![](https://i0.wp.com/karavalikirana.com/kan/wp-content/uploads/2024/05/Untitled-6-9.jpg?fit=504%2C281&ssl=1)
ಮಂಗಳೂರು: ಪೂರ್ವ ಮುಂಗಾರು – ಹೆಚ್ಚುತ್ತಿರುವ ಡೆಂಗ್ಯೂ
ಮಂಗಳೂರು : ಮುಂಗಾರು ಪೂರ್ವದಲ್ಲಿ ಬಿಟ್ಟು ಬಿಟ್ಟು ಸುರಿಯುವ ಸುರಿಯುತ್ತಿರುವ ಕಾರಣದಿಂದಾಗಿ ದ.ಕ. ಜಿಲ್ಲೆಯಲ್ಲಿ ಅಪಾಯಕಾರಿ ಡೆಂಗ್ಯೂ , ಮಲೇರಿಯಾ ಕಾಯಿಲೆಗೆ ಕಾರಣವಾಗುವ ಸೊಳ್ಳೆಗಳ ಹೆಚ್ಚಳಕ್ಕೆ ಪೂರಕ ವಾತಾವರಣವನ್ನುಂಟು ಮಾಡಿದೆ.
ರಾತ್ರಿ ಸ್ವಲ್ಪ ಹೊತ್ತು ಮಳೆ ಹಗಲು ಬಿಸಿಲಿನ ವಾತಾವರಣ ಕೆಲವು ದಿನಗಳಿಂದ ಇದೆ. ಮಳೆ ಬಂದಿದ್ದರೂ ಕುಡಿಯುವ ನೀರಿಗೆ ಸಮಸ್ಯೆ ಇದೆ. ನದಿಯಲ್ಲಿ ಸ್ವಲ್ಪ ನೀರು ಏರಿಕೆಯಾಗಿದ್ದರೂ, ಗ್ರಾಮೀಣ ಪ್ರದೇಶಗಳಲ್ಲಿರುವ ಕೆರೆ, ಬಾವಿಗಳಲ್ಲಿ ಕೆಲವಡೆ ಇದ್ದ ನೀರೂ ಕಲುಶಿತಗೊಂಡಿದೆ. ಚರಂಡಿಗಳಲ್ಲಿ ಅಲ್ಲಲ್ಲಿ ನೀರು ನಿಂತ ಹಿನ್ನೆಲೆಯಲ್ಲಿ ಸಾಂಕ್ರಾಮಿಕ ರೋಗ ಹರಡುವ ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗಿದೆ.
ವಾತಾವರಣದಲ್ಲಿನ ವೈಪರಿತ್ಯದಿಂದಾಗಿ ಬ್ಯಾಕ್ಟೀರಿಯಾ, ವೈರಸ್ಗಳ ಬೆಳವಣಿಗೆ ಹೆಚ್ಚಾಗುತ್ತದೆ. ಜನರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾದರೆ ಜನರು ಕಾಯಿಲೆ ಬೀಳುವ ಅಪಾಯವಿದೆ. ಹೀಗಾಗಿ ಎಚ್ಚರ ಅಗತ್ಯ. ಎಳೆನೀರು ಚಿಪ್ಪು, ತೆಂಗಿನ ಚಿಪ್ಪು, ಟಯರ್, ಟ್ಯೂಬ್, ಹೂಕುಂಡ, ತಾರಸಿ, ತೆರೆದ ಟ್ಯಾಂಕ್ಗಳಲ್ಲಿ ಸೊಳ್ಳೆ ಉತ್ಪತ್ತಿಯಾಗುತ್ತವೆ. ನೀರು ಸಂಗ್ರಹವಾಗುವ ಯಾವುದೇ ಪ್ರದೇಶಗಳಲ್ಲಿ ಡೆಂಗ್ ಸೊಳ್ಳೆಗಳು ಸಂತಾನೋತ್ಪತ್ತಿ ಮಾಡ ಬಲ್ಲವು. ಹಾಗಾಗಿ ನೀರು ನಿಲ್ಲದಂತೆ ಎಚ್ಚರ ವಹಿಸುವುದು ಸಾರ್ವಜನಿಕರ ಕರ್ತವ್ಯವಾಗಿದೆ.
ಶಾಲಾ ಕಾಲೇಜುಗಳು ಇನ್ನು ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ. ಅಷ್ಟು ಹೊತ್ತಿಗೆ ಮುಂಗಾರು ಮಳೆ ಆಗಮನ ವಾಗುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಎಚ್ಚರವಹಿಸಬೇಕಾಗಿದೆ ಎಂದು ಜಿಲ್ಲಾ ರೋಗ ವಾಹಕ ಮತ್ತು ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ನವೀನ್ಚಂದ್ರ ಕುಲಾಲ್ ತಿಳಿಸಿದ್ದಾರೆ. ಈ ವರ್ಷ ಡೆಂಗ್ ಮತ್ತು ಮಲೇರಿಯಾ ಪ್ರಕರಣಗಳು ಕಳೆದ ವರ್ಷಕ್ಕಿಂತ ಸ್ವಲ್ಪ ಜಾಸ್ತಿಯಾಗಿದೆ. ಡೆಂಗ್ ,ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಹಾಗೂ ಸ್ಥಳೀಯಾಡಳಿತ ಸಂಸ್ಥೆ ಜಂಟಿಯಾಗಿ ಸಾಕಷ್ಟು ಮುಂಜಾಗೃತಾ ಕ್ರಮಗಳನ್ನು ವಹಿಸುತ್ತವೆ. ಸಾರ್ವಜನಿಕರಿಗೆ ಸೂಕ್ತ ಜಾಗೃತಿಯನ್ನೂ ಮೂಡಿಸಲಾಗುತ್ತಿದೆ ಎಂದು ಡಾ.ನವೀನ್ ಚಂದ್ರ ಕುಲಾಲ್ ತಿಳಿಸಿದ್ದಾರೆ.