ಆ ಸಮಸ್ಯೆ ಬಗೆಹರಿಸಲು ಕೇಂದ್ರ ಬಜೆಟ್​ನಲ್ಲಿ ಉತ್ತರ ನೀಡಿದ್ದೇವೆ. ಬಾಹ್ಯಾಕಾಶ ವಲಯಕ್ಕೆ ಬೆಂಗಳೂರಿನ ಕೊಡುಗೆ ಇದೆ. ಆವಾಸ್ ಯೋಜನೆಯಡಿ ಬಡ ವರ್ಗದ ಜನರಿಗೆ ಮನೆ ನೀಡಲಾಗುತ್ತಿದೆ.ಮಹಿಳೆಯರು, ಕೃಷಿ ವಲಯಕ್ಕೂ ಕೇಂದ್ರದಿಂದ ಯೋಜನೆ ತಂದಿದ್ದೇವೆ. ಈ ಎಲ್ಲ ಯೋಜನೆಗಳ ಪ್ರಯೋಜನ ಕರ್ನಾಟಕವೂ ಪಡೆದುಕೊಳ್ಳುತ್ತದೆ ಎಂದು ತಿಳಿಸಿದರು.

ಕಲಬುರಗಿಯಲ್ಲಿ ಪಿಎಂ ಮಿತ್ರಾ ಪಾರ್ಕ್‌ ನಿರ್ಮಾಣವಾಗಲಿದೆ. ರೈಲ್ವೇ ವಲಯಕ್ಕೂ ಕೋಟಿ ಕೋಟಿ ಹಣ ನೀಡಿದ್ದೇವೆ. 825 ಕೋಟಿ ರೂ. ಅನುದಾನ ಯುಪಿಎ ಸರ್ಕಾರ‌ ಇದ್ದಾಗ ನೀಡಿತ್ತು. ಆದರೆ ಈ ಬಜೆಟ್​ನಲ್ಲಿ 7,559 ಕೋಟಿ ಅನುದಾನ ಕೊಟ್ಟಿದ್ದೇವೆ. 47,016 ಕೋಟಿ ಮೊತ್ತದ 31 ಯೋಜನೆಯ ರೈಲ್ವೆ ಕಾಮಗಾರಿ ನಡೆಯುತ್ತಿದೆ. 640 ರೈಲ್ವೇ ಸೇತುವೆ, ವಂದೇ ಭಾರತ್ ರೈಲು ಸೇರಿ ಹಲವು ರೈಲ್ವೆ ಯೋಜನೆ ಜಾರಿಯಲ್ಲಿವೆ. ಐಐಟಿ ಧಾರವಾಡ, ತುಮಕೂರಲ್ಲಿ ಮೊದಲ‌ ಕೈಗಾರಿಕಾ ಕಾರಿಡಾರ್ ಪಾರ್ಕ್, 7 ಸ್ಮಾರ್ಟ್ ಸಿಟಿ ನಿರ್ಮಾಣವಾಗುತ್ತಿವೆ ಎಂದು ಮಾಹಿತಿ ನೀಡಿದರು.

ಕರ್ನಾಟಕ ಸರ್ಕಾರ ಎಲ್ಲದರಲ್ಲೂ ತೆರಿಗೆ ಹೆಚ್ಚಿಸಿದೆ. ದರ ಕೂಡ ಹೆಚ್ಚಳ ಆಗುತ್ತಿದೆ. ಸಹಜವಾಗಿ ಹಣದುಬ್ಬರ ಎದ್ದು ಕಾಣುತ್ತಿದೆ. ಕಂಪನಿಗಳು ಹೊರ ರಾಜ್ಯಕ್ಕೆ ಹೋಗುತ್ತಿವೆ. ಕಾನೂನು ಸುವ್ಯವಸ್ಥೆ ಕೆಟ್ಟು ಹೋಗಿದೆ. ಹೂಡಿಕೆ ಮಾಡಲು ಕಂಪನಿಗಳು ಮುಂದೆ ಬರುತ್ತಿಲ್ಲ. ಎಸ್​ಟಿ ಎಸ್​ಸಿ ಹಣ ಬೇರೆ ಯೋಜನೆಗೆ ಬಳಕೆಯಾಗಿದೆ. ವಾಲ್ಮೀಕಿ ಹಣ ಏನಾಗಿದೆ ಅಂತ ನಿಮಗೆ ಗೊತ್ತು. ರಾಜ್ಯದಲ್ಲಿ ಈ ರೀತಿಯ ಆಡಳಿತ ನಡೆಸಲಾಗುತ್ತಿದೆ ಎಂದು ವಾಗ್ದಾಳಿ ಮಾಡಿದರು.

No Comments

Leave A Comment