Log In
BREAKING NEWS >
````````````ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ಹಾಗೂ ಓದುಗರಿಗೆ ಶ್ರೀ ಗೌರಿ-ಗಣೇಶನ ಹಬ್ಬದ ಶುಭಾಶಯಗಳು```````

ಉತ್ತರ ಕನ್ನಡ: ಭಾರೀ ಮಳೆಗೆ ಭೋರ್ಗರೆಯುತ್ತಿರುವ ಜಲಪಾತ; ಪ್ರವಾಸಿಗರಿಗೆ ನಿರ್ಬಂಧ

ಉತ್ತರ ಕನ್ನಡ: ಪಶ್ಚಿಮ ಘಟ್ಟಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಜಲಪಾತಗಳ ಜಿಲ್ಲೆಯಲ್ಲಿ ಫಾಲ್ಸ್​ಗಳು ಮೈತುಂಬಿ ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಅಧಿಕಾರಿಗಳು ಪ್ರವಾಸಿಗರ ವೀಕ್ಷಣೆಗೆ ನಿಷೇಧ ಹೇರಿದ್ದಾರೆ.

ಜಲಪಾತಗಳ ವೀಕ್ಷಣೆ ವೇಳೆ ಹತ್ತಿರದಲ್ಲಿ ನಿಂತು ಜನರು ಸೆಲ್ಫೀ ಹಾಗೂ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಂದಾಗುತ್ತಾರೆ. ಈ ವೇಳೆ ದುರಂತ ಸಂಭವಿಸಿ ಸಾವುಗಳು ಎದುರಾದ ಘಟನೆಗಳು ವರದಿಯಾಗಿವೆ. ಈ ಹಿನ್ನೆಲೆಯಲ್ಲಿ ಉತ್ತರ ಕನ್ನಡದ ಆಡಳಿತ ಮಂಡಳಿಯು ಪ್ರವಾಸಿಗರ ಮೇಲೆ ನಿರ್ಬಂಧ ಹೇರಿದೆ.

ಭಾರೀ ಮಳೆ ಮತ್ತು ನದಿಗಳು ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ, ಮಳೆ ವೇಳೆ ನದಿಯ ಪ್ರವಾಹವು ವೇಗವಾಗಿರುತ್ತದೆ. ಇದಕ್ಕೆ ಪೂರಕವೆಂಬಂತೆ ಸಾಥೋಡಿ ಜಲಪಾತ, ಮಾಗೋಡು ಜಲಪಾತ, ಸಿದ್ದಾಪುರದ ಶಾಲ್ಮಲಾ ನದಿಯಲ್ಲಿ ಹಲವಾರು ಅವಘಡಗಳು ಸಂಭವಿಸಿದ್ದು, ದಾಂಡೇಲಿಯಲ್ಲಿ ಇಡೀ ಕುಟುಂಬವೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆಯೂ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ.

ಜನರ ಸುರಕ್ಷತೆ ಖಚಿತಪಡಿಸಲು ಸರ್ಕಾರ ಪ್ರವಾಸಿ ಮಿತ್ರ ಸಿಬ್ಬಂದಿಗಳ ನೇಮಿಸುವಂತೆ ಆದೇಶಿಸಿದೆ. ಈ ಪ್ರವಾಸಿ ಮಿತ್ರರು ಸಾಮಾನ್ಯ ದಿನಗಳಲ್ಲಿ ಪರಿಸ್ಥಿತಿ ನಿಭಾಯಿಸಬಹುದು. ಆದರೆ, ಮಳೆಗಾಲದಲ್ಲಿ ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಸಹಾಯ ಬೇಕಾಗುತ್ತದೆ ಎಂದು ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಜಯಂತ್ ಹೇಳಿದ್ದಾರೆ.

ಕುಂಬ್ವಾಡೆ ಜಲಪಾತ

ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಸ್ತುತ 10 ಪ್ರವಾಸಿ ಮಿತ್ರರಿದ್ದು, 10 ಮಂದಿ ನಿಯೋಜನೆಗೆ ಮನವಿ ಮಾಡಲಾಗಿದೆ. ಮಳೆಗಾಲದಲ್ಲಿ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲು ಅರಣ್ಯ ಇಲಾಖೆಗೆ ಮನವಿ ಮಾಡಿದ್ದೇವೆ. ಮಳೆಗಾಲ ಸಂದರ್ಭದಲ್ಲಿ ಪರಿಸ್ಥಿತಿ ನಿಭಾಯಿಸಲು ಹೆಚ್ಚಿನ ಸಂಖ್ಯೆಯ ಸಿಬ್ಬಂದಿ ಅಗತ್ಯವಿರುತ್ತದೆ. ಹೀಗಾಗಿ ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಹಾಯ ಕೋರಿದ್ದೇವೆಂದು ತಿಳಿಸಿದ್ದಾರೆ.

ಕೆನರಾ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ ಮಾತನಾಡಿ, ಕೆಲವು ಜಲಪಾತಗಳು ಜನರ ಜೀವಕ್ಕೆ ಅಪಾಯವನ್ನುಂಟುಮಾಡುತ್ತವೆ. ವಿಭೂತಿ ಜಲಪಾತ, ಮಾಗೋಡು ಜಲಪಾತ ಮತ್ತು ಸಾಥೋಡಿ ಜಲಪಾತಗಳು ತುಂಬಾ ಅಪಾಯಕಾರಿ ಜಲಪಾತಗಳಾಗಿದ್ದು, ಜನರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಇಲಾಖೆಯು ಪ್ರವಾಸಿಗರನ್ನು ನಿಷೇಧಿಸಿದೆ ಎಂದು ಹೇಳಿದ್ದಾರೆ.

ಹೊನ್ನಾವರದ ಬಂಗಾರ ಕುಸುಮ, ಕಾರವಾರದ ಶಿರವಾಡದ ಜಂಬೆ ಜಲಪಾತ, ಕಾರವಾರದ ಅರ್ಗಾ ಬಳಿಯ ನಾಗರಮುಡಿ ಜಲಪಾತ, ಕಾರವಾರದ ತೋಡೂರಿನ ಗೋಲಾರಿ ಮುಂತಾದ ಜಲಪಾತಗಳಲ್ಲಿ ಅಪಾಯ ಹೆಚ್ಚಾಗಿದೆ. ಜಲಪಾತಗಳಿಗೆ ಮಾತ್ರವಲ್ಲ. ಜಿಲ್ಲೆಯಾದ್ಯಂತ ಸಮುದ್ರಗಳು ಮತ್ತು ನದಿಗಳಿಂದಲೂ ಜನರನ್ನು ದೂರವಿಡಲಾಗಿದೆ. ಸುರಕ್ಷಿತ ಪ್ರವಾಸೋದ್ಯಮವನ್ನು ಖಾತರಿಪಡಿಸುವ ಗುರಿಯನ್ನು ಜಿಲ್ಲಾಡಳಿತ ಮಂಡಳಿ ಹೊಂದಿದ್ದು, ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

No Comments

Leave A Comment