ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...

ಮಂಗಳೂರು: ಮರಳು ದಂಧೆಯಿಂದ ಕಣ್ಮರೆಯಾಗುತ್ತಿದೆ ‘ಪಾವೂರು ಉಳಿಯ ದ್ವೀಪ

ಮಂಗಳೂರು: ಮಂಗಳೂರು ಹೊರವಲಯದಲ್ಲಿರುವ ಪಾವೂರು ಉಳಿಯ ದ್ವೀಪವು ಅಕ್ರಮ ಮರಳು ದಂಧೆಯಿಂದಾಗಿ ನಿಧಾನವಾಗಿ ಕಣ್ಮರೆಯಾಗುತ್ತಿದ್ದು, ಪರಿಣಾಮ ಈ ಪ್ರದೇಶದಲ್ಲಿ ಮೂರು ತಲೆಮಾರುಗಳಿಂದ ವಾಸವಿರುವ 50ಕ್ಕೂ ಅಧಿಕ ಕುಟುಂಬಗಳು ಭಯ, ಆತಂಕದಲ್ಲೇ ಜೀವನ ಸಾಗಿಸುವಂತಾಗಿದೆ.

ದ್ವೀಪ ಉಳಿಸಿ, ಜನತೆಯ ಬದುಕು ರಕ್ಷಿಸಿ’ ಎಂಬ ಧ್ಯೇಯ ವಾಕ್ಯದೊಂದಿಗೆ ಕಥೋಲಿಕ್ ಸಭಾ ಮಂಗಳೂರು ಪ್ರದೇಶ್, ಸಮಾನ ಮನಸ್ಕ ಸಂಘಟನೆಗಳ ವೇದಿಕೆಯ ನಿಯೋಗ ಮಾಧ್ಯಮ ಪ್ರತಿನಿಧಿಗಳ ಜತೆ ಸೋಮವಾರ ಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ, ಮಾಹಿತಿಯನ್ನು ಕಲೆಹಾಕಿತು.

ಈ ಸಂದರ್ಭದಲ್ಲಿ ಮಾತನಾಡಿದ ಫಾ. ಮನೋಹರ್ ಡಿಸೋಜಾ ಅವರು, ಪಾವೂರು ಉಳಿಯ ದ್ವೀಪದ ಜನರನ್ನು ಜೀವಂತ ಕೊಲ್ಲುವ ಹುನ್ನಾರ ಅಕ್ರಮ ಮರಳುಗಾರಿಕೆಯಿಂದ ಕಳೆದ ಹಲವು ವರ್ಷಗಳಿಂದ ನಡೆಯುತ್ತಿದೆ. ಇಲ್ಲಿನ ಜನರ ಜೀವಕ್ಕೆ ಅಪಾಯ ತಂದಿರುವ ಅಕ್ರಮ ಮರಳು ದಂಧೆಕೋರರ ವಿರುದ್ಧ ಕೊಲೆಯ ಆರೋಪ ಹೊರಿಸಿ ಶಿಕ್ಷೆ ಆಗಬೇಕಾಗಿದೆ. ಎಷ್ಟೋ ವರ್ಷಗಳಿಂದ ಇಲ್ಲಿನ ಈ ಸಮಸ್ಯೆ ಬಗ್ಗೆ ಜಿಲ್ಲಾಡಳಿತ ಸೇರಿದಂತೆ ಸಂಬಂಧಫಟ್ಟವರಿಗೆ ಮನವಿ ನೀಡಲಾಗುತ್ತಿದ್ದರೂ ಸ್ಪಂದನೆ ಸಿಕ್ಕಿಲ್ಲ. ಇಲ್ಲಿನ ಜನರಿಗೆ ಶಾಶ್ವತ ಪರಿಹಾರ ಬೇಕು ಎಂದು ಅವರು ಆಗ್ರಹಿಸಿದರು.

ಸ್ಥಳೀಯರಾದ ಗಿಲ್ಬರ್ಟ್ ಡಿಸೋಜಾ ಮಾತನಾಡಿ, ಅಕ್ರಮ ಮರಳು ದಂಧೆಕೋರರ ಜತೆ ಹೋರಾಟ ಮಾಡಿಕೊಂಡು ಹಲವು ವರ್ಷಗಳಿಂದ ನಾವು ಜೀವನ ಸಾಗಿಸುತ್ತಾ ಬಂದಿದ್ದೇವೆ. ಸುಮಾರು 100 ಎಕರೆಯಷ್ಟಿದ್ದ ದ್ವೀಪ ಪ್ರದೇಶ ಅಕ್ರಮ ಮರಳು ದಂಧೆಯಿಂದಾಗಿ ಪ್ರಸಕ್ತ ಅರ್ಧದಷ್ಟು ನೀರು ಪಾಲಾಗಿದೆ. ಕೆಲ ವರ್ಷಗಳ ಹಿಂದೆ ಎ.ಬಿ. ಇಬ್ರಾಹೀಂ ಅವರು ಜಿಲ್ಲಾಧಿಕಾರಿಯಾಗಿದ್ದಾಗ ಅಧಿಕಾರಿಗಳ ಜತೆ ಭೇಟಿ ನೀಡಿ, ವಳಚ್ಚಿಲ್, ಪಾವೂರು, ಗಾಡಿಗದ್ದೆ, ಸಹ್ಯಾದ್ರಿ ಕಾಲೇಜಿನ ಹಿಂಬಾಗ ಸೇರಿ ಮೂರು ಪ್ರದೇಶಗಳಲ್ಲಿ ಮರಳುಗಾರಿಕೆಯ ಧಕ್ಕೆಯನ್ನು ಬಂದ್ ಮಾಡಿ ನಿಷೇಧಾಜ್ಞೆ ಹೊರಡಿಸಿದ್ದರು. ಆ ಬಳಿಕ ಕೆಲ ವರ್ಷಗಳ ಕಾಲ ಮರಳು ದಂಧೆ ಸ್ಥಗಿತಗೊಂಡಿತ್ತು.

