``````````````ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆ ,ಅಭಿಮಾನಿಗಳಿಗೆ "ಶ್ರೀಅನ೦ತವೃತದ"ಶುಭಾಶಯಗಳು......

ಆಂಧ್ರ ಪ್ರದೇಶದ ಸಿಎಂ ಆಗಿ ಚಂದ್ರಬಾಬು ನಾಯ್ಡು, ಸಚಿವರಾಗಿ ಪವನ್ ಕಲ್ಯಾಣ್ ಪ್ರಮಾಣ ವಚನ ಸ್ವೀಕಾರ

ಅಮರಾವತಿ: ಪ್ರಧಾನಿ ನರೇಂದ್ರ ಮೋದಿ, ಹಿರಿಯ ಬಿಜೆಪಿ ನಾಯಕರು ಮತ್ತು ಕೇಂದ್ರ ಸಚಿವರು ಭಾಗವಹಿಸಿದ್ದ ಸಮಾರಂಭದಲ್ಲಿ ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರು ನಾಲ್ಕನೇ ಅವಧಿಗೆ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸಿದರು.

ಜನಸೇನಾ ಮುಖ್ಯಸ್ಥ ಮತ್ತು ನಟ ಪವನ್ ಕಲ್ಯಾಣ್, ನಾಯ್ಡು ಅವರ ಪುತ್ರ ನಾರಾ ಲೋಕೇಶ್ ಸೇರಿದಂತೆ ಇತರರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಆಂಧ್ರಪ್ರದೇಶದ ರಾಜ್ಯಪಾಲ ಎಸ್ ಅಬ್ದುಲ್ ನಜೀರ್ ಅವರು ಚಂದ್ರಬಾಬು ನಾಯ್ಡು ಮತ್ತಿತರರಿಗೆ ಪ್ರಮಾಣ ವಚನ ಬೋಧಿಸಿದರು.

ನಾಯ್ಡು ಮತ್ತು ನಾರಾ ಲೋಕೇಶ್ ಅವರಲ್ಲದೆ ಟಿಡಿಪಿ ಶಾಸಕರಾದ ಕೆ ಅಚ್ಚಂನಾಯ್ಡು, ಪಿ ನಾರಾಯಣ, ಕೊಲ್ಲು ರವೀಂದ್ರ, ನಿಮ್ಮಲ ರಾಮ ನಾಯ್ಡು, ಅನಿತಾ ವಂಗಲಪುಡಿ, ಆನಂ ರಾಮನಾರಾಯಣ ರೆಡ್ಡಿ, ಕೊಲುಸು ಪಾರ್ಥಸಾರಥಿ, ಎನ್‌ಎಂಡಿ ಫಾರೂಕ್, ಪಯ್ಯಾವುಳ ಕೇಶವ್, ಎ ಸತ್ಯ ಪ್ರಸಾದ್, ಡೋಲಾ ಶ್ರೀ ಬಾಲ ವೀರಾಂಜನೇಯ ಸ್ವಾಮಿ, ಗೊಟ್ಟಿಪಾಟಿ ರವಿಕುಮಾರ್, ಗುಮ್ಮಿಡಿ ಸಂಧ್ಯಾ ರಾಣಿ, ಬಿಸಿ ಜನಾರ್ದನರೆಡ್ಡಿ, ಟಿಜಿ ಭರತ್, ಎಸ್ ಸವಿತಾ, ವಾಸಮ್‌ಶೆಟ್ಟಿ ಸುಭಾಷ್, ಕೊಂಡಪಲ್ಲಿ ಶ್ರೀನಿವಾಸ್ ಮತ್ತು ಮಂಡಿಪಲ್ಲಿ ರಾಮ್ ಪ್ರಸಾದ್ ರೆಡ್ಡಿ ಕೂಡ ಪ್ರಮಾಣ ವಚನ ಸ್ವೀಕರಿಸಿದರು.

