ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...
ಖಾದಿ, ಕೈಮಗ್ಗ ಮಾರಾಟ ಹೆಚ್ಚಳ, ಬೃಹತ್ ಉದ್ಯೋಗಾವಕಾಶ ಸೃಷ್ಟಿ: ‘ಮನ್ ಕಿ ಬಾತ್’ ನಲ್ಲಿ ಪ್ರಧಾನಿ ಮೋದಿ ಮಾತು
ನವದೆಹಲಿ: ದೇಶದಲ್ಲಿ ಮೊದಲ ಬಾರಿಗೆ ಖಾದಿ ಗ್ರಾಮೋದ್ಯೋಗ ವ್ಯವಹಾರವು 1.5 ಲಕ್ಷ ಕೋಟಿ ರೂಪಾಯಿಗಳನ್ನು ದಾಟಿದೆ. ಖಾದಿ ಮತ್ತು ಕೈಮಗ್ಗ ವಲಯಗಳಿಂದ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.
ತಮ್ಮ ಮನ್ ಕಿ ಬಾತ್ ಮಾಸಿಕ ರೇಡಿಯೋ ಕಾರ್ಯಕ್ರಮದಲ್ಲಿ ಅವರು, ಖಾದಿ ಉತ್ಪನ್ನಗಳನ್ನು ಹೆಚ್ಚು ಇಷ್ಟಪಡದವರು ಇಂದು ಬಹಳ ಹೆಮ್ಮೆಯಿಂದ ಧರಿಸುತ್ತಾರೆ ಎಂದು ಹೇಳಿದರು.
ಖಾದಿ ಗ್ರಾಮೋದ್ಯೋಗದ ವ್ಯವಹಾರವು ಮೊದಲ ಬಾರಿಗೆ 1.5 ಲಕ್ಷ ಕೋಟಿ ರೂಪಾಯಿಗಳನ್ನು ದಾಟಿದೆ. ಖಾದಿಯ ಮಾರಾಟವು ಶೇಕಡಾ 400ರಷ್ಟು ಹೆಚ್ಚಾಗಿದೆ. ಖಾದಿ ಮತ್ತು ಕೈಮಗ್ಗ ಮಾರಾಟ ಹೆಚ್ಚಳದಿಂದ ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದೆ ಎಂದು ಸಂತಸಪಟ್ಟರು.
ಹೆಚ್ಚಾಗಿ ಮಹಿಳೆಯರು ಈ ಉದ್ಯಮದೊಂದಿಗೆ ಸಂಬಂಧ ಹೊಂದಿದ್ದಾರೆ, ಆದ್ದರಿಂದ ಅವರು ಹೆಚ್ಚು ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಪ್ರಧಾನಿಗಳು ಹೇಳಿದರು.
ಖಾದಿ ಬಟ್ಟೆಗಳನ್ನು ಹೆಚ್ಚಾಗಿ ಧರಿಸಿ, ಆರೋಗ್ಯ ದೃಷ್ಟಿಯಿಂದಲೂ ಉತ್ತಮ ಎಂದರು.
ಕ್ರೀಡಾಪಟುಗಳನ್ನು ಉತ್ತೇಜಿಸಿ: ಪ್ಯಾರಿಸ್ ಒಲಿಂಪಿಕ್ಸ್ನ ಆರಂಭದ ಬಗ್ಗೆ ಪ್ರಸ್ತಾಪಿಸಿದ ಪ್ರಧಾನ ಮಂತ್ರಿಗಳು, ಒಲಿಂಪಿಕ್ಸ್ ಕ್ರೀಡಾಕೂಟಗಳು ನಮ್ಮ ಕ್ರೀಡಾಪಟುಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವ ಅವಕಾಶವನ್ನು ನೀಡುತ್ತವೆ ಎಂದರು, ಒಲಿಂಪಿಕ್ಸ್ ನಲ್ಲಿ ಭಾಗವಹಿಸುತ್ತಿರುವ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಿ ಎಂದು ದೇಶವಾಸಿಗಳಿಗೆ ಕರೆ ನೀಡಿದರು.
ಮನ್ ಕಿ ಬಾತ್ ನಲ್ಲಿ ಅವರು ಇತ್ತೀಚೆಗೆ ನಡೆದ ಗಣಿತ ಒಲಂಪಿಯಾಡ್ನಲ್ಲಿ ಉತ್ತಮ ಪ್ರದರ್ಶನ ನೀಡಿದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಕೆಲವು ದಿನಗಳ ಹಿಂದೆ, ಗಣಿತ ಪ್ರಪಂಚದಲ್ಲೂ ಒಲಿಂಪಿಕ್ಸ್ ನಡೆಯಿತು: ಅಂತಾರಾಷ್ಟ್ರೀಯ ಗಣಿತ ಒಲಂಪಿಯಾಡ್. ಈ ಒಲಂಪಿಯಾಡ್ನಲ್ಲಿ ನಮ್ಮ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡಿದ್ದಾರೆ. ನಮ್ಮ ತಂಡವು ನಾಲ್ಕು ಚಿನ್ನದ ಪದಕ ಮತ್ತು ಒಂದು ಬೆಳ್ಳಿ ಪದಕವನ್ನು ಗೆದ್ದಿದೆ ಎಂದರು.
ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಅಸ್ಸಾಂನಲ್ಲಿರುವ ‘ಮೊಯಿಡಮ್’ಗಳನ್ನು ಸೇರ್ಪಡೆ ಪ್ರತಿಯೊಬ್ಬ ಭಾರತೀಯನಿಗೂ ಅಪಾರ ಸಂತೋಷದ ವಿಷಯವಾಗಿದೆ ಎಂದರು.
ಅದಮ್ಯ ಧೈರ್ಯ ಮತ್ತು ಶೌರ್ಯದ ಪ್ರತೀಕವಾದ ಮಹಾನ್ ಅಹೋಮ್ ಯೋಧ ಲಚಿತ್ ಬೊರ್ಫುಕನ್ ಅವರ ಅತಿ ಎತ್ತರದ ಪ್ರತಿಮೆ ಅನಾವರಣ ಬಗ್ಗೆ ಕೂಡ ಮನ್ ಕಿ ಬಾತ್ ನಲ್ಲಿ ಪ್ರಧಾನ ಮಂತ್ರಿಗಳು ಮಾತನಾಡಿದರು.