ಮತ್ತೆ ಕೆಲ ವರ್ಷಗಳಿಂದೀಚೆಗೆ ಆರಂಭವಾಗಿದ್ದು, ಈ ನಿಷೇಧಾಜ್ಞೆಯ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಕ್ರಮವಾಗುತ್ತಿಲ್ಲ. ಪ್ರಸಕ್ತ ದೊಡ್ಡ ಪ್ರಮಾಣದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಸಾವಿರಾರು ಸಂಖ್ಯೆಯಲ್ಲಿ ಮರಳುಗಾರಿಕೆಯ ಕಾರ್ಮಿಕರು ಬೆರಳೆಣಿಕೆಯಷ್ಟಿರುವ ಜನರ ಜತೆ ಸಂಘರ್ಷ, ಬೆದರಿಕೆ ಒಡ್ಡುವ ಕಾರ್ಯ ನಡೆಸುತ್ತಿದ್ದಾರೆ. ನಮ್ಮ ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು. ಭಯ ರಹಿತ ಜೀವನ ನಡೆಸಲು ನಮಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

ಪಾವೂರು ಉಳಿಯ ಪ್ರದೇಶಕ್ಕೆ ಅಡ್ಯಾರು ಮೂಲಕ ದೋಣಿಯಲ್ಲಿ ಸಾಗಿದ ನಿಯೋಗವು ದೋಣಿ ಮೂಲಕ ದ್ವೀಪದ ಸುತ್ತ ವೀಕ್ಷಿಸುತ್ತಿದ್ದ ವೇಳೆ ದ್ವೀಪದ ಕಳೆದ ಕೆಲ ವರ್ಷಗಳ ಹಿಂದೆ ಇದ್ದ ದ್ವೀಪ ಪ್ರದೇಶ ಸಾಕಷ್ಟು ಭೂಭಾಗ ಮರಳುಗಾರಿಕೆಯಿಂದ ಮಾಯವಾಗಿರುವುದು ಕಂಡು ಬಂದಿದೆ.

ಅಲ್ಲದೆ, ಹಾರೆಯ ಮೂಲಕ ದ್ವೀಪದ ಭಾಗವವನ್ನು ಕೊರೆದು ಮರಳು ತೆಗೆಯುತ್ತಿರುವ ಕುರುಹುಗಳೂ ಕಂಡು ಬಂದಿವೆ. ದೋಣಿಯೊಂದು ಹಗಲಲ್ಲೇ ಮರಳುಗಾರಿಕೆಗೆ ಆಗಮಿಸಿದ ದೃಶ್ಯವೂ ಮಾಧ್ಯಮ ಕ್ಯಾಮರಾಗಳಲ್ಲಿ ಸೆರೆಯಾಗಿದೆ,

ನೇತ್ರಾವತಿ ನದಿಯ ವಳಚ್ಚಿಲ್ ಪ್ರದೇಶದ ಧಕ್ಕೆಯಲ್ಲಿ ಕ್ರೇನ್ ಮೂಲಕ ವಾಹನಗಳಿಗೆ ಮರಳು ತುಂಬಿಸುತ್ತಿರುವ ದೃಶ್ಯವೂ ಕಂಡಿ ಬಂದಿದೆ. ದ್ವೀಪದ ಸುತ್ತಲ್ಲಿನ ಪ್ರದೇಶಗಳಲ್ಲಿ ಅಲ್ಲಲ್ಲಿ ಮರಳು ಸಂಗ್ರಹಿಸಿರುವುದೂ ಕಂಡು ಬಂದಿದ್ದು, ಪ್ರಾಕೃತಿಕವಾಗಿ ಸುಂದರವಾದ ತಾಣವೊಂದು ಅಕ್ರಮ ಮರಳುಗಾರಿಕೆಗೆ ನಾಶವಾಗುತ್ತಿರುವ ಬಗ್ಗೆ ನಿಯೋಗದ ಪ್ರತಿನಿಧಿಗಳು ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದರು.

No Comments

Leave A Comment