ಜನಸೇನಾ ಪಕ್ಷದಿಂದ ನಾದೆಂಡ್ಲ ಮನೋಹರ್ ಮತ್ತು ಕಂದುಲ ದುರ್ಗೇಶ್, ಬಿಜೆಪಿ ಶಾಸಕ ಸತ್ಯಕುಮಾರ್ ಯಾದವ್ ಅವರು ಪವನ್ ಕಲ್ಯಾಣ್ ಅವರೊಂದಿಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಪ್ರಧಾನಿ ಮೋದಿ ಅಧಿಕಾರ ಸ್ವೀಕರಿಸಿದ ಚಂದ್ರಬಾಬು ನಾಯ್ಡು ಅವರನ್ನು ತಬ್ಬಿ ಶುಭ ಕೋರಿದರು.

ನಂತರ, ಪ್ರಧಾನಿ ತೆಲುಗು ಮೆಗಾಸ್ಟಾರ್ ಚಿರಂಜೀವಿ ಮತ್ತು ಪವನ್ ಕಲ್ಯಾಣ್ ಅವರ ಕೈಕುಲುಕಿ ಮಾತನಾಡಿದರು. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಒ ಪನ್ನೀರಸೆಲ್ವಂ, ತಮಿಳು ಸೂಪರ್‌ಸ್ಟಾರ್ ರಜನಿಕಾಂತ್ ಮತ್ತು ಅವರ ಪತ್ನಿ ಲತಾ ಅವರೊಂದಿಗೆ ವೇದಿಕೆಯ ಮೇಲೆ ಸಂಕ್ಷಿಪ್ತ ಸಂಭಾಷಣೆ ನಡೆಸಿದರು.

ಕೇಂದ್ರ ಸಚಿವರಾದ ಅಮಿತ್ ಶಾ, ನಿತಿನ್ ಗಡ್ಕರಿ ಮತ್ತು ಜೆಪಿ ನಡ್ಡಾ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಉಪಸ್ಥಿತರಿದ್ದರು. ಇದರೊಂದಿಗೆ ಮಾಜಿ ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು, ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಮತ್ತು ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಚಿರಂಜೀವಿ ಇದ್ದರು.

ಪವನ್ ಕಲ್ಯಾಣ್ ನೇತೃತ್ವದ ಪಕ್ಷಕ್ಕೆ ಮೂರು ಮತ್ತು ಬಿಜೆಪಿಗೆ ಒಂದು ಸಚಿವ ಸ್ಥಾನ ಸಿಕ್ಕಿದೆ. ಆಂಧ್ರಪ್ರದೇಶ ವಿಧಾನಸಭೆಯ ಸದಸ್ಯ ಬಲದ ಪ್ರಕಾರ (175), ಸಂಪುಟದಲ್ಲಿ ಸಿಎಂ ಸೇರಿದಂತೆ 26 ಸಚಿವರಿಗೆ ಅವಕಾಶವಿದೆ.

ವಿಜಯವಾಡದ ಹೊರವಲಯದ ಕೇಸರಪಲ್ಲಿಯಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಟಿಡಿಪಿ-ಜನಸೇನಾ-ಬಿಜೆಪಿ ಕಾರ್ಯಕರ್ತರ ಅಪಾರ ಜನಸ್ತೋಮ ನೆರೆದಿತ್ತು.

ಟಿಡಿಪಿ, ಬಿಜೆಪಿ ಮತ್ತು ಜನಸೇನಾ ಒಳಗೊಂಡಿರುವ ಎನ್‌ಡಿಎ ಆಂಧ್ರ ಪ್ರದೇಶದಲ್ಲಿ ಇತ್ತೀಚೆಗೆ ಏಕಕಾಲದಲ್ಲಿ ನಡೆದ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಒಟ್ಟು 164 ವಿಧಾನಸಭೆ ಮತ್ತು ಒಟ್ಟು 21 ಲೋಕಸಭೆ ಕ್ಷೇತ್ರಗಳಲ್ಲಿ ಜಯ ಸಾಧಿಸಿದೆ.
No Comments

Leave A Comment